Udayavani | Jan 23, 2013
ನವದೆಹಲಿ: ಪ್ರಯಾಣಿಕರು ಅಕ್ಷರಶಃ ಶಿವಾಜಿ ಇರುವ ಬಸ್ಗಾಗಿಯೇ ಕಾಯುತ್ತಿದ್ದರು. ಮುಂದಿದ್ದ ಬಸ್ ಖಾಲೀ ಇದ್ದರೂ ಪರವಾಗಿಲ್ಲ. ಶಿವಾಜಿ ರಾವ್ ಗಾಯಕ್ವಾಡ್ ಕಂಡಕ್ಟರ್ ಆಗಿರುವ ಬಸ್ಗೆà ಅವರೆಲ್ಲಾ ಕಾದು ಕುಳಿತಿರುತ್ತಿದ್ದರು. ಆತ ಟಿಕೆಟ್ ಕೇಳುವ ಶೈಲಿ, ಪ್ರಯಾಣಿಕರಿಂದ ಹಣ ಪಡೆದು ಅವರಿಗೆ ಟಿಕೆಟ್ ಮತ್ತು ಚಿಲ್ಲರೆ ಹಿಂದಿರುಗಿಸುವ ಶೈಲಿ ಬೆಂಗಳೂರಿಗರನ್ನು ಮರಳು ಮಾಡಿತ್ತು.
ಹಿರಿಯ ವಿಮರ್ಶಕ ನಮನ್ ರಾಮಚಂದ್ರನ್ ಬರೆದ ರಜನಿಕಾಂತ್ ಜೀವನ ಚರಿತ್ರೆ 'ರಜನಿಕಾಂತ್: ದ ಡಿಫಿನಿಟೀವ್ ಬಯೋಗ್ರಫಿ' ಯಲ್ಲಿ ರಜನಿ ಜೀವನದ ಹಲವು ರೋಚಕ ಘಟನೆಗಳಿವೆ. ರಜನಿ ಕುರಿತ ಕೆಲ ಅಪರೂಪದ ಮಾಹಿತಿಗಳನ್ನು ಪುಸ್ತಕದಲ್ಲಿ ಹೀಗೆ ವರ್ಣಿಸಲಾಗಿದೆ.
ಹಮಾಲಿ ಕೆಲಸದಿಂದ ಕಂಡಕ್ಟರ್ ಕೆಲಸ:
'ಆರಂಭದಲ್ಲಿ ಶಿವಾಜಿ ಬೆಂಗಳೂರಿನಲ್ಲಿದ್ದ ಮೈಸೂರು ಮೆಷಿನರಿ ಕಂಪನಿಯಲ್ಲಿ ಕೆಲಸಕ್ಕಿದ್ದರು. ಬಡಗಿಯಾಗಿ ಕೆಲಸ ಮಾಡಿದರು. ಆ ಬಳಿಕ ಅಕ್ಕಿ ಮೂಟೆಯನ್ನು ಲಾರಿಗೆ ತುಂಬುವ ಕೆಲಸಕ್ಕೆ ಸೇರಿಕೊಂಡರು. ಒಂದು ಮೂಟೆ ಅಕ್ಕಿ ಲೋಡ್ ಮಾಡಿದ್ದರೆ 10 ಪೈಸೆ ಸಂಭಾವನೆ ನೀಡಲಾಗುತ್ತಿತ್ತು. ಇಂತಹ ದಿನಗಳಲ್ಲೇ ಬಿಟಿಎಸ್ (ಬೆಂಗಳೂರು ಸಾರಿಗೆ ಸೇವೆ) ನಡೆಸಿದ ಪರೀಕ್ಷೆಯಲ್ಲಿ ಪಾಸಾಗಿ ಕಂಡಕ್ಟರ್ ಕೆಲಸಕ್ಕೆ ಸೇರಿಕೊಂಡರು. ಇದಾಗಿದ್ದು 1970ರ ಮಾ.19ರಂದು. ಅವರೊಂದಿಗೇ ಡ್ರೈವರ್ ಕೆಲಸಕ್ಕೆ ಸೇರಿಕೊಂಡಿದ್ದು ರಾಜಾ ಬಹಾದ್ದೂರ್.'
'ರಾಜಾ ಬಹಾದ್ದೂರ್, ಆಗಿನ ಬಿಟಿಎಸ್ ಡ್ರೈವರ್ಗಳಲ್ಲೇ ಅತ್ಯಂತ ವೇಗದ ಚಾಲನೆಗೆ ಹೆಸರಾಗಿದ್ದರೆ, ಶಿವಾಜಿ ತನ್ನ ಮ್ಯಾನರಿಸಂಗಳಿಂದಲೇ ಸುದ್ದಿ ಮಾಡಿದ್ದ. ಹಲವು ಬಸ್ ಖಾಲೀ ಹೋದರೂ ಜನ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇವರಿಬ್ಬರು ಇರುತ್ತಿದ್ದ ಬಸ್ಗಾಗಿಯೇ ಜನ ಕಾದು ನಿಲ್ಲುತ್ತಿದ್ದರು. ಶಿವಾಜಿ ಟಿಕೆಟ್, ಚಿಲ್ಲರೆ ನೀಡುವ ರೀತಿ ಬೆಂಗಳೂರಿಗರನ್ನು ಮರಳು ಮಾಡಿದ್ದವು. ಜನರನ್ನು ಆಕರ್ಷಿಸುವ ಕಲೆ ಆತನಿಗೆ ಆಗಲೇ ಸಿದ್ದಿಸಿತ್ತು.'
'ಹೀಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡಿದ ಬಳಿಕ ಶಿವಾಜಿ, ಸೀದಾ ಹನುಮಂತ ನಗರದಲ್ಲಿರುವ ರಾಜಾ ಬಹಾದ್ದೂರ್ ಮನೆಗೆ ತೆರಳುತ್ತಿದ್ದ. ಬಳಿಕ ಚಾಮರಾಜಪೇಟೆ ಪೊಲೀಸ್ ಠಾಣೆ ಪಕ್ಕದಲ್ಲೇ ನಡೆಯುತ್ತಿದ್ದ ನಾಟಕದ ರಿಹರ್ಸಲ್ನಲ್ಲಿ ಪಾಲ್ಗೊಳ್ಳುತ್ತಿದ್ದ. ಬಳಿಕ ಶಿವಾಜಿ ಸಣ್ಣದೊಂದು ಸಾರಾಯಿ ಪೆಗ್ ಏರಿಸಿದರೆ, ರಾಜಾ ಬಹಾದ್ದೂರ್ ಬಿಯರು ಕುಡಿತು ತಂತಮ್ಮ ಮನೆಗೆ ಹೋಗುತ್ತಿದ್ದರು.'
ಅಭಿನಯದ ಗೀಳು:
'ಅಂದಿನ ದಿನಗಳಲ್ಲಿ ಶಿವಾಜಿ ಗಣೇಶನ್, ರಾಜ್ಕುಮಾರ್, ಎಂಜಿಆರ್ ಅಭಿನಯದ ಚಿತ್ರಗಳನ್ನೂ ಒಂದೂ ಬಿಡದಂತೆ ನೋಡುತ್ತಿದ್ದ ಶಿವಾಜಿ, ಬಳಿಕ ಅವರ ಅಭಿನಯವನ್ನೇ ಅನುಕರಣೆ ಮಾಡಿ ತೋರಿಸುತ್ತಿದ್ದ. ಇದನ್ನು ಕಂಡ ಗೆಳೆಯರು, ಸುಮ್ಮನೆ ಚಿತ್ರರಂಗ ಸೇರಿಬಿಡು ಒಳ್ಳೆಯ ವಿಲನ್ ಆಗುತ್ತೀಯಾ ಎಂದು ಜೋಕ್ ಕಟ್ ಮಾಡುತ್ತಿದ್ದರು.'
'ಆದರೆ ನನಗೊಂದು ಅವಕಾಶ ಕೊಡಿ ಎಂದು ಯಾರ ಬಳಿಯೂ ಕೇಳುವ ಧೈರ್ಯ ಶಿವಾಜಿಗಿರಲಿಲ್ಲ. ನೋಡಲು ಕಪ್ಪಗಿರುವ, ಯಾವುದೇ ಹಿನ್ನೆಲೆ ಇಲ್ಲದಿರುವ ನನಗೆ ಯಾರು ಅವಕಾಶ ಕೊಡುತ್ತಾರೆ ಎಂಬುದು ಶಿವಾಜಿ ಕೊರಗಾಗಿತ್ತು. ಇಂತಹ ಸಮಯದಲ್ಲೇ ಬಹಾದ್ದೂರ್ ಮತ್ತು ಇತರೆ ಗೆಳೆಯರು ಮದ್ರಾಸ್ನಲ್ಲಿ ಹೊಸದಾಗಿ ಆರಂಭವಾಗಿರುವ ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ ಸೇರುವಂತ ಸಲಹೆ ನೀಡಿದರು. ಇದಕ್ಕೆ ರಜನಿ ಸೋದರ ಸತ್ಯನಾರಾಯಣ ಅವರ ಅನುಮತಿಯೂ ಸಿಕ್ಕಿತ್ತು. ಹೀಗೆ ತಮಿಳು ಮಾತನಾಡಲು ಬಾರದ ಶಿವಾಜಿ ಮದ್ರಾಸ್ನತ್ತ ಪಯಣ ಬೆಳೆಸಿದ.' 'ಇಂತಹ ದಿನಗಳಲ್ಲೇ ಶಿವಾಜಿ, ಪ್ರಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಅವರ ಕಣ್ಣಿಗೆ ಬಿದ್ದ. ಅವರು ತಮ್ಮ ಚಿತ್ರದಲ್ಲಿ ಶಿವಾಜಿ ಹೆಸರನ್ನು ರಜನಿಕಾಂತ್ ಎಂದು ಇಟ್ಟರು. ಮುಂದೆ ನಡೆದಿದ್ದು ಇತಿಹಾಸ'.