Udayavani | Jan 28, 2013
ವರ್ಷಪೂರ್ತಿ ಸಂಜೆ ಹೊತ್ತಿನ ಸಾಹಸ
ಪ್ರತೀ ಕಾಲೇಜು ಹಾಸ್ಟೇಲಿನ ಪಕ್ಕದಲ್ಲೊಂದು ಗೋಲ್ಗಪ್ಪ ಕೊಡುವ, ಗೊತ್ತಿದ್ದರೂ ಅಚರಿಚಿತನಂತಿರುವ ಆಪ್ತನೊಬ್ಬನಿರುತ್ತಾನೆ. ಅವನ ಆಸುಪಾಸಲ್ಲೆಲ್ಲೋ ಪಾನಿ ಪುರಿ ಕೈಗಿಡುವವನೂ ಇರುತ್ತಾನೆ. ಅವರು ಅವರಿಗೆ ಗೊತ್ತಿಲ್ಲದೇ ಹಾಸ್ಟೇಲ್ನಲ್ಲಿರುವ ಜೀವಿಗಳಿಗೆ ಸಂಭ್ರಮವಾಗಿಹೋಗಿರುತ್ತಾರೆ. ಫಾಸ್ಟ್ ಫುಡ್ಡು ಫಾಸ್ಟಾಗಿ ಹಾಸ್ಟೇಲ್ ಲೈಫಿನ ಭಾಗವಾಗಿ ಹೋಗುತ್ತದೆ.
ಸಂಜೆ ಹೊತ್ತು. ಅದೇನೋ ಬೇಸರ. ಹಾಸ್ಟೆಲ್ನಲ್ಲಿ ಸುಮ್ನೆ ಹ್ಯಾಪು ಮೋರೆ ಹಾಕಿಕೊಂಡು ಕುಳಿತಿದಾಗ ಪಕ್ಕದ ರೂಮಿನವಳು ಬಂದು 'ಮಸಾಲೆ ಪೂರಿ' ಅಂತ ಕೇಳ್ಳೋದೇ ತಡ ಮುಖ ಹಾಗೇ ಒಮ್ಮಿಂದೊಮ್ಮೆಲೆ ಅರಳಿಬಿಡುತ್ತದೆ. ಇದ್ದಕ್ಕಿದ್ದಂತೆ ಜೀವಕಳೆ ತುಂಬಿ ಅಕ್ಕಪಕ್ಕದ ಮೂರ್ನಾಲ್ಕು ರೂಮಿನವರು ಒಟ್ಟಾಗಿ ದಂಡೆದ್ದು ಹೊರಟೆವೆಂದರೆ ಅಲ್ಲಿ ಗಲಾಟೆ, ನಗು ಮತ್ತು ಅಬ್ಬರ.
ಮಸಾಲೆಪೂರಿಯ ಉಪ್ಪು-ಖಾರದ ಬಗ್ಗೆ ಕಮೆಂಟ್ ಮಾಡುತ್ತಲೇ ರಸ್ತೆ ಬದಿಯ ತಳ್ಳುಗಾಡಿಯ ಮಸಾಲೆಪೂರಿ, ಪಾನಿಪೂರಿಯನ್ನು ಚಪ್ಪರಿಸುವ ನಾವು, ಅಮ್ಮ ಅದೆಷ್ಟೇ ರುಚಿಕಟ್ಟಾಗಿ ಅಡುಗೆ ಮಾಡಿದರೂ ಆ ಅಡುಗೆಯನ್ನು ಒಮ್ಮೆಯೂ ಹಾಗೆ ಚಪ್ಪರಿಸಿದವರಲ್ಲ. ಒಬ್ಬರ ಪ್ಲೇಟಿಗೆ ಒಬ್ಬರು ಕೈಹಾಕುತ್ತಾ ತಿನ್ನುವುದನ್ನು ನೋಡಿದರೆ ಆ ಗಾಡಿಯವನಿಗೆ ತನ್ನ ನಳಪಾಕದ ಬಗ್ಗೆ ಇನ್ನಿಲ್ಲದ ಅಭಿಮಾನ ಮೂಡಿ ಆತನ ಮುಖ ಆನಂದದಿಂದ ಬಿರಿಯುತ್ತಿತ್ತು. ಹಾಗಿರುತ್ತಿತ್ತು ನಮ್ಮ ವೈಖರಿ. ಆ ಸಂತೋಷಕ್ಕೆ ಪರ್ಯಾಯವಾಗಿ ಒಂದೆರಡು ಖಾಲಿ ಪೂರಿಯನ್ನು ಪಡೆದುಕೊಂಡು ದಾರಿಯುದ್ದಕ್ಕೂ ಮೆಲುಕುತ್ತಿದ್ದರೆ ಅದೊಂಥರಾ ಸಾರ್ಥಕತೆ. ಅಲ್ಪತೃಪ್ತಿ ಎಂದರೆ ಇದೇ ಇರಬಹುದೇನೋ!
