Udayavani | Jan 23, 2013
ಸಾಹಿತ್ಯದ ಮೂಲಕ ನಾವೂ ಹಲವು ಬಗ್ಗೆಯ ಅನುಭವಗಳಿಗೆ ನಮ್ಮನ್ನು ತೆರೆದುಕೊಳ್ಳವುದು ಮತ್ತು ಕೆಲವೊಮ್ಮೆ ಸಾಹಿತ್ಯವೇ ನಮ್ಮನ್ನು ಅದರ ತೆಕ್ಕೆಗೆ ತೆಗೆದುಕೊಳ್ಳುವುದು ನಡೆಯುತ್ತಲೇ ಬರುತ್ತಿದೆ. ಅದಕ್ಕೆ ಏನೋ, ಅಕ್ಷರಗಳು ಎಷ್ಟು ಕಾಲವಾದರೂ ಕತೆ, ಸಣ್ಣಕತೆ, ಕಾವ್ಯ, ನಾಟಕದ ರೂಪದಲ್ಲಿ ನಮ್ಮನ್ನು ಕಾಡುತ್ತಲೇ ಬಂದಿರುವುದು. ಇಂಥ ಕಥಾಸಂತೆಯಲ್ಲಿ ದಿನನಿತ್ಯ ಸಾವಿರಾರು ಯುವ ಬರಹಗಾರರು ತಮ್ಮ ಕತೆಗಳನ್ನು ತುಂಬಿಡುತ್ತಲೇ ಇರುತ್ತಾರೆ. ಅದರಲ್ಲಿ ಅಮ್ಮನ ಆಟೋಗ್ರಾಫ್ ಸಂಕಲನವೂ ಒಂದು.
ಈ ಕಥಾ ಸಂಕಲನ ಸಾಕಷ್ಟು ವಿಚಾರಗಳಿಗಾಗಿ ವಿಶೇಷವಾದ್ದು. ಒಂದು, 'ಕ್ಷಣ ಕತ್ತಲೆಯ ಭಯ' ಹೆಸರಿನೊಂದು ಕಥೆ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕತ್ತಲು, ಡಾಬಾ, ಟ್ರಕ್ ಡ್ರೈವರ್ನ ವಿಕ್ಷಿಪ್ತ ಬದುಕು, 'ಚಕ್ರಕ್ಕೆ ಮೆತ್ತುವ ರಕ್ತ ತೆಳುಮಣ್ಣಿಗೆ ಅಂಟಿ ಮಾಯವಾಗುತ್ತ ಹೋಯ್ತು' ಎನ್ನುವ ಸಾಲುಗಳು ಕ್ಷಣ-ಕ್ಷಣಕ್ಕೂ ಕುತೂಹಲವನ್ನು ಹೆಚ್ಚಿಸುತ್ತಾ ಹೋಗುತ್ತವೆ. 'ಅಮ್ಮನ ಆಟೋಗ್ರಾಫ್' ಕಥೆ, ಅಮ್ಮ ಆಗ ತಾನೇ ಸಾರಿಗೆ ಉಪ್ಪು ಹಾಕಿದ ಕೈಯಲ್ಲೇ ಮಗನಿಗೆ ಪತ್ರ ಬರೆದಿರುವಷ್ಟು ಮನಸಿಗೆ ಹತ್ತಿರವಾಗಿದೆ. ಪತ್ರದ ಮೂಲಕ ಪ್ರೀತಿ ಕಳುಹಿಸುತ್ತಿದ್ದ ಅಮ್ಮ, ಮಗನ ಬದುಕು ಚೆಂದವಾಗಿರಲಿ ಎಂದು ಅವಳು ಹೇಳುತ್ತಿದ್ದ ಕಿವಿಮಾತುಗಳು ಪ್ರತಿಯೊಬ್ಬ ಓದುಗನಿಗೂ ಅವರಮ್ಮನನ್ನು ನೆನಪು ಮಾಡಿಸುವಷ್ಟು ಬೆಚ್ಚಗಿದೆ.
'ಸಾಬರ ಹುಡುಗಿ', 'ಹಲ್ಕಾ ಜೀವನ' ಇರುವ ಒಂಬತ್ತು ಕತೆಗಳು ಒಂಬತ್ತು ವಿಭಿನ್ನ ಲೋಕಕ್ಕೆ ನಮ್ಮನ್ನು ಕೊಂಡೊಯ್ಯುತ್ತವೆ. ಕತೆಯ ನಿರೂಪಣೆ ಬಹಳ ಸಹಜವೆನಿಸುತ್ತಲೇ ಮುಂದೆನಾಗುತ್ತದೆ ಎಂಬ ಕುತೂಹಲವನ್ನು ಹುಟ್ಟಿಸುತ್ತಾ ಒಂದೇ ಗುಕ್ಕಿಗೆ ಓದಿ ಮುಗಿಸುವಂತಿದೆ. ಒಟ್ಟಾರೆಯಾಗಿ ಕತ್ತಲಲ್ಲಿ ಹೆದ್ದಾರಿಯ ರಸ್ತೆಯಲ್ಲಿ ಶುರುವಾಗುವ ಮೊದಲ ಕಥೆ ಕತ್ತಲನ್ನು ಸೀಳುತ್ತಾ ಹೋಗುವ ವಾಹನಗಳಂತೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.
ಅಮ್ಮನ ಆಟೋಗ್ರಾಫ್/ಲೇ-ಫಕೀರ(ಶ್ರೀಧರ ಬನವಾಸಿ)/ಪ್ರ: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್, ನಂ-375, ಕಗ್ಗೆರೆ ಪ್ರಕಾಶ ನಿಲಯ, ಕೆಂಪೆಗೌಡ ನಗರ, ಮೊದಲನೇ ಮುಖ್ಯರಸ್ತೆ, 8ನೇ ಕ್ರಾಸ್, ಮಾಗಡಿ ಮೈನ್ ರೋಡ್, ಬೆಂಗಳೂರು /ಬೆ: 100 ರೂ. /ಪು: 120
-ಉಷಾ ಜಿ.ಎಸ್.