Udayavani | Jan 25, 2013
ತಮಿಳಿನ ಖ್ಯಾತ ನಟ ಕಮಲ್ ಹಾಸನ್ ನಿರ್ಮಾಣದ ಮತ್ತು ನಟಿಸಿರುವ ಮಹತ್ವಾಕಾಂಕ್ಷೆಯ ಚಿತ್ರ ವಿಶ್ವರೂಪಂ ಬಿಡುಗಡೆಗೆ ವಿಘ್ನ ಬಂದೊದಗಿದೆ. ಒಂದು ಸಮುದಾಯದ ಭಾವನೆಗೆ ನೋವುಂಟು ಮಾಡುವ ದೃಶ್ಯಗಳು ಇದರಲ್ಲಿವೆ ಎಂಬ ಆರೋಪವನ್ನು ಚಿತ್ರ ಹೊಂದಿದ್ದು, ಬಿಡುಗಡೆಗೆ ತಮಿಳುನಾಡು ಸರ್ಕಾರ ತಾತ್ಕಾಲಿಕ ನಿಷೇಧ ಹೇರಿದೆ. ಇನ್ನೊಂದೆಡೆ ಮದ್ರಾಸ್ ಹೈಕೋರ್ಟ್ ಕೂಡ ನಿಷೇಧಕ್ಕೆ ತಡೆ ನೀಡಲು ನಿರಾಕರಿಸಿದ್ದು, ಜ.28ರಂದು ಈ ಕುರಿತು ತೀರ್ಪು ಪ್ರಕಟಿಸುವುದಾಗಿ ಹೇಳಿದೆ. ಇತಿಹಾಸದತ್ತ ಒಂದು ಬಾರಿ ಕಣ್ಣು ಹಾಯಿಸಿದರೆ, ಹೀಗೆ ವಿವಾದಕ್ಕೊಳಗಾದ ಸಿನೆಮಾಗಳು ಹಲವಾರಿವೆ. ಅತಿ ಹೆಚ್ಚು ವಿವಾದಕ್ಕೊಳಗಾದ ಚಿತ್ರಗಳು ಯಾವುವು?, ವಿವಾದಕ್ಕೆ ಕಾರಣಗಳೇನು ಎಂಬುದರ ಕುರಿತ ಮಾಹಿತಿ ಇಲ್ಲಿದೆ.
70ರ ದಶಕದಲ್ಲೇ ವೇಶ್ಯೆ ಕಥೆ
'ಡರ್ಟಿ ಪಿಕ್ಚರ್' ತರಹದ ಚಿತ್ರವೊಂದು ಆಗಿನ ಕಾಲದಲ್ಲೇ 'ಚೇತ್ನಾ (1970)' ಬಾಲಿವುಡ್ನಲ್ಲಿ ನಿರ್ಮಾಣಗೊಂಡಿತ್ತು. ಅದು ವೇಶ್ಯೆಯೊಬ್ಬಳ ಜೀವನದ ಬಗ್ಗೆ ಹೇಳುವ ಚಿತ್ರವಾಗಿದ್ದು, ಇಡೀ ಭಾರತದಲ್ಲಿ ಬಿಸಿ ಬಿಸಿ ಮಾತುಕತೆಗೆ ವೇದಿಕೆಯೊದಗಿಸಿತ್ತು. ಚಿತ್ರದಲ್ಲಿನ ದೃಶ್ಯಗಳು, ಮಾತುಕತೆಗಳೂ ಬೆಚ್ಚಿ ಬೀಳಿಸುವಂತಿದ್ದವು. ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ರೆಹನಾ ಸುಲ್ತಾನ್, ಕೂಡ ಈ ಚಿತ್ರದಿಂದಾಗಿ ನನ್ನ ವ್ಯಕ್ತಿತ್ವಕ್ಕೆ ಸಾಕಷ್ಟು ಧಕ್ಕೆಯಾಗಿದೆ ಎಂದು ಹೇಳಿಕೊಂಡಿದ್ದರು.
