ವೈ.ಜಿ.ಮುರಳೀಧರ | Jan 27, 2013
ಆರೋಗ್ಯವಿಮೆ ಎನ್ನುವುದು ಕಣ್ಣಾಮುಚ್ಚಾಲೆ ಆಟ. ಕಂಪನಿಗಳು ಪಾಲಿಸಿದಾರರನ್ನು ನಾನಾ ವಿಧದಲ್ಲಿ ಮೋಸಮಾಡುತ್ತಿದೆ ಎನ್ನುವ ದೂರುಗಳು ಬರುತ್ತಲೇ ಇದೆ. ಆದರೆ ಇದಕ್ಕೆ ಕೊನೆ ಮಾತ್ರ ಕಾಣುತ್ತಿಲ್ಲ. ನಿಮಗೆ ಮೊದಲೇ ಕಾಯಿಲೆ ಇದೆ ಅಂತಲೋ, ಈ ರೋಗದ ಬಗ್ಗೆ ನೀವು ಯಾವುದೇ ಮಾಹಿತಿ ನೀಡಿಲ್ಲ ಅಂತಲೋ ಹೇಳಿ ಕಂಪನಿಗಳು ನಸುಳಿಕೊಂಡು ಹೋಗುತ್ತಿವೆ. ಹಿಡಿಯೋರು ಯಾರು?
ಮೆಡಿಕ್ಲೈಮ್ ಪಾಲಿಸಿ (ಹೆಲ್ತ್ ಇನ್ಷೊರೆನ್ಸ್) ಜಾರಿಗೆ ಬಂದಾಗಿನಿಂದ ಪಾಲಿಸಿದಾರರು ತಾವು ಮಾಡಿದ ವೆಚ್ಚವನ್ನು ವಿಮಾ ಕಂಪನಿಯಿಂದ ಹಿಂಪಡೆಯಲು ಹರಸಾಹಸ ಪಡಬೇಕಾಗಿದೆ. ವಿಮಾ ಕಂಪನಿಗಳು ಅನೇಕ ರೀತಿಯ ಕಾರಣಗಳನ್ನು ಒಡ್ಡಿ ಪಾಲಿಸಿದಾರರಿಗೆ ತೊಂದರೆ ನೀಡುತ್ತಿರುವುದು ಕಂಡು ಬಂದಿದೆ. ಗ್ರಾಹಕ ವೇದಿಕೆಗಳಲ್ಲಿ ದಾಖಲಾಗಿರುವ ಪ್ರಕರಣಗಳೇ ಇದಕ್ಕೆ ಸಾಕ್ಷಿ$. ಬಳಕೆದಾರರು ಪಾಲಿಸಿ ತೆಗೆದುಕೊಳ್ಳುವಾಗ ಅವರಿಗಿದ್ದ ಕಾಯಿಲೆ/ರೋಗದ ಪ್ರೀ ಎಕ್ಸಿಸ್ಟಿಂಗ್ ಡಿಸೀಸ್ ಬಗ್ಗೆ ಮಾಹಿತಿ ನೀಡದೆ ವಿಮಾ ಕಂಪನಿಗೆ ವಂಚನೆ ಮಾಡಿದ್ದಾರೆ ಎಂಬುದು ಬಹುದೊಡ್ಡ ಸಮಸ್ಯೆಯಾಗಿದೆ. ಈ ಕಾರಣದಿಂದಲೇ ವಿಮೆ ಹಣವನ್ನು ನೀಡಲು ಕಂಪನಿಗಳು ತಕರಾರು ಮಾಡುತ್ತಿದೆ. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅಗತ್ಯ.
