ಅಕ್ಕ ಬಂದ ಮೇಲೆ ತಂಗಿ ಬರದೇ ಇರ್ತಾಳಾ? ಬಂದೇ ಬರ್ತಾಳೆ. ಅಕ್ಕನ ರೀತೀನೇ ಮಿಂಚಬೇಕೆಂದು ಆಸೆ ಇರಲ್ವಾ? ಕೆಲವು ನಟಿಯರು ಅಕ್ಕಂದಿರ ಬೆಂಬಲದೊಂದಿಗೆ ಬಂದರೆ, ಇನ್ನು ಕೆಲವರು ತಮ್ಮ ಸ್ವಂತ ಪರಿಶ್ರಮದಿಂದ ಬರುತ್ತಾರೆ. ಪೂಜಾ ಗಾಂಧಿ ತಮ್ಮ ತಂಗಿ ರಾಧಿಕಾರನ್ನು ನಾಯಕಿಯಾಗಿ ಕರೆತಂದರು. ಆದರೆ ಆಕೆಯ ಅದೃಷ್ಟ ಸರಿ ಇರಲಿಲ್ಲ. ಆಕೆ ಕ್ಲಿಕ್ ಆಗಲಿಲ್ಲ. ಪ್ರತಿಭೆ ಇದ್ದವರು ಇಲ್ಲಿ ನಿಲ್ಲುತ್ತಾರೆ, ಬರೀ ಅಂಕು-ಡೊಂಕು, ವೈಯ್ನಾರ ಇದ್ದವರು ಬಂದ ದಾರಿಗೆ ಸುಂಕವಿಲ್ಲವೆಂದು ಹೋಗುತ್ತಾರೆ. ಈಗ ವಿಷ್ಯ ಏನಂದ್ರೆ, ನಟಿ ಸಂಜನಾ ತಂಗಿ ನಿಕಿ ನಾಯಕಿಯಾಗಿ ಎಂಟ್ರಿಕೊಡುತ್ತಿದ್ದಾರೆ. ಅದು 'ಅಜಿತ್' ಸಿನಿಮಾ ಮೂಲಕ. ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು ಮಹೇಶ್ ಬಾಬು ನಿರ್ದೇಶಿಸುತ್ತಿದ್ದಾರೆ. ಅಂದಹಾಗೆ, ಮಹೇಶ್ ಬಾಬು ಕನ್ನಡಕ್ಕೆ ಒಂದಷ್ಟು ಹೊಸ ನಾಯಕಿಯರನ್ನು ಪರಿಚಯಿಸುತ್ತಲೇ ಇದ್ದಾರೆ. ನಾಯಕಿಯರ ವಿಷಯದಲ್ಲಿ ಮಹೇಶ್ ಬಾಬು ಲಕ್ಕಿ ಹ್ಯಾಂಡ್. ಈ ಹಿಂದೆ ಮಹೇಶ್ ಬಾಬು ತಮ್ಮ 'ಮೆರವಣಿಗೆ' ಚಿತ್ರದ ಐಂದ್ರಿತಾ ರೇಯನ್ನು ಕರೆತಂದರು. ಈಗ ಐಂದ್ರಿತಾ ಕನ್ನಡ ಚಿತ್ರರಂಗದಲ್ಲಿ ಬ್ಯುಸಿ ಹಾಗೂ ಬೇಡಿಕೆಯ ನಟಿ. ಇನ್ನು 'ಚಿರು' ಚಿತ್ರದ ಮೂಲಕ ಮಹೇಶ್ ಬಾಬು ಕೃತಿ ಕರಬಂದಗೆ ಎಂಟ್ರಿ ಕೊಡಿಸಿದರು. ಈಗ ಕೃತಿ ಕೂಡಾ ನಾಯಕಿಯಾಗಿ ಬೇಡಿಕೆಯಲ್ಲಿದ್ದಾರೆ. ಅದು ಕೇವಲ ಕನ್ನಡವಷ್ಟೇ ಅಲ್ಲದೇ, ತಮಿಳು, ತೆಲುಗಿನಲ್ಲೂ ಕೃತಿಗೆ ಒಳ್ಳೆಯ ಆಫರ್ ಇದೆ. ಈಗ ನಿಕಿ ಸರದಿ. ಈ ನಿಕಿಗೆ ಸಿನಿಮಾ ಲೋಕ ಹೊಸದು. ಆದರೆ ಗ್ಲಾಮರ್, ಫ್ಯಾಶನ್ ಲೋಕ ಹೊಸದಲ್ಲ. ಏಕೆಂದರೆ ಈಕೆ ಮಾಡೆಲಿಂಗ್ ಮಾಡುತ್ತಿದ್ದವಳು. ಅದೆಷ್ಟೋ ಬ್ರಾಂಡ್ಗಳಲ್ಲಿ ನಿಕಿ ಕಾಣಿಸಿಕೊಂಡಿದ್ದಾಳೆ. ಈಗ ಸಿನಿಮಾ ಎಂಟ್ರಿ. ತಮ್ಮ ಸಿನಿಮಾಕ್ಕೆ ಹೊಸ ಮುಖ ಬೇಕಾದ ಕಾರಣ ನಿಕಿಗೆ ಮಣೆ ಹಾಕಿದ್ದಾಗಿ ಹೇಳುತ್ತಾರೆ ಮಹೇಶ್ ಬಾಬು. ಸಂಜನಾ ಕೂಡಾ ತುಂಬಾ ಆಸೆಯಿಂದ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಆದರೆ ಅದ್ಯಾಕೋ ಸಂಜನಾಗೆ ಹೇಳಿಕೊಳ್ಳುವಂಥ ಅವಕಾಶಗಳು ಸಿಗಲಿಲ್ಲ. ಸಿಕ್ಕರೂ ಸೋಲೋ ಹೀರೋಯಿನ್ ಪಾತ್ರಗಳು ಅಷ್ಟಾಗಿ ಬರಲಿಲ್ಲ. ಈಗ ಅವರ ತಂಗಿ ನಿಕಿಯ ಅದೃಷ್ಟ ಹೇಗಿದೆಯೋ ಕಾದು ನೋಡಬೇಕು. ಅಂದಹಾಗೆ, 'ಅಜಿತ್'ಗೆ ಜ.24ಕ್ಕೆ ಮುಹೂರ್ತ.