Udayavani | Dec 23, 2012
ಉಡುಪಿ: ರಾಜ್ಯ ಸರಕಾರ ಆರಂಭಿಸಿದ 'ಸಕಾಲ' ಯೋಜನೆಯನ್ನು ಕೇಂದ್ರದ ತಂಡ ಅಧ್ಯಯನ ನಡೆಸಿದೆ. ಸದ್ಯವೇ ಇದು ಕೇಂದ್ರದ ಮಟ್ಟದಲ್ಲಿಯೂ ಜಾರಿಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಉಡುಪಿ ಪುರಭವನದಲ್ಲಿ ರವಿವಾರ ನಡೆದ ಜಿಲ್ಲಾ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರದ ಇಂತಹ ಸಾಧನೆಗಳು ಪಕ್ಷದ ಚುನಾವಣಾ ಪ್ರಣಾಳಿಕೆಗಳ ಜಾರಿಯೇ ಹೊರತು ವೈಯಕ್ತಿಕ ಸಾಧನೆಯಲ್ಲ. ಇದನ್ನು ನಾನು ಮಾಡಿದ್ದು ಎಂದು ಹೇಳಲಾಗದು. ಇದು ಪಕ್ಷದ ನಿರ್ದೇಶನದಂತೆ ಮಾಡಲಾಗಿದೆ. ಈಗ ಕೆಲವರು ತಾನು ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಗುಜರಾತ್ ಚುನಾವಣೆ ಫಲಿತಾಂಶ ಇಡೀ ದೇಶಕ್ಕೆ ದಿಕ್ಸೂಚಿಯಾಗಿದೆ. ಅಲ್ಲಿನ ಅಭಿವೃದ್ಧಿ ಮತ್ತು ಭ್ರಷ್ಟಾಚಾರ ವಿರೋಧಿ ನೀತಿ ದೇಶಕ್ಕೇ ಮಾದರಿಯಾಗಿದೆ. ಕರ್ನಾಟಕದ ಮೇಲೂ ಗುಜರಾತ್ ಮಾದರಿ ಪರಿಣಾಮ ಬೀರಲಿದೆ. ನಮ್ಮ ರಾಜ್ಯದಲ್ಲಿ ಇದುವರೆಗೆ ಆದ ಅಭಿವೃದ್ಧಿ ಬಿಜೆಪಿಗೆ ಬಲವಾಗಿದೆ ಎಂದು ಅವರು ಹೇಳಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ನಾಲ್ಕೂವರೆ ವರ್ಷಗಳಲ್ಲಿ ಆದಷ್ಟು ಅಭಿವೃದ್ಧಿ ಹಿಂದೆಂದೂ ಆಗಿಲ್ಲ. 23,000 ಡಿ ದರ್ಜೆ ನೌಕರರನ್ನು ಖಾಯಂ ಮಾಡಲಾಗಿದೆ. ಇದಕ್ಕೆ 170 ಕೋ. ರೂ. ವಿನಿಯೋಗವಾಗುತ್ತಿದೆ. ಗ್ರಾಮಸಹಾಯಕರ ಗೌರವಧನ 3,500 ರೂ.ನಿಂದ 10,000 ರೂ.ಗೆ ಏರಿಸಲಾಗಿದೆ. ಹಕ್ಕುಪತ್ರ ಇಲ್ಲದವರಿಗೆ ಹಕ್ಕುಪತ್ರ ನೀಡಲು ಯತ್ನಿಸಿದರೂ ರಾಜ್ಯಪಾಲರು ಅವಕಾಶ ಕೊಟ್ಟಿಲ್ಲ ಎಂದು ಹೇಳಿದರು.
ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಮೆಂಡನ್, ರಾಜ್ಯ ಯುವಮೋರ್ಚಾ ಅಧ್ಯಕ್ಷ ವಿ. ಸುನೀಲ್ಕುಮಾರ್ ಮಾತನಾಡಿದರು.
ನಾಯಕರಾದ ನಳಿನ್ಕುಮಾರ್ ಕಟೀಲು, ಯಶಪಾಲ್ ಸುವರ್ಣ, ಹರಿಮಕ್ಕಿ ರತ್ನಾಕರ ಶೆಟ್ಟಿ, ಮನೋಹರ ಕಲ್ಮಾಡಿ, ರೇಶ್ಮಾ ಉದಯ ಶೆಟ್ಟಿ, ರವಿ ಅಮೀನ್, ಗೀತಾಂಜಲಿ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಕೆ. ಉದಯಕುಮಾರ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಯುವಮೋರ್ಚಾ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ವಂದಿಸಿದರು.
ಚುನಾವಣಾ ರಣತಂತ್ರ
ರಾಜ್ಯದಲ್ಲಿ ಮೂರು ತಿಂಗಳಲ್ಲಿ ಎದುರಾಗುವ ಚುನಾವಣೆಗೆ ರಣತಂತ್ರ ರೂಪಿಸಲಾಗುತ್ತಿದೆ. ಸುಮಾರು 140 ಸ್ಥಾನಗಳಲ್ಲಿ ಬಿಜೆಪಿ ನೇರ ಪೈಪೋಟಿಯನ್ನು ಕಾಂಗ್ರೆಸ್ ನೀಡಿದರೆ, 35 - 40 ಸ್ಥಾನಗಳಲ್ಲಿ ಜೆಡಿಎಸ್ ಸ್ಪರ್ಧೆ ನೀಡಲಿದೆ. ಸುಮಾರು 20 - 25 ಸ್ಥಾನಗಳಲ್ಲಿ ಸಣ್ಣಪುಟ್ಟ ಪಕ್ಷಗಳು ಪೈಪೋಟಿ ನೀಡಲಿವೆ ಎಂದು ಡಿ.ವಿ. ಸದಾನಂದ ಗೌಡ ವಿಶ್ಲೇಷಿಸಿದರು.
ಆಂತರಿಕ ಕಚ್ಚಾಟದಿಂದ ನಲುಗುತ್ತಿರುವ ಕಾಂಗ್ರೆಸ್ ವಿರೋಧ ಪಕ್ಷವಾಗಿಯೂ ಕಾರ್ಯನಿರ್ವಹಿಸಲು ವಿಫಲವಾಗಿದೆ. ಅಧಿವೇಶನದಲ್ಲಿ ಚರ್ಚೆಗೂ ಅವಕಾಶ ಕೊಡುತ್ತಿಲ್ಲ. ಕಾಂಗ್ರೆಸ್ನ ಗಾಜಿನ ಮನೆ ಚೂರುಗಳು ಅಲ್ಲಿಯೇ ಇವೆ. ನಮ್ಮಲ್ಲಿದ್ದ ಚೂರುಗಳನ್ನು ಹೊರಗೆ ಹಾಕಿದ್ದೆವೆ ಎಂದರು.