ಸುಶೀಲ್ ಕುಮಾರ ಜೈನ್ ಎಂಬುವವರು ತಮಗೆ ಮತ್ತು ತಮ್ಮ ಕುಟುಂಬದ ಎಲ್ಲ ಸದಸ್ಯರಿಗೆ ಯುನೈಟೆಡ್ ಇಂಡಿಯಾ ಇನ್ಷೊರೆನ್ಸ್ ಕಂಪನಿಯ ಮೆಡಿಕ್ಲೈಮ್ ಪಾಲಿಸಿ ಖರೀದಿಸಿದ್ದರು. ಜೈನ್ ಅವರಿಗೆ ಎದೆನೋವು ಕಾಣಿಸಿಕೊಂಡು ಅದಕ್ಕೆ ಚಿಕಿತ್ಸೆ ಪಡೆದರು. ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಅದಕ್ಕೆ ತಗುಲಿದ ಮೊತ್ತ ರೂ.1,32,335 ರೂ.ಅನ್ನು ಮರಳಿ ಪಡೆಯಲು ವಿಮಾ ಕಂಪೆನಿಗೆ ದಾಖಲೆಗಳನ್ನು ಸಲ್ಲಿಸಿದರು.. ಜೈನ್ ಅವರು ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದ ವಿಷಯವನ್ನು ಮುಚ್ಚಿಟ್ಟಿದ್ದಾರೆ ಎಂಬ ಕಾರಣ ನೀಡಿ ವಿಮಾ ಕಂಪನಿ ಕ್ಲೈಮ್ಅನ್ನು ತಿರಸ್ಕರಿಸಿತು. ಇದರ ವಿರುದ್ಧ ಪಾಲಿಸಿದಾರರು ಗ್ರಾಹಕ ವೇದಿಕೆಯಲ್ಲಿ ದೂರು ಸಲ್ಲಿಸಿದರು. ಜಿಲ್ಲಾ ವೇದಿಕೆಯು ವಿಚಾರಣೆ ನಡೆಸಿ ಬಳಕೆದಾರರ ಪರ ತೀರ್ಪು ನೀಡಿತು. ತಮಗಿದ್ದ ರೋಗವನ್ನು ಮುಚ್ಚಿಟ್ಟಿದ್ದಾರೆ ಎಂಬುದನ್ನು ಸಾಬೀತು ಪಡಿಸಲು ವಿಮಾ ಕಂಪನಿ ವಿಫಲವಾಗಿರುವ ಹಿನ್ನೆಲೆಯಲ್ಲಿ ವೇದಿಕೆ ಈ ತೀರ್ಪು ನೀಡಿತು. ವಿಮಾ ಕಂಪನಿ ರಾಜ್ಯ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿತು.
ವಿಚಾರಣೆ ಸಂದರ್ಭದಲ್ಲಿ ಬಳಕೆದಾರರು ತಮ್ಮ ವಾದ ಮಂಡಿಸಿದರು. ವಿಮಾ ಕಂಪನಿಯ ಅಧಿಕಾರಿಗಳು ಕಾಲಿ ಹಾಳೆಯಲ್ಲಿ ತಮ್ಮ ಹಸ್ತಾಕ್ಷರ ಹಾಕಿಸಿಕೊಂಡರೆಂದು, ಮೂಲ ಪಾಲಿಸಿಯನ್ನು ನೀಡಲಿಲ್ಲವೆಂದು ಹೇಳಿಕೆ ನೀಡಿದರು. ಬಹುತೇಕ ಕಾಲಂಗಳನ್ನು ಅಧಿಕಾರಿಗಳೇ ತುಂಬಿದ್ದರಿಂದ ತಮಗೆ ಏನೂ ತಿಳಿದಿಲ್ಲವೆಂದು ಜೈನ್ ಹೇಳಿದರು. ಈ ಮಧ್ಯೆ ವಿಮಾ ಕಂಪನಿಯು ತನಿಖೆದಾರರನ್ನು ನೇಮಕ ಮಾಡಿ ಜೈನ್ ಅವರಿಗೆ ಮೊದಲೇ ಕಾಯಿಲೆ ಇತ್ತೆಂದು ಸೂಚಿಸುವ ವರದಿಯನ್ನು ಪಡೆದಿತ್ತು. ಬೇರೊಂದು ಆಸ್ಪತ್ರೆ ನೀಡಿದ ಡಿಸ್ಚಾರ್ಜ್ ಶೀಟ್ನಲ್ಲಿ ಜೈನ್ ಅವರೇ ಕಾಯಿಲೆ ಇರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ವಿಮಾ ಕಂಪನಿ ಹೇಳಿತು. ಈ ಹಿನ್ನೆಲೆಯಲ್ಲಿ ರಾಜ್ಯ ಆಯೋಗ ಮೇಲ್ಮನವಿಯನ್ನು ಪುರಸ್ಕರಿಸಿತು. ಜೈನ್ ಅವರು ರಾಷ್ಟ್ರೀಯ ಆಯೋಗದಲ್ಲಿ ಮರುಮೇಲ್ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆಯೋಗವು ವಿಚಾರಣೆ ನಡೆಸಿ ಜೈನ್ ಪರ ತೀರ್ಪು ನೀಡಿದೆ. ವಿಮೆ ಪಾಲಿಸಿ ತೆಗೆದುಕೊಳ್ಳುವಾಗ ಕಂಪನಿಯು ಪೂರ್ಣವಾದ ಪಾಲಿಸಿಯನ್ನು ನೀಡದೆ ಕೇವಲ ಕವರ್ನೊàಟ್ ನೀಡಿ ಅದರಲ್ಲಿ ಬಳಕೆದಾರರ ಸಹಿ ಪಡೆದಿರುವುದು ಕಂಡುಬಂದಿದೆ. ಆದ್ದರಿಂದ ಪಾಲಿಸಿದಾರರೇ ತಮ್ಮ ರೋಗ/ಕಾಯಿಲೆ ಬಗ್ಗೆ ಮಾಹಿತಿ ಒದಗಿಸಿದ್ದಾರೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ಜೈನ್ ಅವರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ವಿಮಾ ಕಂಪನಿಯ ಅಧಿಕಾರಿ ಮತ್ತು ವಿಮಾ ಕಂಪನಿ ಶಾಮೀಲಾಗಿ ಈ ಕೃತ್ಯನಡೆದಿದೆ ಎಂದು ಆಯೋಗ ಅಭಿಪ್ರಯಾಪಟ್ಟಿದೆ. ಜೊತೆಗೆ ಜೈನ್ ಅವರು ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ನೀಡಿರುವ ಸರ್ಟಿಫಿಕೇಟ್ಅನ್ನು ವಿಮಾ ಕಂಪನಿಯು ಅಫೀಡವಿಟ್ ಮೂಲಕ ಸಾಬೀತು ಪಡಿಸಿಲ್ಲ. ಅಲ್ಲದೆ ಈ ಕಾಯಿಲೆಗಳಿಗೆ ಅವರು ಚಿಕಿತ್ಸೆ ತೆಗೆದುಕೊಂಡಿದ್ದಾರೆ ಎಂಬುದನ್ನು ದೃಢಪಡಿಸಲು ಯಾವುದೆ ಆಧಾರವನ್ನೂ ವಿಮಾ ಕಂಪನಿ ಸಲ್ಲಿಸಿಲ್ಲ. ಈ ಎಲ್ಲದರ ಹಿನ್ನೆಲೆಯಲ್ಲಿ ಪಾಲಿಸಿದಾರರು ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಹೇಳಲು ಯಾವುದೇ ಆಧಾರವಿಲ್ಲ. ಆದ್ದರಿಂದ ವಿಮಾ ಕಂಪನಿಯು ಪಾಲಿಸಿ ಪ್ರಕಾರ ಹಣವನ್ನು ನೀಡಬೇಕಾಗುತ್ತದೆ ಎಂದು ಹೇಳಿ, ಜೈನ್ ಅವರು ಖರ್ಚು ಮಾಡಿದ್ದ ರೂ.1,32,335 ರೂ.ಗಳನ್ನು ನೀಡಬೇಕೆಂದು ಸೂಚನೆ ನೀಡಿದೆ.