ದಿನೇಶ್ ಇರಾ | Dec 23, 2012
ಮಂಗಳೂರು: ಸರಕಾರದ ಕೆಲಸ ದೇವರ ಕೆಲಸ ಎಂಬ ನಾಣ್ಣುಡಿ ಚಾಲ್ತಿಯಲ್ಲಿದೆ. ಆದರೆ, ದೇವರು ಒಪ್ಪುವ ರೀತಿಯಲ್ಲಿ ಕೆಲಸ ಮಾಡಿದರೂ ಕೂಡ ಸರಕಾರ ಮಾತ್ರ ಕಣ್ಣು ತೆರೆಯುತ್ತಿಲ್ಲ. ಜಿಲ್ಲಾ ಪಂಚಾಯತ್ ವತಿಯಿಂದ ದ.ಕ. ಜಿಲ್ಲೆಯ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಗೆ ಇನ್ನೂ ಕೂಡ ಹಣ ಬಿಡುಗಡೆ ಮಾಡದೆ ಸಣ್ಣಪುಟ್ಟ ಗುತ್ತಿಗೆದಾರರನ್ನು ಪರದಾಡುವಂತೆ ಮಾಡಿದೆ. ದೇವರ ಕೆಲಸವನ್ನು ನಿರ್ವಹಿಸಿದ ಗುತ್ತಿಗೆದಾರರು ಪ್ರಸ್ತುತ ಅನಾಥರಾಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಗುತ್ತಿಗೆದಾರರು ನಿರ್ವಹಿಸಿದ ಸಿವಿಲ್ ಕಾಮಗಾರಿಗೆ 12.95 ಕೋಟಿ ರೂ. ಪಾವತಿಗೆ ಬಾಕಿಯಿದೆ. ಟೆಂಡರ್ ಪ್ರಕ್ರಿಯೆಯಂತೆ ಕೆಲಸ ನಿರ್ವಹಿಸಿದ ಜಿಲ್ಲೆಯ ಸುಮಾರು 200ಕ್ಕೂ ಅಧಿಕ ಗುತ್ತಿಗೆದಾರರು ಹಣಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿಭಟನೆಗೆ ನಿರ್ಧಾರ
ಈ ಕುರಿತು ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಆದಿಯಾಗಿ ಜನಪ್ರತಿನಿಧಿಗಳಿಗೆ, ಸಂಬಂಧಪಟ್ಟ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಬರಬೇಕಾದ ಹಣ ಬಾರದ ಕಾರಣದಿಂದ ಅಸಹಾಯಕರಾಗಿದ್ದಾರೆ. ಮತ್ತು ಡಿ. 31ರ ಒಳಗೆ ಬಾಕಿ ಇರುವ ಬಿಲ್ಲುಗಳ ಹಣ ಬಿಡುಗಡೆಯಾಗದೆ ಇದ್ದಲ್ಲಿ ದ.ಕ. ಜಿಲ್ಲೆಯಾದ್ಯಂತ ಕೆಲಸ ಸ್ಥಗಿತಗೊಳಿಸಿ ಪ್ರತಿಭಟಿಸಲು ನಿರ್ಧರಿಸಲಾಗಿದೆ.
2009-10ನೇ ಸಾಲಿನ ಗ್ರಾಮೀಣ ಸಂಪರ್ಕ ಯೋಜನೆಯ ಅಡಿಯಲ್ಲಿ ದ.ಕ. ಜಿಲ್ಲೆಯಲ್ಲಿ 5054 ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿ ನಡೆಸಲಾಗಿದೆ. ಇದರ ಒಟ್ಟು ಹಣದಲ್ಲಿ ಇನ್ನೂ ಕೂಡ 53.93 ಲಕ್ಷ ರೂ. ಬಿಡುಗಡೆಯಾಗಿಲ್ಲ. ಜತೆಗೆ ಪ್ರಸಕ್ತ ಸಾಲಿನಲ್ಲಿ 3,054 ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರ ಒಟ್ಟು ಹಣದ ಪೈಕಿ 667 ಲಕ್ಷ ರೂ. ಇನ್ನೂ ಕೂಡ ಗುತ್ತಿಗೆದಾರರಿಗೆ ದೊರೆತಿಲ್ಲ. ಮೊದಲೇ ಅಲ್ಲಿಂದ ಇಲ್ಲಿಂದ ಸಾಲ ಮಾಡಿ ಕೆಲಸ ನಿರ್ವಹಿಸುವ ಗುತ್ತಿಗೆದಾರರಿಗೆ ಹಣ ದೊರೆಯದೆ ಇದ್ದಲ್ಲಿ ಮುಂದಿನ ಕಾಮಗಾರಿಗಳ ಬಗ್ಗೆ ಹೇಗೆ ಧೈರ್ಯ ತೆಗೆದುಕೊಳ್ಳಬೇಕೋ ಎಂಬ ಭಯ ಕಾಡುತ್ತಿದೆ ಎನ್ನುತ್ತಾರೆ ದ.ಕ. ಜಿಲ್ಲಾ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಇಬ್ರಾಹಿಂ ಮಂಚಿ.
