Udayavani | Jan 23, 2013
ಸುಮಾರು 15 ಮಠಗಳ 31 ಯತಿವರ್ಯರು ಪೂಜೆಗೈದ ಪ್ರಾಣದೇವರ ಕ್ಷೇತ್ರ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿದೆ. ಬೊಮ್ಮಘಟ್ಟದ ಹುಲಿಕುಂಟೆ ಸ್ವಾಮಿ ಇಂತದ್ದೊಂದು ವೈಶಿಷ್ಟé ಹೊಂದಿರುವ ಪ್ರಾಣದೇವರು. ಕರ್ನಾಟಕದ ಪ್ರಸಿದ್ದ ಪ್ರಾಣದೇವರ ಕ್ಷೇತ್ರಗಳಲ್ಲಿ ಬೊಮ್ಮಘಟ್ಟವೂ ಒಂದು. ಶ್ರೀಹರಿ ಭಕ್ತಾಗ್ರೇಸರರೂ, ಜೀವೋತ್ತಮರೂ ಆದ ಮುಖ್ಯ ಪ್ರಾಣದೇವರು, ಹನುಮ-ಭೀಮ-ಮಧ್ವರೆಂಬ ಅವತಾರತ್ರಯೋಪೇತ ಮೂರ್ತಿಯಾಗಿದೆ ಇಲ್ಲಿ. ಕರಣಿಕ ನರಸಿಂಹರಾಯರಿಗೆ ಸೇರಿದ ಸ್ಥಳದಲ್ಲಿದ್ದ ಹುಲಿಪೊದೆಯಲ್ಲಿ ಬಹುಕಾಲ ಗುಪ್ತರಾಗಿ ನೆಲೆಸಿದ್ದು, ಭಕ್ತ ಬೊಮ್ಮಯ್ಯನ ನಿಮಿತ್ತದಿಂದ ಪ್ರಕಟರಾಗಿ ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಂದ ಸ್ಥಿರಪ್ರತಿಷ್ಠಾಪನೆಗೊಂಡ ದೇವಾಲಯ. ಹುಲಿಕುಂಟೆರಾಯನೆಂಬ ಶುಭನಾಮದಿಂದ ಪೂಜೆಗೊಳ್ಳುತ್ತಿರುವ ಜಾಗ್ರತ ಕ್ಷೇತ್ರ ಬೊಮ್ಮಘಟ್ಟವಾಗಿದೆ.
ನಿಸರ್ಗ ಸೌಂದರ್ಯದಿಂದ ರಮಣೀಯವಾದ ಈ ತಾಣ. ಪಶ್ಚಿಮ ದಿಶೆಗೆ ದುರ್ಗಾದೇವಿಯ ಮಂದಿರದಿಂದಲೂ ಪರಿಶೋಭಿತವಾಗಿದೆ. ಇಂತಿಪ್ಪ ಹುಲಿಕುಂಟೇಶ್ವರನ ಮಹಿಮೆ ಮಾತ್ರ ಅಪಾರ. ಅಂದಹಾಗೆ ಇಲ್ಲಿ ಅಂಜನೇಯನನ್ನೇ ಹುಲಿಕುಂಟೇಶ್ವರ ಎಂದು ಕರೆಯಲಾಗುತ್ತದೆ. ಹುಲಿಕುಂಟೆ ಕೆರೆಯ ಹಿಂಭಾಗದಲ್ಲಿರುವುದರಿಂದ ಈ ಹೆಸರು ಬಂದಿದೆ. ಈ ಹುಲಿಕುಂಟೇಶ್ವರನಿಗೆ ರಾಜ್ಯದಲ್ಲಿ ಮಾತ್ರವಲ್ಲದೇ ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ ಸೇರಿದಂತೆ ವಿದೇಶದಲ್ಲಿಯೂ ಈತನಿಗೆ ಭಕ್ತರಿದ್ದಾರೆ. ವಿವಿಧ ಜಾತಿ-ಮತಗಳಿಗೂ ಹುಲಿಕುಂಟೇಶ್ವರ ಮನೆದೇವರಾಗಿದ್ದಾನೆ. ಹುಲಿಕುಂಟೇಶ್ವರ ತನ್ನ ಮಹಿಮೆ ಹಾಗೂ ನಡಾವಳಿಗಳ ಮುಖೇನ ಲಕ್ಷಾಂತರ ಭಕ್ತರನ್ನು ಹೊಂದಿದ್ದಾನೆ.
