Udayavani | Jan 23, 2013
'ಕರ್ಣದಲಿ ಜನಿಸಿದವರುಂಟೇ ಜಗದೊಳಗೆ?'
-ಹಾಗಂತ ಬಸವಣ್ಣನ ಒಂದು ವಚನ ಕೇಳುತ್ತದೆ. ಇದು ಸರಳವಾಗಿ ನೋಡಿದರೆ ಕಿವಿಯಿಂದ ಯಾರಾದರೂ ಹುಟ್ಟುತ್ತಾರಾ ಅಂತ ಕೇಳಿದಂತಿದೆ. ಆದರೆ ಅದನ್ನೂ ಇನ್ನೂ ಗಂಭೀರವಾಗಿ ಓದಿಕೊಂಡರೆ ಅದಕ್ಕೊಂದು ಸೂಕ್ಷ್ಮ ಅರ್ಥವಿದೆ. ಅದೇನೆಂದರೆ ಕಿವಿ ಒಂದು ಶ್ರವಣಾಂಗ. ಶ್ರವಣ ಮಾಡುವವರನ್ನು ಶ್ರೋತ್ರೀಯ ಅಂತ ಕರೆಯುತ್ತಾರೆ, ಶ್ರೋತ್ರೀಯ ಎಂದು ಬ್ರಾಹ್ಮಣರನ್ನೂ ಕರೆಯುತ್ತಾರೆ. ನಮ್ಮಲ್ಲಿ ವರ್ಣವ್ಯವಸ್ಥೆಯನ್ನು ಮಾಡಿ ಅದರ ಮೂಲಕ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಅಂತ ಕರೆಯಲಾಯಿತು. ಅದೇ ಮುಂದೆ ಪರಸ್ಪರರ ಮಧ್ಯೆ ಕಂದಕವಾಗಲಿ, ಅವರು ಮೇಲು ಇವರು ಕೀಳು ಅಂತ ಪರಿಗಣಿಸಿ ನೋಡುವುದಕ್ಕೆ ದಾರಿ ಮಾಡಿಕೊಟ್ಟಿತು.
ಇಂಥ ಸೂಕ್ಷ್ಮಗಳ ವಚನಗಳು ಅನೇಕ. ಕಾಯಕವನ್ನು ಕೈಲಾಸವೆಂದು ಪರಿಗಣಿಸಿದ, ತ್ರಿವಿಧ ದಾಸೋಹವನ್ನು ಪರಿಕಲ್ಪಿಸಿದ ಜಂಗಮತ್ವವನ್ನು ಬೋಧಿಸಿದ ಬಸವಣ್ಣನವರನ್ನು ಇಡಿಯಾಗಿ ಗ್ರಹಿಸುವುದಕ್ಕೊಂದು ಸದವಕಾಶ ದೊರೆತಿರುವುದು 'ಎನ್ನ ನಾ ಹಾಡಿಕೊಂಡೆ' ಸಂಕಲನದಿಂದ. ಡಾ. ಎಸ್. ಪ್ರಭುಶಂಕರ್ ಅವರ ಸಂಪಾದನೆಯ ವಚನಗಳ ಈ ಅಧ್ಯಯನ, ಹಲವು ಹೊಸ ಹೊಳಹುಗಳನ್ನು ನಮಗೆ ಕೊಡುತ್ತಾ ಹೋಗುತ್ತದೆ. ಬಸವಣ್ಣನವರಿಗಿಂತ ಹಿರಿಯರಾದ ಜೇಡರ ದಾಸಿಮಯ್ಯನವರ ವಚನವೊಂದು ಬಸವಣ್ಣನವರ ವಚನವನ್ನು ಪ್ರಭಾವಿಸಿದ ಉದಾಹರಣೆ (ಪು: 143) ಇಲ್ಲಿದೆ. ಇವರ ವಚನದಿಂದ ಪ್ರಭಾವಕ್ಕೊಳಗಾದ ಅವರ ನಂತರದ ತಲೆಮಾರಿನ ವಚನಕಾರರ ಉಲ್ಲೇಖವೂ ಇಲ್ಲಿದೆ.
ಕಾವ್ಯದ ದೃಷ್ಟಿಯಿಂದ ಹೇಳುವುದಾದರೆ ಬಸವಣ್ಣನವರು ಸಾದೃಶ್ಯಕ್ಕೆ ಹೆಸರು. ಹರಕೆಗೆ ತಂದ ಕುರಿ ತಳಿರು ಮೇಯುವ ರೂಪಕವನ್ನಿಟ್ಟುಕೊಂಡು ಅವರು ಐಹಿಕ ಜಗತ್ತಿನ ನಶ್ವರತೆಯನ್ನು ಅದ್ಭುತವಾಗಿ ಹೇಳಿದವರು. ಅದೇ ರೀತಿ ಬಾಣಲೆಯ ಮೇಲೆ ಅಗೆ ಹೊಯ್ದರೆ ಅದು ಬೆಳೆಯಾದೀತೇ ಅನ್ನುವಂಥ ವಚನದ ಸಾಲುಗಳೂ ಬರುತ್ತದೆ. ಇದೆಲ್ಲವನ್ನೂ ಓದುತ್ತಾ ಓದುತ್ತಾ, ವ್ಯಾಖ್ಯಾನಗಳನ್ನು ಓದುತ್ತಾ ನೀವು ಮತ್ತೆ ಮತ್ತೆ ಬಸವಣ್ಣನವರನ್ನೇ ಓದುವುದಕ್ಕೆ ಹಚ್ಚುವ ಕೆಲಸವನ್ನಂತೂ ಈ ಸಂಕಲನ ಮಾಡುತ್ತದೆ.
ಎನ್ನ ನಾ ಹಾಡಿಕೊಂಡೆ/ಲೇ: ಡಾ. ಎಸ್. ವಿದ್ಯಾಶಂಕರ/ಪ್ರ: ಪ್ರಿಯದರ್ಶಿನಿ ಪ್ರಕಾಶನ, ನಂ. 138, 7ನೇ ಸಿ ಮುಖ್ಯ ರಸ್ತೆ, ಹಂಪಿನಗರ, ಬೆಂಗಳೂರು-4/ಪು: 844 /ಬೆ: 500 ರೂ.
-ವಿಕಾಸ್