Udayavani | Jan 30, 2013
ಶೇಕ್ಸ್ಪಿಯರ್ ಯಾಕೆ ಹೀಗೆಲ್ಲಾ ಬರೆಯುತ್ತಾನೆ? ಎಲ್ಲವೂ ಸರಿಯಾಗಿರುವ ಇಬ್ಬರು ಪರಮ ಸ್ನೇಹಿತರು ಯಾವುದೋ ಯುದ್ಧವನ್ನು ಗೆದ್ದು ವಾಪಾಸು ರಾಜ್ಯಕ್ಕೆ ಮರಳುವಾಗ ಯಾಕೆ ಮಾರಿ (ವಿಚ್)ಗಳು ಸಿಗಬೇಕು, ಅವು ಇವರ ಭವಿಷ್ಯವನ್ನು ಯಾಕೆ ಹೇಳಬೇಕು? ಆ ಭವಿಷ್ಯವನ್ನು ಸತ್ಯ ಮಾಡುವಂತೆ ಆತ ತನ್ನ ಪ್ರಾಣಸ್ನೇಹಿತನನ್ನೂ, ಪ್ರಾಣ ಕೊಟ್ಟ ತನ್ನ ರಾಜನನ್ನೂ ಕೊಲ್ಲಬೇಕು? ಗಂಡನಿಗೆ ಧೈರ್ಯ ಇಲ್ಲದೇ ಹೋದರೂ ತಾನೇ ಅವನನ್ನು ಪ್ರಚೋದಿಸಿ, ಹತ್ಯೆಯನ್ನು ಯಶಸ್ವಿಯಾಗಿ ನಡೆಸಿ ಮಹಾರಾಣಿಯ ಪಟ್ಟದಾಸೆ ಕಂಡವಳು ಯಾಕೆ ರಕ್ತ ರಕ್ತ, ಎಷ್ಟು ತೊಳೆದರೂ ಹೋಗುತ್ತಿಲ್ಲ ಅಂತ ಗೋಳಾಡಿ ಸತ್ತಳು?
-ದಾರುಣತೆ ಇರುವುದು ಕ್ರಿಯೆಯಲ್ಲಾ, ಹಣೆಬರಹದಲ್ಲಾ, ಮನುಷ್ಯನ ಮನಸಿನ ಕಾಡಲ್ಲಿ ಸುಪ್ತವಾಗಿ ಇರುವ ಕ್ರೌರ್ಯ, ಆಶೆಗಳ ಹಳಕಲಲ್ಲಾ? ದುರಂತವನ್ನು ಜಗತ್ತಿಗೇ ಪರಿಚಯಿಸಿಕೊಟ್ಟು ಹೋದ ಶೇಕ್ಸ್ಪಿಯರ್ ಮನಸೊÕಳಗೆ ಇಟ್ಟು ಹೋದ ಕಿಚ್ಚು ಹೀಗೆ ಎಷ್ಟು ವರ್ಷಗಳ ನಂತರವೂ ನಮ್ಮ ನಿಮ್ಮ ಎದೆಯನ್ನು ದಹಿಸುತ್ತದೆ. ಸಾಹಿತ್ಯದ ಮೂಲಕ ಕಾಲಾನುಕ್ರಮವಾಗಿ ನಡೆಯುತ್ತಿರುವ ದಹನ, ದಹಿಸಿ ದಹಿಸಿ ಕೊನೆಗೊಮ್ಮೆ ಸತ್ಯದ ಜ್ಯೋತಿಯನ್ನು ಉರಿಸುತ್ತದಾ, ನಿರರ್ಥಕ ಬೂದಿಯನ್ನೇ ಉಳಿಸುತ್ತದಾ?
ಶೇಕ್ಸ್ಪಿಯರ್ ಬರೆದ 'ಮ್ಯಾಕ್ಬೆತ್' ನಾಟಕ ಎಂಬ ಈ ಸಾರ್ವಕಾಲಿಕ ಶ್ರೇಷ್ಠ ನಾಟಕ, ಜಪಾನ್ ನಿರ್ದೇಶಕ ಕುರಸಾವಾನ ಕ್ಯಾಮರಾದಲ್ಲಿ 'ಥ್ರೋನ್ ಆಫ್ ಬ್ಲಿಡ್' ಆಗಿ ಕನ್ನಡದಲ್ಲಿ ಕಂಬಾರರ ಜನಪದ ಶೈಲಿಗೆ ಸಿಕ್ಕಿ ಇಲ್ಲಿ 'ಮಾರೀಕಾಡು' ಆಗಿದೆ. ತೀರ ದೇಸಿ ಅನ್ನುವಂಥ ಕಂಬಾರರ ಜನಪದೀಯ ಮಟ್ಟಿನ ಈ ನಾಟಕ, ಹೇಳುವುದು ನಮ್ಮ ಘೋರ ಭವಿಷ್ಯದ ಮೊದಲಿನ ಕ್ರೂರ ವರ್ತಮಾನ ಮತ್ತು ಮನಸಿನ ಕಾಡಿನ ನಿಗೂಢ ಬರ್ಭರತೆಯನ್ನೇ. ಆದರೆ ಅದಕ್ಕೊಂದು ಲಯ, ನಮ್ಮ ರಾಜಪರಂಪರೆ, ವಿಚಿತ್ರ ಕಾವ್ಯಾತ್ಮಕತೆಯಲ್ಲಿ ಮಿಂದ 'ಮಾರೀಕಾಡು' ಬೇರೆಯದೇ ಸ್ವರೂಪದಿಂದ ಸ್ವಂತವಾಗಿದೆ. ಅವರ ನಾಟಕದ ವೀಕ್ಷಣೆ ಎಷ್ಟು ಧ್ವನಿಪೂರ್ಣವೋ, ಅದರ ಓದೂ ಅಷ್ಟೇ ಸ್ವಾರಸ್ಯಕರ.
ಮಾರೀಕಾಡು/ಲೇ: ಚಂದ್ರಶೇಖರ ಕಂಬಾರ /ಪ್ರ: ಸಪ್ನ ಬುಕ್ ಹೌಸ್, 3ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು-09/ಪು: 70/ ಬೆ: 45 ರೂ.