ಬೇಕಲ ಕೋಟೆಗೆ ಮಾಸ್ಟರ್ ಪ್ಲಾನ್
ಕಾಸರಗೋಡು ಜಿಲ್ಲಾ ಪ್ರವಾಸಗೈವವರಿಗೆ ಸುಂದರ ಬೇಕಲ ಕೋಟೆಯ ಮಾಸ್ಟರ್ ಪ್ಲಾನ್ನಿಂದ ಇನ್ನಷ್ಟು ವೀಕ್ಷಣೆಯ ಥ್ರಿಲ್ ಸಿಗಲಿದೆ.
ಕಾಸರಗೋಡಿನ ಅತೀ ಪ್ರಧಾನ ಪ್ರವಾಸಿ ಮತ್ತು ಚಾರಿತ್ರಿಕ ರಾಯಭಾರಿ ಎಂದು ಕರೆಯಬಹುದಾಗಿರು ಬೇಕಲ ಕೋಟೆ ಈಗ ನವವಧುವಿನಂತೆ ಶೃಂಗಾರಗೊಳ್ಳುತ್ತಿದೆ.

ಕಾಸರಗೋಡು ನಗರದಿಂದ 12 ಕಿ.ಮೀ. ದೂರದಲ್ಲಿರುವ ಈ ವಿಶಾಲ ಮತ್ತು ಅತ್ಯಾಕರ್ಷಕ ಕೋಟೆಯು ಸಮುದ್ರಕ್ಕೆ ತಾಗಿಕೊಂಡಿದೆ. ಇದರ ರಚನೆ ಒಂದು ವಿಸ್ಮಯ. ನಮ್ಮ ಹಿರಿಯರ ತಾಂತ್ರಿಕ ಚತುರತೆಗೆ ಸಾಕ್ಷಿ.
ಪಳ್ಳಿಕೆರೆ ಗ್ರಾಮದಲ್ಲಿರುವ ಈ ಕೋಟೆಯನ್ನು ಇಕ್ಕೇರಿ ರಾಜನಾದ ಶಿವಪ್ಪ ನಾಯಕನು ಕಟ್ಟಿಸಿದ್ದಾನೆ ಎಂದು ಚರಿತ್ರೆಗಳು ಹೇಳುತ್ತಿವೆ. ಹಿರಿಯ ಸಾಹಿತಿ ಬೇಕಲ ರಾಮ ನಾಯಕ್ ಅವರ ಪ್ರಕಾರ, "ಬಲಿಯ ಕುಲಂ' (ದೊಡ್ಡ ಅರಮನೆ), ಕ್ರಮೇಣ ಬೇಕುಲಂ ಆಗಿ ಬಳಿಕ ಬೇಕಲ ಎಂದು ಪರಿವರ್ತಿತವಾಯಿತಂತೆ. ಬೇರೆ ಕೆಲವು ಮೂಲಗಳ ಪ್ರಕಾರ ಪ್ರತ್ಯೇಕ ಕಥೆಗಳು ಈ ಹೆಸರಿನ ಉದ್ಭವದ ಹಿಂದಿದೆ. ಅದೇನಿದ್ದರೂ, ಈಗ ಹೆಸರು ಮುಖ್ಯವಾಗಿಲ್ಲ, ಇಲ್ಲಿನ ಕೋಟೆ ಮುಖ್ಯವಾಗಿದೆ.

