Udayavani | Jan 31, 2013
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಕಮಲ್ಹಾಸನ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ 'ವಿಶ್ವರೂಪಂ' ಚಿತ್ರ ