Udayavani | Jan 30, 2013
ಬಾದಾಮಿ-ಗದಗ ರಸ್ತೆಯಲ್ಲಿರುವ ಚೊಳಚಗುಡ್ಡ ಗ್ರಾಮದ ಸಮೀಪ ಬೆಟ್ಟದ ತುಳಿಸಿಗುಡ್ಡದ ತಿಲಕವನದಲ್ಲಿ ಬನಶಂಕರಿ ಕ್ಷೇತ್ರವಿದೆ. ನಿಸರ್ಗದ ಮಡಿಲಲ್ಲಿ ಪ್ರಶಾಂತವಾದ ಪರಿಸರದಲ್ಲಿ ಬನಶಂಕರಿ ದೇವಾಲಯ ನಿರ್ಮಿಸಲಾಗಿದೆ.
ಬನಶಂಕರಿ ದೇವಾಲಯ ಕ್ರಿ.ಶ.10ನೇ ಶತಮಾನದ್ದೆಂದು, ಇನ್ನು ಕೆಲವರು 67ನೇ ಶತಮಾನಕ್ಕಾಗಲೇ ಅಸ್ತಿತ್ವದಲ್ಲಿ ಇದ್ದಿತೆಂದು ಅಭಿಪ್ರಾಯಗಳಿವೆ. ಈಗಿರುವ ಗುಡಿ ಮೂಲ ದೇಗುಲವಲ್ಲ. ಈ ಗುಡಿಯ ಎಡಭಾಗದಲ್ಲಿ ಮುಂಚೆ ಒಂದು ದೇಗುಲವಿತ್ತು. ಅದೇ ಮೂಲ ದೇಗುಲ. ಆದರೆ ಅಲ್ಲಿನ ಮೂರ್ತಿಯನ್ನು ಈಗ ಇಲ್ಲಿ ಸ್ಥಾಪಿಸಿದೆ ಎನ್ನುವ ಮಾತೂ ಇದೆ.
ದೇವಾಲಯವು ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗೃಹವನ್ನು ಹೊಂದಿದೆ. ತೆರೆದ ಮುಖಮಂಟಪದಲ್ಲಿ 24 ಕಂಬಗಳಿವೆ. ದ್ರಾವಿಡ ಶೈಲಿಯಲ್ಲಿದೆ. ನವರಂಗದ ಕೆಳ ಆಸನದಲ್ಲಿ ಆಮೆ, ಒಳ ಭಿತ್ತಿ ಮೇಲೆ ದೇವಕೊಷ್ಠಕಗಳಲ್ಲಿ ಮೂರ್ತಿ ಶಿಲ್ಪಗಳಿವೆ. 10ನೇ ಶತಮಾನದಲ್ಲಿನ ಕಂಬಗಳಿವೆ. ವಿಶಾಲವಾದ ಪೌಳಿಯನ್ನು ಒಳಗೊಂಡಿದೆ. ಪೌಳಿಯಲ್ಲಿ ಒಂದು ಶಾಸನವಿದೆ.
ದೇವಾಲಯದ ಎದುರಿನಲ್ಲಿ ಎರಡು ಪ್ರಕಾಶಿಸುವ ದೀಪ ಸ್ತಂಬದ ಗೋಪುರಗಳನ್ನು ನೋಡಬಹುದು. ಚಾಲುಕ್ಯರು ತಮ್ಮ ಯಾವುದೇ ಕೆಲಸದ ಆರಂಭದ ಮೊದಲು ದೇವಿಯ ಆರಾಧಿಸುವುದು ಮೊದಲ ಆದ್ಯತೆಯಾಗಿತ್ತು. ದೇವಾಲಯದ ಎದುರು ವಿಶಾಲವಾದ ಹರಿದ್ರಾ(ಹರಿಶ್ಚಂದ್ರ ಪುಷ್ಕರಣಿ) ತೀರ್ಥವಿದೆ. ಪಕ್ಕದಲ್ಲಿ ಸರಸ್ವತಿ ಹಳ್ಳವಿದೆ.
ಭಕ್ತರು ಭರ್ತಿಯಾದ ಹರಿದ್ರಾ ತೀರ್ಥ ಹೊಂಡದಲ್ಲಿ ತಮ್ಮ ಮಕ್ಕಳನ್ನು ತೆಪ್ಪ ಬಿಡುವುದರ ಮೂಲಕ ದೇವಿಗೆ ಹರಕೆ ತೀರಿಸುವ ಸಂಪ್ರದಾಯ ಈಗಲೂ ನಡೆಯುತ್ತಿದೆ. ದೇವಾಲಯದ ಎದುರಿಗಿನ ವಿಶಾಲವಾದ ಹರಿದ್ರಾ ತೀರ್ಥ ಹೊಂಡ , ಮೂರು ಅಂತಸ್ತಿನ ಆಕರ್ಷಕ ದೀಪಸ್ತಂಭ ಮತ್ತು ಇಲ್ಲಿರು ಕೆಲವು ಚಿಕ್ಕಪುಟ್ಟ ದೇವಾಲಯಗಳನ್ನು ವಿಜಯನಗರದ ಅರಸರು ನಿರ್ಮಿಸಿದರು. ನಂತರದಲ್ಲಿ ಬನಶಂಕರಿ ದೇವಾಲಯವನ್ನು 17ನೇ ಶತಮಾನದಲ್ಲಿ ಮಾರಾಠ ಪೇಶ್ವ ಮನೆತನದ ದೊರೆಗಳು ನಿರ್ಮಿಸಿದರು ಎಂಬ ಉಲ್ಲೇಖವಿದೆ.
ಬನಶಂಕರಿ ದೇವಿಗೆ ಶಾಕಾಂಬರಿ ಎಂದು ಕರೆಯುವರು. ಅನೇಕ ವಸಂತಗಳವರೆಗೆ ಮಳೆಯಾಗದ ಕಾರಣ ಲೋಕದ ಜನರು ತತ್ತರಿಸಿ ದೇವಿಗೆ ಮೊರೆ ಹೋದಾಗ ದೇವಿಯು ಧರೆಯಿಂದ ನೀರನ್ನು ತರಿಸಿ ತನ್ನ ತನುವಿನಿಂದ ಸಸ್ಯಗಳನ್ನು ಸೃಷ್ಟಿಸಿ ಜನತೆಯನ್ನು ಸಂತೈಸಿದ್ದರಿಂದ ಶಾಕಾಂಬರಿ ಎಂಬ ಹೆಸರು ಬಂತು ಎಂದು ಸ್ಕಂದ ಪುರಾಣದಲ್ಲಿ ಉಲ್ಲೇಖೀಸಲಾಗಿದೆ.
ಶಾಕಾಂಬರಿ ಎಂದರೆ ಸಸ್ಯವನ್ನು ಉಡುಗೆಯಾಗಿ ತೊಡುವವಳು ಎಂದರ್ಥ. ಬನದ ಹುಣ್ಣಿಮೆಯ ದಿನ ಪ್ರಾರಂಭವಾಗಿರುವ ಜಾತ್ರೆಯಲ್ಲಿ ಲಕ್ಷ ಲಕ್ಷಾಂತರ ಭಕ್ತರ ಪಾಲ್ಗೊಂಡಿದ್ದರು. ರಥದ ಹಗ್ಗವು ರೂಣ ತಾಲೂಕಿನ ಮಾಡಲಗೇರಿಯ ಗ್ರಾಮದ ಹಿರಿಯರು ತಂದಿದ್ದರು.
ರಥೋತ್ಸವದ ಮುನ್ನಾ ದಿನ ಅರ್ಚಕರು ದೇವಿಗೆ 108 ಬಗೆಯ ತರಕಾರಿ(ವನದುರ್ಗಾಂಬಾ ಹೋಮ) ನೈವೇದ್ಯವನ್ನು ಅರ್ಪಿಸುವರು. ಇದನ್ನು ಸುತ್ತಲಿನ ಸೀಮೆಯ ಭಕ್ತರು ಮನೆ ಮನೆಗಳಲ್ಲಿ ಪಲ್ಲೇದ ಹಬ್ಬ ಎಂದು ಆಚರಿಸುತ್ತಾರೆ.
ಮಹಾರಾಷ್ಟ್ರ ಹಾಗೂ ಗೋವಾದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳತ್ತಾರೆ.
ಜಾತ್ರೆಗೆ ಬರುವ ಭಕ್ತರ ಹೊಟ್ಟಿ ತುಂಬಿಸಲು ರೊಟ್ಟಿ ಊಟ ಉಣಿಸುವ ಅನ್ನಪೂರ್ಣಿಯರು ಗಮನ ಸೆಳೆಯುತ್ತಾರೆ. ಮನರಂಜನೆಗೆ ನಾಟಕ ಕಂಪನಿಗಳು,ಸಂಚಾರಿಚಿತ್ರಮಂದಿರಗಳು ಇರುತ್ತವೆ.
ಬನಶಂಕರಿ ಜಾತ್ರೆ ಉತ್ತರ ಕರ್ನಾಟಕದ ದೊಡ್ಡ ಜಾತ್ರೆಗಳಲ್ಲಿ ಒಂದು.
ಪರಶುರಾಮ ಫ. ಗೋಡಿ
ಶ್ರೀಹುಚ್ಚೇಶ್ವರ ಮಹಿಳಾ ಬಿ.ಇಡಿ ಕಾಲೇಜ,
ಕಮತಗಿ587120 ತಾ ಹುನಗುಂದ ಜೀಲ್ಲಾ ;ಬಾಗಲಕೊಟ
944941582708351288222
ಇಟಚಿಟ.ಠಿಚಿಡಿkOಚಿಡಿಟÃsಜಥಿಚಿkss.ಟಿ