ಇದೀಗ ಭಾರತದ ಪುರಾತತ್ವ ಇಲಾಖೆ ಅಧೀನದಲ್ಲಿರುವ ಈ ಕೋಟೆಯ ಪ್ರವೇಶ ದ್ವಾರದಲ್ಲಿ ಹನುಮಂತನ ದೇವಸ್ಥಾನವಿದೆ. ಬೃಹತ್ ಬುರುಜುಗಳು, ಕೊತ್ತಳಗಳು, ಸುರಂಗಗಳು, ಬಾವಿಗಳು, ಶಸ್ತ್ರಾಸ್ತ್ರ ಕೋಠಿ, ಉದ್ಯಾನವನ ...ಹೀಗೆ ಪ್ರತಿಯೊಂದು ನೋಡಲೇ ಬೇಕಾದವುಗಳು.
1992ರಲ್ಲಿ ಕೇಂದ್ರ ಸರಕಾರವು ಬೇಕಲ ಕೋಟೆಯನ್ನು ವಿಶೇಷ ಪ್ರವಾಸಿ ಕೇಂದ್ರ ಎಂದು ಘೋಷಿಸಿದೆ. ಬಳಿಕ ಇದನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವಾಗಿಸಲು 1995ರಲ್ಲಿ ಬೇಕಲ ಟೂರಿಸಂ ಡೆವಲಪ್ಮೆಂಟ್ ಕಾರ್ಪೊರೇಶನ್ ಎಂಬ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಅಂದಿನಿಂದ ಈಕೋಟೆಯಲ್ಲಿ ಅಭಿವೃದ್ ಕಾಮಗಾರಿಗಳು ನಡೆಯುತ್ತಲೇ ಇವೆ. ದಿನದಿಂದ ದಿನಕ್ಕೆ ಅಭಿವೃದ್ಯಾಗುತ್ತಲೇ ಇದೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.

ಇಕ್ಕೇರಿ ರಾಜರು ನಿರ್ಮಿಸಿದ ಇತಿಹಾಸ ಪ್ರಸಿದ್ಧ ಬೇಕಲ ಕೋಟೆ ಸಹಿತ ಕಾಸರಗೋಡು ಜಿಲ್ಲೆಯ ಪ್ರವಾಸಿ ಯೋಜನೆಗಳಿಗೆ 100 ಕೋಟಿ ರೂ. ಮಾಸ್ಟರ್ ಪ್ಲಾನ್ ತಯಾರಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ಯೋಜನೆಗಳಿಗೆ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಬೇಕಲ ಕೋಟೆಯ ಸೌಂದರ್ಯ ಹೆಚ್ಚಿಸಲು ಈ ಕೆಳಗಿನ ಯೋಜನೆಗಳನ್ನು ಜಾರಿಗೆ ತರಲಾಗುವುದು:

* ಬೇಕಲ ಕೋಟೆ, ಹೊಸದುರ್ಗ ಕೋಟೆ, ಚಂದ್ರಗಿರಿ ಕೋಟೆ ನವೀಕರಣ
* ಪ್ರವಾಸಿಗರನ್ನು ಆಕರ್ಷಿಸಲು ಕಿರು ಹೋಟೆಲ್ಗಳು, ಹೋಂ ಸ್ಟೇ ಆರಂಭ
* ವಲಿಯಪರಂಬದಲ್ಲಿ ಇನ್ನಷ್ಟು ಹೌಸ್ಬೋಟ್
* ರಸ್ತೆ ಅಭಿವೃದ್ಧಿ ಸಹಿತ ಮೂಲಭೂತ ಸೌಕರ್ಯ ಹೆಚ್ಚಳ
* ಬೇಕಲ ಕೋಟೆಯಲ್ಲಿ ಮ್ಯೂಸಿಯಂ ಸ್ಥಾಪನೆ
* ಸಮುದ್ರ ಕಿನಾರೆಯಲ್ಲಿ ಹೊಟೇಲ್ಗಳು, ರೆಸ್ಟೋರೆಂಟ್ಗಳು, ಉದ್ಯಾನವನ ಸ್ಥಾಪನೆ
ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರಕಾರ ನೇಮಿಸಿದ ಡಾ|ಪಿ.ಪ್ರಭಾಕರನ್ ಆಯೋಗ ಮುಖ್ಯಮಂತ್ರಿಗೆ ಸಲ್ಲಿಸಿದ ವರದಿಯ ಹಿನ್ನೆಲೆಯಲ್ಲಿ ಮಾಸ್ಟರ್ ಪ್ಲಾನ್ ತಯಾರಿಸಲಾಗಿದೆ. ಮುಂದಿನ ಬಜೆಟ್ನಲ್ಲಿ ಬೇಕಲ ಪ್ರವಾಸಿ ಯೋಜನೆಗೆ ಹಣ ಕಾದಿರಿಸಿ ಯೋಜನೆಯನ್ನು ಘೋಷಿಸಲಾಗುವುದು.