ವಿಜಯ ನಗರದ ಪೂರ್ವ ಕಾಲದಲ್ಲಿಯೇ ಈ ದೇವಸ್ಥಾನದ ಇರುವ ಬಗ್ಗೆ ಉಲ್ಲೇಖವಿದೆ. ಈ ಸ್ಥಳವು ಅನೇಕ ಸಾಧಕರ ತಪೋಭೂಮಿ, ರಸಿಕರ ಮನೋಲ್ಲಾಸದ ಪ್ರದೇಶ, ನಾಸ್ತಿಕರನ್ನು ಆಸ್ತಿಕರನ್ನಾಗಿಸುವ ಪ್ರಯೋಗ ಶಾಲೆಯಾಗಿ ಬೆಳೆಯುತ್ತಿದೆ. ಎಷ್ಟೋ ಜನ, ಮನು ಮುನಿಗಳು ಈ ತಾಣದಲ್ಲಿ ತಪಗೈದು ಸಿದ್ಧಿ ಪಡೆದಿದ್ದಾರೆ. ಅನೇಕ ಮಹಾತ್ಮರು ಇಲ್ಲಿಗೆ ದಯಮಾಡಿಸಿ ತಾವುಗಳು ಪುನೀತರಾಗಿದ್ದಲ್ಲದೇ, ಇಲ್ಲಿನ ಭಕ್ತರನ್ನು ಅನುಗ್ರಹಿಸಿದ್ದಾರೆ. ವ್ಯಾಸರಾಜಗುರು ಸಾರ್ವಭೌಮರು, ರಾಯರ ಮಠದ ತೀರ್ಥರು, ಶ್ರೀವ್ಯಾಸರಾಜ ಮಠ, ಹೀಗೆ ಮಠದ ಅನೇಕ ಯತಿರ್ವರು ಹುಲಿಕುಂಟೇಶ್ವರನಿಗೆ ಪೂಜಿಸಿದ್ದಾರೆ. ಈತನ ಮೇಲೆ ಅನೇಕ ಸ್ತುತಿ ಮಂಜರಿಗಳು ರಚಿತವಾಗಿವೆ.
ಈ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಮಹಿಮೆ ಅಪಾರ. ಈ ಕ್ಷೇತ್ರದರ್ಶನ ಮಾತ್ರದಿಂದ ಮನದ ಮಾಲಿನ್ಯವು ತೊಲಗಿ ಅವರ್ಣನೀಯ ಅನಂದ ಉಂಟಾಗುತ್ತದೆ. ಅಲ್ಲದೆ ಹುಲಿಕುಂಟೇಶ್ವರನ ಪವಾಡಗಳು ಅನೇಕ ಭಕ್ತರನ್ನು ಸೃಷ್ಟಿಸಿಕೊಂಡಿದೆ. ಸ್ವಾಮಿಯು ಬೇಡಿದ ಭಕ್ತರಿಗೆ ಹೂವು ನೀಡುವ ಮೂಲಕ ಅವರ ಇಷ್ಟಾರ್ಥಗಳ ಆಗು-ಹೋಗುಗಳ ಬಗ್ಗೆ ತಿಳಿಸುತ್ತಿದ್ದಾನೆ. ಪ್ರತಿ ಶನಿವಾರ, ಅಮವಾಸ್ಯೆ, ಪೌರ್ಣಿಮೆ, ಯುಗಾದಿ, ವಿಜಯದಶಮಿ, ರಾಮ ನವಮಿ ಸೇರಿದಂತೆ ಶುಭದಿನಗಳಲ್ಲಿ ವಿಶೇಷ ಪೂಜೆಗಳು ಸಲ್ಲುತ್ತವೆ. ಭವ್ಯವಾದ ಪ್ರಕಾರದ ಪ್ರಾಂಗಣಲ್ಲಿ ಪ್ರದಕ್ಷಿಣೆ ಹಾಕಲು ಭಕ್ತ ಸಮೂಹಕ್ಕೆ ಅವಕಾಶವಿದೆ. ದೇವಸ್ಥಾನದ ಸನ್ನಿಧಿಯಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳವರ ಮಠಾಧೀಶರಾದ ಶ್ರೀ ಸುಭೋಧೇಂದ್ರ ತೀರ್ಥ ಪಾಂದಗಳವರಿಂದ ಪ್ರತಿಷ್ಠಾಪಿತರಾದ ಲಕ್ಷ್ಮಣ-ಗರುಡ, ಮುಖ್ಯಪ್ರಾಣ ಸೀತಾ ಸಮೇತ ಶ್ರೀರಾಮಚಂದ್ರ ದೇವರ ವಿಗ್ರಹಗಳಿವೆ. ದೇವಾಲಯದ ಕೈಪಿಡಿ ಗೋಡೆಯಲ್ಲಿ ಸುತ್ತಲೂ ಶಾಲಾ ಶಿಖರಗಳುಳ್ಳ ದೇವ ಕೋಷ್ಠಕಗಳಿವೆ.
