ಮೈಸೂರು: ದೇಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿ ರಾಷ್ಟ್ರಾಧ್ಯಂತ ನಡೆಯುತ್ತಿರುವ ಹೋರಾಟದ ಬೆನ್ನಲ್ಲೆ ನಗರದಲ್ಲಿ ವಿವಿಧ ಸಂಘಟನೆಗಳು ಭಾನುವಾರವೂ ಬೀದಿಗಿಳಿದು ಹೋರಾಟ ನಡೆಸಿದವು.ಕುವೆಂಪುನಗರದ ಅಪೋಲೋ ಆಸ್ಪತ್ರೆ ಹಾಗೂ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಪ್ರತ್ಯೇಕ ಪ್ರತಿಭಟನೆ ಹಾಗೂ ಮೌನ ಮೆರವಣಿಗೆ ನಡೆಸಿದ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಇನ್ಫೋಸಿಸ್ ಉದ್ಯೋಗಿಗಳು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.ಮೇಣದ ಬತ್ತಿ ಮೆರವಣಿಗೆ: ಮೈಸೂರು ಯೂತ್ ಫೋರಂ ಹಾಗೂ ವಾಯ್ಸ ಆಫ್ ಮೈಸೂರು ಸಂಘದ ಆಶ್ರಯದಲ್ಲಿ ಅಪೋಲೋ ಆಸ್ಪತ್ರೆ ಬಳಿಯಿಂದ ನ್ಯಾಯಾಲಯದ ಎದುರಿನ ಗಾಂಧಿ ಪ್ರತಿಮೆವರೆಗೆ ಮೇಣದ ಬತ್ತಿ ಹಿಡಿದು ಮೌನ ಮೆರವಣಿಗೆ ನಡೆಸಿ ಇಂತಹ ದುಷ್ಕೃತ್ಯವೆಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಅತ್ಯಾಚಾರಕ್ಕೊಳಗಾದ ಯುವತಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ಸಂಘಟನೆಯ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಐನೂರಕ್ಕೂ ಹೆಚ್ಚು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಇನ್ಫೋಸಿಸ್ ಉದ್ಯೋಗಿಗಳ ಪ್ರತಿಭಟನೆ: ದೆಹಲಿಯಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಬೀದಿಗಿಳಿದ ಇನ್ಫೋಸಿಸ್ ಉದ್ಯೋಗಿಗಳು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ವಿವಿಧ ಘೋಷಣಾ ಫಲಕಗಳನ್ನು ಹಿಡಿದುಪ್ರತಿಭಟನೆ ನಡೆಸಿದ ಉದ್ಯೋಗಿಗಳು, ಮೇಣದ ಬತ್ತಿ ಬೆಳಗಿಸಿ ಅತ್ಯಾಚಾರವೆಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.