'ಆಂಧಿ' ಮೇಲೆ ಇಂದಿರಾ ಕೋಪ
ಗುಲ್ಜಾರ್ ಅವರು ನಿರ್ದೇಶಿಸಿದ ಆಂಧಿ (1975) ಚಿತ್ರವನ್ನು ಮಾಜಿ ಪ್ರಧಾನಿ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಸಂದರ್ಭ ನಿಷೇಧಿಸಿದ್ದರು. ತಮ್ಮ ಜೀವನವನ್ನಾಧರಿಸಿ ಚಿತ್ರ ನಿರ್ಮಿಸಲಾಗಿದೆ ಎಂಬ ಸುದ್ದಿ ಕೇಳಿಬಂದಿದ್ದರಿಂದ ಇಂದಿರಾ ಈ ನಿರ್ಧಾರ ಕೈಗೊಂಡಿದ್ದರು. ಚಿತ್ರದಲ್ಲಿ ಅಭಿನಯಿಸಿದ್ದ ಸುಚಿತ್ರಾ ಸೇನ್ ಅವರ ವೇಷಭೂಷಣ ಹಾವ ಭಾವಗಳೂ ಇಂದಿರಾ ಅವರನ್ನೇ ಹೋಲುತ್ತಿದ್ದುದು, ವಿವಾದಕ್ಕೆ ತುಪ್ಪ ಸುರಿದಿತ್ತು. ನಿಷೇಧದಿಂದ ನಿರ್ಮಾಪಕರು ಬೇಸತ್ತಿದ್ದು, ಕೊನೆಗೆ, ಚಿತ್ರದ ಪಾತ್ರ ಆರತಿ ಎಂಬಾಕೆ ಇಂದಿರಾಗಾಂಧಿ ಜೀವನದಲ್ಲಿ ತನಗೆ ಮಾದರಿಯಾಗಿದ್ದು, ಆಕೆಯಂತೆ ದೇಶಸೇವೆ ಮಾಡುತ್ತೇನೆ ಎಂದು ಹೇಳುವ ಮಾತುಗಳನ್ನು ಸೇರಿಸಿದ್ದರು. ಆದರೂ ನಿರ್ಮಾಪಕರ ಯತ್ನ ಫಲಕಂಡಿರಲಿಲ್ಲ. ಕೊನೆಗೆ ಕಾಂಗ್ರೆಸ್ ಆಳ್ವಿಕೆ ಬಳಿಕ ಜನತಾಪಕ್ಷ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಡಿಡಿಯಲ್ಲಿ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿತ್ತು.
ಚಿತ್ರ ವಿವಾದದಲ್ಲಿ ಸಂಜಯ್ ಗಾಂಧಿಗೆ ಜೈಲು!
ಕಿಸ್ಸಾ ಕುಸೀì ಕಾ (1978) ಚಿತ್ರ ಬಿಡುಗಡೆಯಾದ ಕೂಡಲೇ, ತೀವ್ರ ವಿವಾದ ಸೃಷ್ಟಿಸಿತ್ತು. ಗುರ್ಗಾಂವ್ನ ಮಾರುತಿ ಕಾರು ಫ್ಯಾಕ್ಟರಿಯಲ್ಲಿ ಚಿತ್ರದ ಪ್ರಿಂಟ್ಗಳಿಗೆ ಬೆಂಕಿ ಹಚ್ಚಲಾಯಿತು. ಕಾರಣ, ಇಂದಿರಾ ಗಾಂಧಿ ಕುಟುಂಬ ಅದರಲ್ಲೂ ಸಂಜಯ್ ಗಾಂಧಿ ಮತ್ತು ಮಾರುತಿ ಕಾರು ಯೋಜನೆ ಕುರಿತಂತೆ ರಾಜಕೀಯ ವಿಡಂಬನೆಯನ್ನು ಚಿತ್ರದಲ್ಲಿ ಮಾಡಲಾಗಿತ್ತು. ಪರಿಣಾಮ ಚಿತ್ರ ಪ್ರದರ್ಶನ ನಿಂತಿತು. ಕಾಂಗ್ರೆಸ್ ಅಧಿಕಾರಾವಧಿ ಬಳಿಕ ಘಟನೆ ಬಗ್ಗೆ ತನಿಖೆಗೆ ಸಮಿತಿಯೊಂದನ್ನು ನೇಮಕ ಮಾಡಲಾಗಿದ್ದು, ಅಹಿತಕರ ಘಟನೆಗೆ ಸಂಜಯ್ ಗಾಂಧಿ ದೋಷಿ ಎಂದು ಹೇಳಿತು. ಒಂದು ತಿಂಗಳು ಜೈಲು ಶಿಕ್ಷೆಯನ್ನೂ ಅವರಿಗೆ ವಿಧಿಸಲಾಗಿತ್ತು.
ಅಪ್ರಾಪೆ¤ ಮೇಲೆ ಬಲಾತ್ಕಾರ
1970ರ 'ಲಿಪ್ಸ್ಟಿಕ್' ರಿಮೇಕ್ ಆದ ಇನ್ಸಾಫ್ಕಾ ತರಾಜು (1980) ಚಿತ್ರವನ್ನು ಬಿ.ಆರ್.ಚೋಪ್ರಾ ನಿರ್ದೇಶಿಸಿದ್ದರು. ಚಿತ್ರದಲ್ಲಿ ಅಪ್ರಾಪೆ¤ಯೋರ್ವಳ ಮೇಲೆ ಅತ್ಯಾಚರವೆಸಗುವ ದೃಶ್ಯವೊಂದಿದ್ದು, ಸಕಾಷ್ಟು ವಿವಾದ ಸೃಷ್ಟಿಸಿತ್ತು. ಚಿತ್ರದ ಪ್ರಚಾರಕ್ಕಿಂತಲೂ ಹೆಚ್ಚಿಗೆ ಈ ವಿವಾದವೇ ಸುದ್ದಿ ಮಾಡಿತ್ತು. ಆದಾಗ್ಯೂ ಬಾಕ್ಸ್ ಆಫೀಸ್ನಲ್ಲಿ ಸಾಕಷ್ಟು ಗಳಿಕೆಗೇನೂ ಕೊರತೆಯಾಗಿರಲಿಲ್ಲ.
ಭುಗಿಲೆದ್ದ 'ಫೈರ್' ವಿವಾದ
ದೀಪಾ ಮೆಹ್ತಾ ನಿರ್ಮಾಣದ ಫೈರ್ (1996) ಚಿತ್ರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕಾರಣ ಚಿತ್ರದಲ್ಲಿ ಸಲಿಂಗಕಾಮವನ್ನು ತೋರಿಸಲಾಗಿತ್ತು. 'ಎ' ಪ್ರಮಾಣಪತ್ರ ಹೊಂದಿದ್ದ ಈ ಚಿತ್ರದಲ್ಲಿ ಶಬನಾ ಅಜ್ಮಿ ಮತ್ತು ನಂದಿತಾ ಬಸು ಮುಖ್ಯಭೂಮಿಕೆಯಲ್ಲಿದ್ದರು. ದಾಂಪತ್ಯ ಸರಿಹೋಗದ ಕಾರಣ ಅತ್ತಿಗೆಯಂದಿರಿಬ್ಬರುಸಲಿಂಗಕಾಮದತ್ತ ಹೊರಳುವ ಚಿತ್ರಣ ಇದರಲ್ಲಿತ್ತು. ಚಿತ್ರ ವಿವಾದಕ್ಕೇ ಸಾಕಷ್ಟು ಪ್ರಚಾರ ಪಡೆದುಕೊಂಡಿದ್ದು, ಚಲನಚಿತ್ರೋತ್ಸವಗಳಲ್ಲೂ ವಿರುದ್ಧ ಅಭಿಪ್ರಾಯಗಳು ಕೇಳಿಬಂದಿದ್ದವು.
'ನನ್ನ ಕಥೆ ಸರಿಯಿಲ್ಲ'
ಚಂಬಲ್ ಕಣಿವೆಯ ರಾಣಿಯಾಗಿ ಮೆರೆದಿದ್ದ, ಡಕಾಯತಿಗೆ ಪ್ರಸಿದ್ಧಳಾದ ಫೂಲನ್ ದೇವಿ ಜೀವನವನ್ನಾಧರಿಸಿ ಬಂದಿತ್ ಕ್ವೀನ್ (1994) ಚಿತ್ರ ನಿರ್ಮಾಣವಾಗಿತ್ತು. ಆದರ ಚಿತ್ರದಲ್ಲಿ ವಿಪರೀತ ಅಶ್ಲೀಲತೆ, ನಗ್ನ ದೃಶ್ಯಗಳು, ಹಿಂಸೆಯನ್ನು ವೈಭವೀಕರಿಸಲಾಗಿದೆ ಎಂದು ಸೆನ್ಸಾರ್ ಮಂಡಳಿ ಚಿತ್ರ ಬಿಡುಗಡೆಗೆ ತಗಾದೆ ತೆಗೆದಿತ್ತು. ಬಳಿಕ ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಆದಾಗ್ಯೂ ಚಿತ್ರ ಬಿಡುಗಡೆಗೆ ಸ್ವತಃ ಫೂಲನ್ ದೇವಿ ವಿರೋಧ ವ್ಯಕ್ತಪಡಿಸಿದ್ದು ತಮ್ಮನ್ನು ತೀರ ಕೆಟ್ಟವರನ್ನಾಗಿ ಚಿತ್ರಿಸಲಾಗಿದೆ ಎಂದು ಕೋರ್ಟ್ನಿಂದ ತಡೆಯಾಜ್ಞೆಯನ್ನೂ ತಂದಿದ್ದರು.
ಮುಂಬೈ ಸ್ಫೋಟದ ಕರಿನೆರಳು
1993ರ ಮುಂಬೈ ನ್ಪೋಟ ಬಗ್ಗೆ ಪತ್ರಕರ್ತ ಹುಸೈನ್ ಜೈದಿಯವರು ಬರೆದ ಪುಸ್ತಕವನ್ನು ಆಧಾರವಾಗಿರಿಸಿ, ಬ್ಲ್ಯಾಕ್ ಫ್ರೈಡೇ (2004) ಚಿತ್ರ ನಿರ್ಮಿಸಲಾಗಿತ್ತು.ಆದರೆ ಚಿತ್ರ ಬಿಡುಗಡೆ ಸಂದರ್ಭ ಸ್ಫೋಟದ ಆರೋಪಿಗಳು ತಗಾದೆ ತೆಗೆದಿದ್ದು, ಚಿತ್ರ ಬಿಡುಗಡೆಗೆ ತಡೆ ನೀಡಲಾಗಿತ್ತು. 2 ವರ್ಷದ ಬಳಿಕ ತೀರ್ಪು ಬಂದಿದ್ದು, ಆ ಬಳಿಕವೇ ಚಿತ್ರ ಬಿಡುಗಡೆಗೊಂಡಿತ್ತು.
'ಸಿನ್ಸ್'ಗೆ ಕ್ರೈಸ್ತ ಸಮುದಾಯದ ಘೇರಾವ್
ಪತ್ರಕರ್ತ ವಿನೋದ್ ಪಾಂಡೆ ನಿರ್ದೇಶಿಸಿದ್ದ ಸಿನ್ಸ್ (2005) ಚಿತ್ರ ಕ್ರೈಸ್ತ ಸಮುದಾಯದ ತೀವ್ರ ವಿರೋಧಕ್ಕೆ ತುತ್ತಾಗಿತ್ತು. ಈ ಬಗ್ಗೆ ಕ್ಯಾಥೋಲಿಕ್ ಕ್ರಿಶ್ಚಿಯನ್ ಸಮುದಾಯ ದೇಶಾದ್ಯಂತ ಪ್ರತಿಭಟನೆಯನ್ನೂ ನಡೆಸಿತ್ತು. ಅಕ್ರಮ ಸಂಬಂಧದ ಕುರಿತಂತೆ ಹೇಳುವ ಚಿತ್ರ ಇದಾಗಿತ್ತು. ತೀವ್ರ ವಿರೋಧದ ಕಾರಣ ಕಡೆಗೆ ಚಿತ್ರವನ್ನು ನಿಷೇಧಿಸಲಾಗಿತ್ತು.
'ಜೋಧಾ ಅಕºರ್' ಸುಳ್ಳಾ?
ಅಶುತೋಷ್ ಗೌರೀಕರನ್ ನಿರ್ಮಾಣದ ಜೋಧಾ ಅಕºರ್ (2008) ಚಿತ್ರ ಬಿಡುಗಡೆ ವೇಳೆಗೆ ದೊಡ್ಡ ವಿವಾದವನ್ನು ಸೃಷ್ಟಿಮಾಡಿತ್ತು. ಚಿತ್ರದಲ್ಲಿ ಐತಿಹಾಸಿಕ ವಿಚಾರವನ್ನು ತಿರುಚಲಾಗಿದೆ ಎಂದು ಆರೋಪ ಕೇಳಿ ಬಂದಿತ್ತು. ಜೋಧಾ ಅಕºರ್ ಹೆಂಡತಿಯಲ್ಲ ಬದಲಿಗೆ ಸೊಸೆ ಎಂದು ಪ್ರತಿಭಟನಕಾರರ ದನಿಯಾಗಿತ್ತು. ಈ ವಿಚಾರ ಕುರಿತಂತೆ ವಿವಾದ ತೀವ್ರಗೊಂಡಿದ್ದರಿಂದ ರಾಜಸ್ತಾನ ಮತ್ತು ಮಧ್ಯಪ್ರದೇಶಗಳಲ್ಲಿ ಚಿತ್ರಕ್ಕೆ ನಿಷೇಧ ಹೇರಲಾಗಿತ್ತು.