ಈ ಉತ್ಸವಗಳ ಸಮಯದಲ್ಲಿ ಸ್ವಾಮಿಗೆ ವಿಶೇಷ ಪೂಜೆಗಳು ನಡೆಯುವುದಲ್ಲದೆ ಪಂಚಾಮೃತ ಅಭಿಷೇಕ, ಹೋಮ, ಹವನ, ಪಾರಾಯಣ, ಉಪನ್ಯಾಸ ಉತ್ಸವಗಳು ಜರುಗುತ್ತವೆ. ಈ ಸಮಯದಲ್ಲಿ ಸ್ವಾಮಿಗೆ ಫಲ ಸಮರ್ಪಣೆ ಮಾಡಿ ಮಂಗಳಾರತಿ ಮಾಡಿಸುವವರು ಹರಕೆ, ಭೂತಬಲಿ ಹಾಕುವುದು ವಾಡಿಕೆ ಇದೆ. ಕಷ್ಟಗಳ ನಿವಾರಣೆಗಾಗಿ ತುಪ್ಪದ ದಿಪೋತ್ಸವ ಸೇವೆ ಇದೆ.
ದೇವಸ್ಥಾನದಲ್ಲಿ ಮದುವೆ, ಜವಳ ಸೇರಿದಂತೆ ಇತರೆ ಮಂಗಳ ಕಾರ್ಯಗಳನ್ನು ಮಾಡಲು ಕಲ್ಯಾಣ ಮಂಟಪವಿದೆ. ಭಕ್ತಾದಿಗಳು ತಂಗಲು ವ್ಯವಸ್ಥೆ ಇದೆ. ದೇವಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಭಕ್ತರ ಸಹಾಯದ ಮೇರೆಗೆ ನಡೆಯುತ್ತಿವೆ. ಧ್ವಜಸ್ತಂಭ ನಿರ್ಮಾಣ, ಕೀರ್ತಿಮುಖಗಳ ನವೀಕರಣ, ಮಹಾದ್ವಾರ, ಗೋಪುರ ನವೀಕರಣ, ಹುಲಿಕುಂಟೇಶ್ವರ ಸ್ವಾಮಿ ನವೀಕರಣ, ರಾಮದೇವ ಶಿಖರದ ನವೀಕರಣ ಇತ್ತೀಚಿನ ಬೆಳವಣಿಗೆಗಳಾಗಿವೆ. ಬೊಮ್ಮಘಟ್ಟಕ್ಕೆ ಸಂಡೂರು ಕೂಡ್ಲಿಗಿ ಗುಡೇಕೊಟ ಮುಖೇನ ಚೋರನೂರು ಮಾರ್ಗವಾಗಿ ಬರಬಹುದಾಗಿದೆ.
ಚಿತ್ರ ಲೇಖನ- ಆಶಾ ಸ್ವರೂಪ್.ಎಂ ಕೊಟ್ಟೂರು