ಕಾಸರಗೋಡು ಜಿಲ್ಲೆಯ ಇತಿಹಾಸ ಪ್ರಸಿದ್ಧವಾಗಿರುವ ಬೇಕಲ ಕೋಟೆ, ಹೊಸದುರ್ಗ ಕೋಟೆ, ಹಾಗೂ ಚಂದ್ರಗಿರಿ ಕೋಟೆಯನ್ನು ನವೀಕರಿಸಿ ಪ್ರವಾಸಿಗರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಏರ್ಪಡಿಸುವುದಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ಕಿರು ಹೊಟೇಲ್ಗಳನ್ನು, ಹೋಂ ಸ್ಟೇಗಳನ್ನು ಸಿದ್ಧಪಡಿಸಲಾಗುವುದು.
ಬೇಕಲ ಕೋಟೆ ಸಹಿತ ಜಿಲ್ಲೆಯ ವಿವಿಧ ಕೋಟೆಗಳ ಅಭಿವೃದ್ಧಿಯ ಜತೆಯಲ್ಲಿ ವಲಿಯಪರಂಬದಲ್ಲಿ ಇನ್ನಷ್ಟು ಹೌಸ್ ಬೋಟ್ಗಳನ್ನು ನೀರಿಗಿಳಿಸಲಾಗುವುದು. ರಸ್ತೆ ಸೌಕರ್ಯವನ್ನು ಉತ್ತಮ ಪಡಿಸುವುದು ಸಹಿತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಯೋಜನೆಗಳನ್ನು ಪ್ಯಾಕೇಜ್ನಲ್ಲಿ ಸೇರ್ಪಡೆಗೊಳಿಸಲಾಗಿದೆ.

ಬೇಕಲಕೋಟೆಯ ಪ್ರದೇಶದಲ್ಲಿ ಮ್ಯೂಸಿಯಂ ಆರಂಭಿಸುವ ಕುರಿತು ಬೇಕಲ್ ರಿಸೋರ್ಸ್ ಡೆವಲಪ್ಮೆಂಟ್ ಕೋರ್ಪರೇಶನ್(ಬಿ.ಆರ್.ಡಿ.ಸಿ), ಆರ್ಕೋಲಜಿ ಸರ್ವೆ ಆಫ್ ಇಂಡಿಯಾ ಈ ಮೊದಲೇ ಸರಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಆದರೆ ಈ ವರದಿಯ ಬಗ್ಗೆ ಈ ವರೆಗೂ ಯಾವುದೇ ತೀರ್ಮಾನವಾಗದೆ ಕಡತದಲ್ಲೇ ಉಳಿದುಕೊಂಡಿದೆ. ಈ ಮಹತ್ವದ ಯೋಜನೆಗೆ ಕೇಂದ್ರ ಸರಕಾರದ ಅನುಮತಿ ಪಡೆಯಲು ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ.

ಕಾಸರಗೋಡು ಹಾಗೂ ಕಾಂಞಂಗಾಡ್ ಕರಾವಳಿ ಪ್ರದೇಶದ ಸಮುದ್ರ ತೀರದಲ್ಲಿ ಪಾರ್ಕ್ಗಳು, ರೆಸ್ಟೋರೆಂಟ್ಗಳು, ಮಕ್ಕಳ ಉದ್ಯಾನವನ ಮೊದಲಾದವುಗಳನ್ನು ನಿರ್ಮಿಸಲು ಪ್ಯಾಕೇಜ್ನಲ್ಲಿ ಹಣವನ್ನು ಕಾದಿರಿಸಲಾಗುವುದು.