ಇನ್ನು ಯಾರಾದರೂ ಊರಿಗೆ ಹೋಗಿ ಬಂದರಂತೂ ಎಲ್ಲರೂ ಆ ದಿನ ಆ ರೂಂನÇÉೇ ಜಮಾಯಿಸಿಬಿಡುತ್ತೇವೆ. ಒಬ್ಬರೇ ಕುಳಿತು ತಿನ್ನುವುದಕ್ಕಿಂತ ಗುಂಪಿನಲ್ಲಿ ತಿನ್ನುವ ಅನುಭವವೇ ಬೇರೆ. ಹಾಗೇ ಕೆಲವೊಮ್ಮೆ ಈ ಫಾಸ್ಟ್ಫುಡ್ಗಳ ಭರಾಟೆಯಲ್ಲಿ ಮನೆಯಲ್ಲಿ ಮಾಡುವ ಶುಚಿ-ರುಚಿಯಾದ ಅಡುಗೆಯನ್ನು ದೂರಮಾಡುತ್ತಿದ್ದೇವೇನೋ ಅನಿಸುವುದುಂಟು. ಎಷ್ಟೇ ದೊಡ್ಡವರಾದರೂ ಮಕ್ಕಳಂತೆ ಗೆಳೆಯರೊಂದಿಗೆ ಕಲೆತು ಹಂಚಿ ತಿನ್ನುವಾಗಿನ ಮಜ ಟಿವಿ ಮುಂದೆ ಒಬ್ಬರೇ ಕುಳಿತು ತಿನ್ನುವಾಗ ಸಿಗುವುದಿಲ್ಲ. ಹಾಗೇ ರಸ್ತೆ ಬದಿಯಲ್ಲಿಯ ಕಾಕನ ಅಂಗಡಿಗೆ ನುಗ್ಗಿ ಗೋಲ್ಗಪ್ಪ ತಿನ್ನುವ ಆ ಖುಷಿ ರೆಸ್ಟೋರೆಂಟಿನ ಏಸಿ ರೂಂನಲ್ಲಿ ಸಿಗುವುದಿಲ್ಲ.
ಕಾಲೇಜ್ನಲ್ಲಿ ಯಾರಾದರೂ ಒಬ್ಬರಿಗೆ ಹಾಸ್ಟೆಲ್ ಊಟ ಬೋರ್ ಆದರೂ ಸಾಕು, ಕ್ಲಾಸ್ನಲ್ಲಿಯ ಯಾರಾದರೊಬ್ಬನನ್ನು ಟಾರ್ಗೆಟ್ ಮಾಡಿಕೊಂಡು ಎಲ್ಲರೂ ಆತನಿಗೆ ಬರ್ತಡೆ ವಿಷ್ ಮಾಡಿ ಆಘಾತವನ್ನುಂಟುಮಾಡುವುದಲ್ಲದೇ ಕೇಕ್ ತರಿಸಿ ಆತನ ಕೈಯಿಂದ ಕತ್ತರಿಸಿ ನಂತರ ಪಾರ್ಟಿಯೆಂಬ ಹೆಸರಿನಿಂದ ಅವನ ಜೇಬಿಗೆ ಕತ್ತರಿ ಹಾಕುವುದು ಅಭ್ಯಾಸವಾಗಿಬಿಟ್ಟಿದೆ. ಹೀಗೆ ಕೆಲವೊಮ್ಮೆ ತಮ್ಮ ಬರ್ತ್ಡೇ ಇವತ್ತಾ ಎಂಬ ಅನುಮಾನದಿಂದ ಐಡಿ ಕಾರ್ಡ್ ನೋಡಿ ಖಚಿತಪಡಿಸಿಕೊಳ್ಳುವವರೂ ಇ¨ªಾರೆ. ಒಬ್ಬರು ಒಂದು ವರ್ಷದಲ್ಲಿ ಎಷ್ಟು ಬಾರಿ ಹುಟ್ಟಬೇಕೆಂಬುದು ನಮ್ಮ ಕ್ಲಾಸ್ನವರ ನಿರ್ಧಾರ. ಈ ವಿಷಯದಲ್ಲಿ ಬೇರಿನ್ನಾರಿಗೂ ಸ್ವಾತಂತ್ರÂವಿರುವುದಿಲ್ಲ.