ಭಾರತದಲ್ಲಿ 'ವಾಟರ್' ಕಷ್ಟ!
1930ರಲ್ಲಿ ವಿಧವೆಯರ ಜೀವನವನ್ನಾಧರಿಸಿ ತೆಗೆದ ಚಿತ್ರ ವಾಟರ್ (2005). ಹಿಂದೂ ಭಾವನೆಗಳನ್ನು ನೋಯಿಸಲಾಗುತ್ತಿದೆ ಎಂದು, ಚಿತ್ರೀಕರಣದ ವೇಳೆಯೇ ಗಂಗಾ ನದೀ ತೀರದಲ್ಲಿದ ಪ್ರತಿಭಟನಕಾರರು ಗದ್ದಲವೆಬ್ಬಿಸಿದ್ದರು. ದೀಪಾ ಮೆಹ್ತಾ ಚಿತ್ರದ ನಿರ್ಮಾಪಕರಾಗಿದ್ದು, ಪ್ರತಿಭಟನೆ ನಿಲ್ಲದ ಕಾರಣ ಭಾರತದಲ್ಲಿ ಚಿತ್ರದ ಚಿತ್ರೀಕರಣದ ಐಡಿಯಾವನ್ನೇ ಕೈಬಿಟ್ಟು ಶ್ರೀಲಂಕಾದಲ್ಲಿ ಮಾಡಲಾಯಿತು.
'ಫನಾ' ಜೊತೆ ಗುಜರಾತ್ ಗುದ್ದಾಟ
ಅಮೀರ್ ಖಾನ್-ಕಾಜೋಲ್ ಅಭಿನಯದ ಫನಾ (2005) ಚಿತ್ರದ ಬಗ್ಗೆ ಪ್ರಚಾರಕ್ಕಾಗಿ ಅಮೀರ್ ಗುಜರಾತಗೆ ತೆರಳಿದ್ದರು. ಅದರಂತೆ ಭಾಷಣದ ವೇಳೆ ನರ್ಮದಾ ಅಣೆಕಟ್ಟಿನಿಂದಾಗಿ ನಿರಾಶ್ರಿತರಾದ ರೈತರಿಗೆ ಮರುವಸತಿ ಕಲ್ಪಿಸಲು ಆಗ್ರಹಿಸಿದ್ದರು. ಇದಕ್ಕೆ ಗುಜರಾತ್ ಸರ್ಕಾರ ಆಕ್ಷೇಪ ಪಡಿಸಿತ್ತು. ಆದರೆ ಅಮೀರ್, ತಾವು ಸುಪ್ರೀಂ ಕೋರ್ಟ್ ಆದೇಶದಂತೆ ರೈತರ ಪರ ಆಗ್ರಹ ಸಲ್ಲಿಸಿದ್ದಾಗಿ ಹೇಳಿದ್ದರು. ಈ ವಿವಾದದೊಂದಿಗೆ ಚಿತ್ರದ ಕಥೆಯಲ್ಲಿ ಕಾಶ್ಮೀರಿ ಅಂಧ ಯುವತಿ ಪಾಕ್ನ ಭಯೋತ್ಪಾದಕನನ್ನು ಪ್ರೀತಿಸುವಂತೆ ಚಿತ್ರಿಸಲಾಗಿತ್ತು. ಇದು ಕೆಲ ಸಂಘಟನೆಗಳ ಆಕ್ರೋಶಕ್ಕೆ ತುತ್ತಾಗಿತ್ತು ಈ ಮೇಲಾಟದಲ್ಲಿ, ಗುಜರಾತ್ನಲ್ಲಿ ಚಿತ್ರವನ್ನು ಸ್ಪಲ್ಪ ಕಾಲ ನಿಷೇಧಿಸಲಾಗಿತ್ತು. ಆದಾಗ್ಯೂ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಸಿತ್ತು.