Udayavani | Jan 25, 2013
ಕೆಲವು ತೆಲುಗು ಸಿನಿಮಾಗಳೇ ಹಾಗೆ. ಅದೊಂಥರಾ ಅಂದಿರಿಕಿ ಮಂಚಿವಾಳ್ಳು ಸಿನಿಮಾ ತರಹ. ಒಂದು ಚಿತ್ರ ಮಾಡಿದರೆ ಅದು ಎಲ್ಲರಿಗೂ ಇಷ್ಟವಾಗಬೇಕು. ಮಲ್ಟಿಪ್ಲೆಕ್ಸ್ನವರೂ ಖುಷಿಪಡಬೇಕು, ಚಿತ್ರಮಂದಿರದಲ್ಲಿ ನೋಡುವವರೂ ಶಿಳ್ಳೆ ಹೊಡೆಯಬೇಕು. ಚಿತ್ರದಲ್ಲಿ ಕಾಮಿಡಿ, ಆ್ಯಕ್ಷನ್, ಸೆಂಟಿಮೆಂಟ್ಗಳೆಲ್ಲಾ ಹದವಾಗಿ ಬೆರೆತಿರಬೇಕು ... ಹೀಗೆ ಹಲವು ಮಾನದಂಡಗಳು. ಇದೆಲ್ಲದರಿಂದ ಚಿತ್ರ ಸ್ವಲ್ಪ ಉದ್ದವಾದರೂ ಆ ಚಿತ್ರಗಳೆಲ್ಲಾ ಗೆದ್ದಿವೆ. ಅದನ್ನೇ ಯಥಾವತ್ತಾಗಿ ಅಥವಾ ಅದಕ್ಕಿಂತ ಹೆಚ್ಚು ಮಾಡಿ ಕನ್ನಡಕ್ಕೆ ತಂದಾಗ ಬಹಳಷ್ಟು ಚಿತ್ರಗಳು ಬ್ಯಾಲೆನ್ಸ್ ಕಳೆದುಕೊಂಡಿವೆ.
'ವರದನಾಯಕ'ನದ್ದೂ ಅದೇ ಕಥೆ. ತೆಲುಗಿನ 'ಲಕ್ಷ್ಯಂ' ಚಿತ್ರದ ರೀಮೇಕ್ ಆದ ಈ ಕಥೆಯನ್ನ ಬಿಡಿಸಿ ಹೇಳಬೇಕು ಎಂದರೆ ವರದನಾಯಕ ಎಂಬ ಕಡಕ್ ಪೊಲೀಸ್ ಆಫೀಸರ್, ಸೆಕ್ಷನ್ ಶಂಕರ ಎಂಬ ಇಂಚಿಂಚೂ ಕಾನೂನು ಬಲ್ಲ ಗ್ಯಾಂಗ್ಸ್ಟರ್ ಒಬ್ಬನ ನಡುವಿನ ಕಥೆ ಇದು. ಸೆಕ್ಷನ್ ಶಂಕರ ಎಂಥಾ ಘನಘೋರ ಕೃತ್ಯಗಳನ್ನು ಎಸಗಿದರೂ, ಕಾನೂನಿನ ಸೆಕ್ಷನ್ಗಳನ್ನು ಉಪಯೋಗಿಸಿಕೊಂಡು ಬಚಾವಾಗುತ್ತಿರುತ್ತಾನೆ. ಅವನನ್ನು ವರದನಾಯಕ ಅನೇಕ ರೀತಿ ಹಣಿಯುತ್ತಾ ಹೋಗುತ್ತಾನೆ. ಸಿಂಹದ ಘರ್ಜನೆಯೆದುರು ಯಾವ ಆಟವೂ ನಡೆಯುವುದಿಲ್ಲ ಎಂದು ಅರ್ಥ ಮಾಡಿಕೊಳ್ಳುವ ಸೆಕ್ಷನ್ ಶಂಕರ್ ಗುಳ್ಳೆ ನರಿ ಆಟವಾಡಿ ಕೊಲ್ಲುತ್ತಾನೆ. ದೇವರು ಕಣ್ಮರೆಯಾಗಿ, ಸೈತಾನ ಮೆರೆಯುವಾಗ ದೇವರು ಅವನ ತಮ್ಮನ ರೂಪದಲ್ಲಿ ಬಂದು ದುಷ್ಟ ಶಿಕ್ಷಕ, ಶಿಷ್ಟ ರಕ್ಷಕನಾಗುತ್ತಾನೆ.
