ಸಿಂದಗಿ, ಇಂಡಿ, ಮುದ್ದೇಬಿಹಾಳ, ಬಸವನಬಾಗೇವಾಡಿ ಮತ್ತು ಬಿಜಾಪುರ - ಹೀಗೆ ಬರೇ ಐದು ತಾಲೂಕುಗಳನ್ನು ಮಾತ್ರ ತನ್ನಲ್ಲಿರಿಸಿಕೊಂಡಿದೆ ಬಿಜಾಪುರ ಜಿಲ್ಲೆ.

ಕೃಷ್ಣಾ , ಭೀಮಾ, ಮಲಪ್ರಭಾ, ಘಟಪ್ರಭಾ ಮತ್ತು ಡೋಣಿ ನದಿಗಳನ್ನೊಳಗೊಂಡ ಬಿಜಾಪುರ ಜಿಲ್ಲೆ ದಕ್ಷಿಣದ ಪಂಜಾಬ್ ಎಂದೇ ಕರೆಸಿಕೊಂಡಿತ್ತು.
ಬಿಜಾಪುರ ಜಿಲ್ಲೆಯ ಪ್ರವಾಸವನ್ನು ಆರಂಭಿಸುವ ಮುನ್ನ ಈ ಜಿಲ್ಲೆ ಭೌಗೋಳಿಕ ಸ್ವರೂಪವನ್ನು ಅರಿಯುವುದು ಅಗತ್ಯವಾಗುತ್ತದೆ. ಅವಿಭಜಿತ ಬಿಜಾಪುರ ಜಿಲ್ಲೆಯಲ್ಲಿ ಹನ್ನೊಂದು ತಾಲೂಕುಗಳಿದ್ದುವು. 1997ರಲ್ಲಿ ಜಿಲ್ಲೆಗಳ ಪುನರ್ ವಿಂಗಡನೆಯಾಗಿ ಆರು ತಾಲೂಕುಗಳನ್ನು ಬಾಗಲಕೋಟೆ ಜಿಲ್ಲೆಗೆ ಬಿಟ್ಟುಕೊಟ್ಟು , ಸಿಂದಗಿ, ಇಂಡಿ, ಮುದ್ದೇಬಿಹಾಳ, ಬಸವನಬಾಗೇವಾಡಿ ಮತ್ತು ಬಿಜಾಪುರ - ಹೀಗೆ ಬರೇ ಐದು ತಾಲೂಕುಗಳನ್ನು ಮಾತ್ರ ತನ್ನಲ್ಲಿರಿಸಿಕೊಂಡಿದೆ ಬಿಜಾಪುರ ಜಿಲ್ಲೆ.

ಉತ್ತರದ ಪಂಜಾಬಿನಂತೆ ಇಲ್ಲಿಯೂ ಐದು ನದಿಗಳು ಹರಿಯುತ್ತಿದ್ದವು. ಕೃಷ್ಣಾ , ಭೀಮಾ, ಮಲಪ್ರಭಾ, ಘಟಪ್ರಭಾ ಮತ್ತು ಡೋಣಿ ನದಿಗಳನ್ನೊಳಗೊಂಡ ಈ ಜಿಲ್ಲೆ ದಕ್ಷಿಣದ ಪಂಜಾಬ್ ಎಂದೇ ಕರೆಸಿಕೊಂಡಿತ್ತು. ಅಪಾರ ಜಲಸಂಪತ್ತು ಹೊಂದಿದ ಭೂ ಪ್ರದೇಶ, ಫಲವತ್ತಾದ ನೆಲವೆಲ್ಲ ಬಾಗಲಕೋಟೆ ಜಿಲ್ಲೆಗೆ ಸೇರ್ಪಡೆಯಾಗಿ ಇದು ಈಗ ಬರೇ ಬರದ ನಾಡು, ಬಿಸಿಲ ಗೂಡು.
ಕಡಿಮೆ ಪ್ರಮಾಣದಲ್ಲಿ ಮಳೆ, ಭಯಂಕರ ಬಿಸಿಲು, ತುಸು ತಂಪು ವಾತಾವರಣ ಹೊಂದಿರುವ ಜಿಲ್ಲೆಯಿದು. ಡೋಣಿ-ಕೊಳ್ಯದ ಪ್ರದೇಶದಲ್ಲಿ ಜೋಳ, ಸಜ್ಜೆ , ಮೆಕ್ಕೆಜೋಳ, ದ್ವಿದಳ ಧಾನ್ಯವನ್ನು ಹೆಚ್ಚಾಗಿ ಬೆಳೆಯುವರು. ನೀರಾವರಿ ಅನುಕೂಲವಿರುವ ರೈತರು ದ್ರಾಕ್ಷಿ , ದಾಳಿಂಬೆ, ಬಾಳೆ, ಚಿಕ್ಕು, ನೆಲಗಡಲೆ (ಶೇಂಗಾ), ಕುಸುಬಿ, ಹತ್ತಿ, ಗೋಧಿ, ಕಡಲೆ, ತರಕಾರಿಗಳನ್ನು ಬೆಳೆಯುವರು. "ಡೋಣಿ ಬೆಳೆದರೆ ಓಣೆಲ್ಲಾ ಜೋಳ' ಎಂಬ ಮಾತು ಇಲ್ಲಿ ಚಲಾವಣೆಯಲ್ಲಿದೆ.

ಮೂಲ ಬಿಜಾಪುರ ಎರಡೂವರೆ ಮೈಲು ದೂರ ವಿಸ್ತಾರವಾಗಿದ್ದು , ಅದರ ಸುತ್ತೆಲ್ಲಾ ಆರೂವರೆ ಮೈಲು ಉದ್ದವಾದ ಸಿಡಿಲಿಗೂ ಸಿಡಿಯದ ಕಲ್ಲಿನ ಕೋಟೆಯಿರುವುದನ್ನು , ಅದಕ್ಕೆ ಹೊಂದಿಕೊಂಡಿರುವ ಅಗಸೆ ಬಾಗಿಲುಗಳು ಬುರುಜುಗಳು ಅದರ ಮೇಲೆ ತಣ್ಣಗೆ ಮಲಗಿರುವ ತೋಪುಗಳನ್ನು ಇಂದಿಗೂ ಕಾಣಬಹುದು.

"ಆದಿಲ್ಶಾಹಿ' ಅರಸರು ಈ ನೆಲವನ್ನು ಬಹುಕಾಲ ಆಳಿದ ಪರಿಣಾಮವಾಗಿ ಇಂದಿಗೂ ಇಲ್ಲಿ ದಖನಿ, ಉರ್ದು, ಪರ್ಶಿಯನ್ ಭಾಷೆಗಳನ್ನಾಡುವ ಜನರನ್ನು ಕಾಣಬಹುದು. ಇವರೊಂದಿಗೆ ಕನ್ನಡ, ಮರಾಠಿ, ಹಿಂದಿ ಭಾಷೆಗಳನ್ನಾಡುವ ಜನಸಮುದಾಯವನ್ನು ನೋಡಬಹುದು.