ಇನ್ನು ಹಾಸ್ಟೆಲ್ನಿಂದ ಮನೆಗೆ ಹೋದ ಹುಡುಗಿಯರೆಲ್ಲ ಮದುವೆ ಮಾತುಕತೆ ಮುಗಿಸಿಕೊಂಡೋ, ನಿಶ್ಚಿತಾರ್ಥ ಮಾಡಿಕೊಂಡೋ ಬಂದರೆಂದರೆ ನಮಗಂತೂ ಹಬ್ಬವೇ ಸರಿ. ಅಂತಿಮ ವರ್ಷದಲ್ಲಿರುವುದರಿಂದ ಮದುವೆಯಾಗುವ ಗೆಳತಿಯರಿಗೇನೂ ಕಡಿಮೆಯಿಲ್ಲ. ಹಾಗಾಗಿ ಸಹಜವಾಗಿಯೇ ದೊಡ್ಡ ಕಾರಣವೊಂದು ಸಿಕ್ಕಂತಾಗಿ ದಿನಕ್ಕೊಬ್ಬರ ಹೆಸರಿನಲ್ಲಿ ಟ್ರೀಟ್ನ ಸಮಾರಾಧನೆಯೇ ಆಗುತ್ತಿರುತ್ತದೆ. 'ನನಗೂ ಟೈಂ ಬರುತ್ತೆ, ನಿನ್ನ ಹತ್ರಾನೂ ಹೀಗೇ ವಸೂಲಿ ಮಾಡ್ತೀನಿ' ಅಂತ ಸಪ್ಪೆ ಮೋರೆ ಹಾಕಿಕೊಳ್ಳೋ ಗೆಳತಿಯ ಮಾತನ್ನ ಪಕ್ಕಕ್ಕಿಟ್ಟು ಮತ್ತೆ ನಮ್ಮ ದಿಬ್ಬಣ ಕಾಕಾನ ಅಂಗಡಿಯೆಡೆಗೆ ತೆರಳುತ್ತದೆ.
ಸಂಜೆಯಾಯಿತೆಂದರೆ ಹುಡುಗಿಯರ ದಂಡೇ ಫಾಸ್ಟ್ಫುಡ್ನ ಕಡೆ ದಾಳಿಯಿಡುವುದರಿಂದ ಮನೆಯÇÉಾದಂತೆ ಹಾಸ್ಟೆಲ್ ಅಡುಗೆಯೂ ಹಾಗೇ ಡಸ್ಟ್ಬಿನ್ ಸೇರುತ್ತದೆ. ಬಹುಶಃ ಅಜ್ಜ ಅದಕ್ಕೇ ಹೇಳುತ್ತಿದ್ದರೇನೋ 'ತಿನ್ನಲಾರದವನು ಏನನ್ನೂ ಮಾಡಲಾರ' ಎಂದು. ಆ ಡಸ್ಟ್ಬಿನ್ ನೋಡುವಾಗಲೆÇÉಾ ತಟ್ಟೆಯ ತುಂಬಾ ಅನ್ನ ಹಾಕಿಕೊಂಡು ಭೂರಿಭೋಜನ ಮಾಡುತ್ತಿದ್ದ ಅಜ್ಜ-ಅಜ್ಜಿಯ ಕಾಲದವರು ನೆನಪಾಗುತ್ತಾರೆ. ಕುವೆಂಪು ಅವರ ಅಜ್ಜನ 'ಅಭ್ಯಂಜನ' ಈಗ ವಿಸ್ಮಯವಾಗಿ ಕಾಣುತ್ತಿರುವಂತೆ ಆಗಿನ ಕಾಲದ ಭೋಜನವೂ ಮುಂದಿನ ಪೀಳಿಗೆಗೆ ಅಚ್ಚರಿಯನ್ನುಂಟು ಮಾಡಬಹುದು.
ಸುಷ್ಮಾ ಎನ್ ಚಕ್ರೆ
ಪತ್ರಿಕೋದ್ಯಮ ವಿಭಾಗ
ಕುವೆಂಪು ವಿವಿ, ಶಂಕರಘಟ್ಟ.