ಈ ಕಥೆಗೆ ತೆಲುಗು ಸ್ಪರ್ಶ ಸಿಕ್ಕರೆ ಒಂದು ಪಕ್ಕಾ ಆ್ಯಕ್ಷನ್ ಚಿತ್ರವಾಗಬಹುದಾಗಿದ್ದು ಲವ್ವು, ಸೆಂಟಿಮೆಂಟು, ಕಾಮಿಡಿ, ತಂತ್ರ-ಪ್ರತಿತಂತ್ರ ಎಲ್ಲವೂ ಸೇರಿ ಅದು ಬೇರೆಯದೇ ರೂಪ ಪಡೆಯುತ್ತದೆ. ಚಿಕ್ಕದಾಗಿ, ಚೊಕ್ಕದಾಗಿ ಹೇಳಬಹುದಾಗಿದ್ದ ಕಥೆಗೆ ನೂರೆಂಟು ಟ್ವಿಸ್ಟು, ಟನುìಗಳು ಸೇರಿ ಅದು ಬೇರೆಯದೇ ರೂಪ ಪಡೆಯುತ್ತದೆ. ಹಾಗೆ ನೋಡಿದರೆ ಅಭಿನಯದ ವಿಚಾರದಲ್ಲಾಗಲೀ, ತಾಂತ್ರಿಕತೆಯ ವಿಚಾರದಲ್ಲಾಗಲೀ ಇದು ಅತ್ಯಂತ ಶ್ರೀಮಂತ ಚಿತ್ರ. ಕೆಲವು ಮೈ ಜುಂ ಎನ್ನುವಂಥ ಆ್ಯಕ್ಷನ್ ದೃಶ್ಯಗಳು, ಸುದೀಪ್ ಮತ್ತು ರವಿಶಂಕರ್ರವರ ಅದ್ಭುತ ಅಭಿನಯ, ಕೆಲವು ಮನಕುಲುಕುವಂಥಾ ಘಟನೆಗಳು, ಹೊಡೆದಾಟದ ದೃಶ್ಯಗಳನ್ನು ಸೆರೆಹಿಡಿರುವ ರೀತಿ ... ಆದರೆ, ಚಿತ್ರ ಅಗತ್ಯಕ್ಕಿಂತ ದೊಡ್ಡದಾಗಿದೆ ಎನಿಸುತ್ತದೆ. ಕೆಲವು ದೃಶ್ಯಗಳು ಅನಗತ್ಯ ಎಂದನಿಸಿದರೆ, ಇನ್ನೂ ಕೆಲವು ದೃಶ್ಯಗಳು ನಿಧಾನವಾಗಿ ಸಾಗಿ ಚಿತ್ರದ ಓಟಕ್ಕೆ ವಿಪರೀತ ಅಡ್ಡಗಾಲು ಹಾಕುತ್ತದೆ. ಈ ಸಮಸ್ಯೆ ಮೊದಲಾರ್ಧದಲ್ಲಿ ವಿಪರೀತ ಜೋರು. ಆದರೆ, ಸೆಕೆಂಡ್ ಹಾಫ್ ಉಸಿರು ಬಿಗಿ ಹಿಡಿದುಕೊಂಡು ನೋಡುವಂತೆ ಮಾಡುತ್ತದೆ. ಆ ನಿಟ್ಟಿನಲ್ಲಿ ಚಿತ್ರವನ್ನು ಸ್ವಲ್ಪ ಟ್ರಿಮ್ ಮಾಡಿದ್ದರೆ ಮತ್ತು ಅನಗತ್ಯ ದೃಶ್ಯಗಳನ್ನು ಕತ್ತರಿಸಿ ಬಿಸಾಕಿದ್ದರೆ, ಅಯ್ಯಪ್ಪ ಶರ್ಮ ನಿರ್ದೇಶನದ 'ವರದನಾಯಕ' ಕನ್ನಡದ ಸೂಪರ್ ಕಮರ್ಷಿಯಲ್ ಚಿತ್ರ ಎಂದನಿಸಿಕೊಳ್ಳುತಿತ್ತು.