ಪರದಾಟ
ಇನ್ನು 12ನೇ ಹಣಕಾಸು ಯೋಜನೆಯಲ್ಲಿ ಕಟ್ಟಡಗಳ ದುರಸ್ತಿಗೆ ಸಂಬಂಧಿಸಿ 59.08 ಲಕ್ಷ ರೂ. ಗುತ್ತಿಗೆದಾರರಿಗೆ ಪಾವತಿಯಾಗಿಲ್ಲ. ಕೆರೆಗಳ ಪುನಶ್ಚೇತನದ ಕೆಲಸ ನಡೆದರು ಕೂಡ 500 ಲಕ್ಷ ರೂ. ಗುತ್ತಿಗೆದಾರರಿಗೆ ಸರಕಾರ ನೀಡದೆ ಅವರ ಮುಂದಿನ ಕೆಲಸವನ್ನೇ ಬಂದ್ ಮಾಡಿಸುವ ಸ್ಥಿತಿಯನ್ನು ನಿರ್ಮಾಣವಾಗಿದೆ. ನಬಾರ್ಡ್ ಯೋಜನೆಯಲ್ಲಿ ಕೈಗೊಂಡ ಫೌÅಢಶಾಲಾ ಕಟ್ಟಡದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಅದರ ಬಾಬ್ತು 15 ಲಕ್ಷ ರೂ. ದೊರೆತಿಲ್ಲ. ಹೀಗೆ ಒಟ್ಟು 1295.01 ಲಕ್ಷ ರೂ(12.95 ಕೋಟಿ) ಅನುದಾನ ಬಿಡುಗಡೆಯಾಗದ ಕಾರಣದಿಂದ, ಇದ್ದ ಹಣದಲ್ಲಿ ಕೆಲಸ ಮಾಡಿದ ಗುತ್ತಿಗೆದಾರರು ಈಗ ಪರದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ಅನುದಾನ ಬಿಡುಗಡೆಗೊಳ್ಳಲು ಬಾಕಿ ಇರುವ ವಿವರ
ಲೆಕ್ಕ ಶೀರ್ಷಿಕೆ ಬಿಡುಗಡೆಗೆ ಬಾಕಿ ಇರುವ ಮೊತ್ತ(ಲಕ್ಷಗಳಲ್ಲಿ)
3054 ರಸ್ತೆ ಮತ್ತು ಸೇತುವೆ(ಯೋಜನೆ) 667.00
5054ರಸ್ತೆ ಮತ್ತು ಸೇತುವೆ(2009-10ನೇ ಸಾಲಿನ ಗ್ರಾಮೀಣ ಸಂಪರ್ಕ ಯೋಜನೆ) 53.93
12ನೇ ಹಣಕಾಸು ಕಟ್ಟಡಗಳ ದುರಸ್ತಿ 59.08
ಕೆರೆಗಳ ಪುನಶ್ಚೇತನ 500.00
ಆರ್ಐಡಿಎಫ್ ಫೌÅಢಶಾಲಾ ಕಟ್ಟಡಗಳು 15.00
ಒಟ್ಟು ಮೊತ್ತ 1295.01
ನಮ್ಮ ಪಾಡು ಪರಿಹರಿಸುವವರಾರು?
ಅನುದಾನ ಬಿಡುಗಡೆಯಾಗದೆ ಗುತ್ತಿಗೆದಾರರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಸಾಲ ಮಾಡಿ ನಡೆಸಿದ ಕೆಲಸದ ಹಣ ಸಿಗದೆ ಪರದಾಡುತ್ತಿದ್ದಾರೆ. ಈ ಸಂಬಂಧ ಜನಪ್ರತಿನಿಧಿಗಳಿಂದ ಆರಂಭವಾಗಿ ಅಧಿಕಾರಿಗಳಿಗೂ ಮನವಿ ನೀಡಿ ಸಾಕಾಗಿ ಹೋಗಿದೆ. ಬಡ ಗುತ್ತಿಗೆದಾರ ದಿನದ ಜೀವನ ನಿರ್ವಹಣೆಗೂ ಹೆಣಗಾಡುವ ಸ್ಥಿತಿ ಇದೆ. ಆ ಕೆಲಸ ಮಾಡಿ, ಈ ಕೆಲಸ ಮಾಡಿ ಎಂದು ಆಜ್ಞೆ ನೀಡುವವರು ಜಾಸ್ತಿ ಇದ್ದಾರೆಯೇ ಹೊರತು ನಮ್ಮ ಪಾಡನ್ನು ಕೇಳುವವರು ಯಾರು ಇಲ್ಲ. ಡಿ. 31ರ ಒಳಗೆ ಹಣ ಪಾವತಿಯಾಗದಿದ್ದರೆ, ಜಿಲ್ಲೆಯಾದ್ಯಂತ ಕೆಲಸವನ್ನೇ ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ.
- ವಿಶ್ವನಾಥ ಶೆಟ್ಟಿ, ಅಧ್ಯಕ್ಷರು ದ.ಕ. ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