ಕೆ. ದಿನಮಣಿ ಶಾಸ್ತ್ರಿ | Jan 25, 2013
ದೃಶ್ಯ ಅಥವಾ ವಸ್ತುವಿನ ಯಥಾ ನಕಲನ್ನು ತೋರಿಸುವುದು ಛಾಯಾಗ್ರಾಹಕನ ಕೆಲಸ. ಆದರೆ ಅದರ ಒಳಹೊಕ್ಕು ಅದರ ಗುಣಧರ್ಮ ಮತ್ತು ವಿಶೇಷತೆಗಳನ್ನು ವರ್ಣ ಹಾಗೂ ರೇಖೆಗಳ ಮುಖೇನ ವ್ಯಕ್ತಪಡಿಸುವುದು ಸೃಜನಶೀಲ ಕಲಾವಿದನ ಕೆಲಸ ಎಂದಿದ್ದಾರೆ ಕಲಾಮಾಂತ್ರಿಕ ಕೆ.ಕೆ. ಹೆಬ್ಟಾರರು.

ಉಡುಪಿಯ ಆರ್ಟಿಸ್ಟ್ ಫೋರಂ ಮತ್ತು ದೃಶ್ಯ ಸ್ಕೂಲ್ ಆಫ್ ಆರ್ಟ್ಸ್ ತನ್ನ 22ನೆಯ ವರ್ಷದ ಆಚರಣೆಯ ಸಂದರ್ಭದಲ್ಲಿ 22 ಮಂದಿ ಕಲಾವಿದರ 44 ಕಲಾಕೃತಿಗಳನ್ನು ಪ್ರದರ್ಶಿಸಿತು. ಅನಿಲ್, ಮನ ಮೋಹನ್, ಸುರೇನಾ, ವೈಷ್ಣವಿ ಯಕ್ಷಗಾನ, ಕಂಬಳ, ಕೋಳಿ ಜೂಜು ಹೀಗೆ ಜಾನಪದ ವಿಷಯಗಳನ್ನು ಆಯ್ದು, ವಿಷಯಕ್ಕೆ ತಕ್ಕಂತೆ ತೀವ್ರತೆ, ಆಕರ್ಷಕತೆ ಮತ್ತು ವರ್ಣ ವೈವಿಧ್ಯಗಳನ್ನು ಸೊಗಸಾಗಿ ನಿರೂಪಿಸಿ ದ್ದಾರೆ. ಸೌಪಿಕಾ, ಮೇಧಾ, ಪವನ್ರಾಜ್, ಲಕ್ಷ್ಮೀ, ಚೈತ್ರಾ, ಸ್ವಾತಿರಾಜ್, ಸ್ನೇಹಲ್ ಕೃಷ್ಣನ ಕೊಳಲ ಧ್ವನಿಗೆ ಭಾವಪರವಶಳಾದ ಗೋಪಿಕಾ ಸ್ತ್ರೀ ಮತ್ತು ಗೋವು, ಕೊಳಲ ವ್ಯಾಪಾರಿ, ಮುಸ್ಸಂಜೆಯಲ್ಲಿ ದೇವಾಲಯ, ರಥೋತ್ಸವ, ಕನಕನ ಕಿಂಡಿ, ರಥ ಚಕ್ರ ಮತ್ತು ಗೋವು ಇವುಗಳನ್ನು ಕಲಮ್ಕರಿ, ಮೂರ್ತ, ಅರೆ ಅಮೂರ್ತ ಶೈಲಿಗಳಲ್ಲಿ ಅಭಿವ್ಯಕ್ತಿಗೊಳಿಸಿರುವುದು ಮೆಚ್ಚುಗೆಯ ಅಂಶ. ಗಾಯತ್ರಿ, ಮನೀಶಾ ಶಿಲ್ಪಕಲೆ ಆಧಾರಿತ ಕೃತಿ ಗಳಲ್ಲಿ ಮೂರು ಆಯಾಮಗಳನ್ನು ವ್ಯಕ್ತಪಡಿಸಲು ಕಡು ಮತ್ತು ತಿಳಿ ಬಣ್ಣಗಳನ್ನು ಬಳಸಿರುವುದು ಜತೆಗೆ ಒರಟು ಮತ್ತು ನುಣುಪಾದ ಮೇಲ್ಮೆ„ ತೋರ್ಪಡಿಸಿ ಕೌಶಲ ಪ್ರಕಟಿಸಿದ್ದಾರೆ. ಶ್ವೇತಾ, ಅಶೋಕ್, ಶ್ವೇತಾ ಇವರ ನೀಲಾಕಾಶ ಮತ್ತು ನೀಲಕಡಲು, ಬಂಡೆಗಳ ನಡುವೆ ನೀರು, ಕಲುಷಿತ ನೀರಿನಿಂದ ಸತ್ತ ಮತ್ಸ್ಯರಾಶಿಯ ನಡುವೆ ಸ್ತ್ರೀ ಮುಂತಾಗಿ ಕಡಲತೀರದ ದ್ವಂದ್ವ ನೋಟ ಗಳನ್ನು ಅಭಿವ್ಯಕ್ತಿಗೊಳಿಸಿತ್ತು. ಚಂದ್ರಕಲಾ ಅವರ ಹಸಿರು ಪ್ರಕೃತಿಯ ನಡುವೆ ಹೊರೆ ಹೊತ್ತು ಬರುತ್ತಿ ರುವ ಮಹಿಳೆ, ಅನುಷಾ ಅವರ ಮುಚ್ಚಿದ ಬಾಗಿಲು ಮತ್ತು ಹಾಡುಗಾರ್ತಿಯರು, ಪ್ರದೀಪ್ ಮತ್ತು ಸ್ನೇಹಾ ಅವರ ಅಕಾಡೆಮಿಕ್ ಶೈಲಿಯ ಕೃತಿಗಳು, ವಸಂತಲಕ್ಷ್ಮೀ ಅವರ ಪಾಳುಬಿದ್ದ ಮನೆ, ಮನ್ಪ್ರೀತ್ ಚಬ್ಟಾ ಅವರ ವೇಗದ ಸ್ಟ್ರೋಕ್ಸ್ಗಳಲ್ಲಿ ಪ್ರಕೃತಿಯ ಸೌಂದರ್ಯ ಸೊಗಸಾಗಿ ಮೂಡಿಬಂದಿತ್ತು.

ಎಲ್ಲಾ ಕಲಾಕೃತಿಗಳು ಉತ್ತಮ ಕಂಪೋಸ್ ಹಾಗೂ ಹಿತಮಿತವಾದ ವರ್ಣ ಸಂಯೋಜನೆಯಿಂದ ಭಾವೀ ಕಲಾವಿದರ ಪ್ರತಿಭೆ ಅನಾವರಣಗೊಳಿಸಿದ್ದವು.