ಆದರೂ ಚಿತ್ರವನ್ನು ನೋಡುವಂತೆ ಮಾಡುವುದು ಅಭಿನಯ ಮತ್ತು ತಾಂತ್ರಿಕ ಅಂಶಗಳು. 'ಕೆಂಪೇಗೌಡ'ದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಸುದೀಪ್, ಈ ಚಿತ್ರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಆಕ್ಷÂನ್ ದೃಶ್ಯಗಳಲ್ಲಿ ಬೋರ್ಗರೆಯುವ ಅವರು ಮಿಕ್ಕಂತೆ ತಣ್ಣಗೆ ಹರಿಯುತ್ತಾರೆ. ಒಟ್ಟಾರೆ ಬಹಳ ದಿನಗಳ ನಂತರ ಮತ್ತೆ ಎಂಟ್ರಿ ಕೊಟ್ಟು ಅಭಿಮಾನಿಗಳನ್ನು ಕುಣಿಸಿ ಹಾಕಿದ್ದಾರೆ. ಸುದೀಪ್ ಬಿಟ್ಟರೆ ನಂತರದ ಸ್ಥಾನಗಳು ರವಿಶಂಕರ್ ಮತ್ತು ಚಿರುಗೆ ಸಲ್ಲುತ್ತದೆ. ಚಿರು ಸಾಕಷ್ಟು ಸುಧಾರಿಸಿದ್ದಾರೆ ಎಂಬುದು ಈ ಚಿತ್ರದ ಮುನ್ಸೂಚನೆ. ಮಿಕ್ಕಂತೆ ನಿಖೀಶಾ ಪಟೇಲ್, ಮುಖ್ಯಮಂತ್ರಿ ಚಂದ್ರು, ರಾಕ್ಲೈನ್ ವೆಂಕಟೇಶ್, ಶೋಭರಾಜ್, ಶರತ್ ಲೋಹಿತಾಶ್ವ ನಟನೆ ಗಮನಸೆಳೆಯುತ್ತದೆ. ಸಮೀರಾ ರೆಡ್ಡಿ ಆಟಕ್ಕುಂಟು ಲೆಕ್ಕಕ್ಕಿಲ್ಲ.
ಚಿತ್ರ ಅದ್ಧೂರಿಯಾಗಿರುವುದಷ್ಟೇ ಅಲ್ಲ, ತಾಂತ್ರಿಕವಾಗಿಯೂ ಶ್ರೀಮಂತವಾಗಿದೆ. ರಾಜೇಶ್ ಕಟ್ಟ ಅವರ ಹೊಡೆದಾಟದ ದೃಶ್ಯಗಳ ಚಿತ್ರೀಕರಣ, ಗೌತಮ್ರ ಸಂಕಲನ ಮತ್ತು ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತ ನೋಡುಗರನ್ನು ಹುಚ್ಚೆದ್ದು ಕುಣಿಸುತ್ತದೆ.
ಚಿತ್ರ: ವರದನಾಯಕ
ನಿರ್ಮಾಣ: ಶಂಕರೇಗೌಡ
ನಿರ್ದೇಶನ: ಅಯ್ಯಪ್ಪ ಶರ್ಮ
ತಾರಾಗಣ: ಸುದೀಪ್, ಚಿರು, ನಿಖೀಶಾ ಪಟೇಲ್, ಸಮೀರಾ ರೆಡ್ಡಿ, ರವಿಶಂಕರ್, ಶೋಭರಾಜ್, ಮುಖ್ಯಮಂತ್ರಿ ಚಂದ್ರು ಇನ್ನಿತರರು
- ಚೇತನ್ ನಾಡಿಗೇರ್