ಹೊಸದಿಲ್ಲಿ : ದಿಲ್ಲಿ ಸಾಮೂಹಿಕ ಅತ್ಯಾಚಾರ ಘಟನೆ ಕುರಿತ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿರುವಂತೆಯೇ, ಸರ್ವಪಕ್ಷ ಸಭೆ ಕರೆಯುವಂತೆ ಸರಕಾರಕ್ಕೆ ಬಿಜೆಪಿ ಆಗ್ರಹಿಸಿದೆ ಮತ್ತು ಕಾನೂನು ಮತ್ತು ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಒತ್ತಾಯಿಸಿದೆ.ಡಿ. 16ರ ರವಿವಾರ ರಾತ್ರಿ ಚಲಿಸುವ ಬಸ್ಸಿನಲ್ಲಿ 23ರ ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಳಿಕ ಉದ್ಬವಿಸಿರುವ ಪರಿಸ್ಥಿತಿಯನ್ನು ತಿಳಿಗೊಳಿಸಲು ಸರ್ವ ಪಕ್ಷ ಸಭೆ ಕರೆಯುವಂತೆ ತಾನು ಗೃಹ ಸಚಿವ ಸುಶೀಲ್ಕುಮಾರ್ ಶಿಂಧೆ ಅವರೊಂದಿಗೆ ಮಾತನಾಡಿರುವೆ ಎಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ತಿಳಿಸಿದರು.ಹಿಂಸೆಗಿಳಿಯಬೇಡಿ, ಸಮಸ್ಯೆಗೆ ಹಿಂಸೆ ಪರಿಹಾರವಲ್ಲ. ಇದು ನಮ್ಮ ದೇಶ, ಇದು ನಮ್ಮ ಸಮಸ್ಯೆ. ಖಚಿತವಾಗಿಯೂ ನಾವು ಪರಿಹಾರ ಹುಡುಕುತ್ತೇವೆ ಎಂದು ಸುಷ್ಮಾ ಸ್ವರಾಜ್ ಯುವ ಜನತೆಗೆ ಮನವಿ ಮಾಡಿದರು.ನನ್ನ ಯುವ ಸ್ನೇಹಿತರೇ, ನಿಮ್ಮ ಭಾವನೆಗಳನ್ನು ಗೌರವಿಸುತ್ತೇವೆ. ನಿಮ್ಮ ಕೋಪ ಸಹಜವಾದುದು. ನಮಗೆ ಸ್ವಲ್ಪ ಸಮಯ ಕೊಡಿ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.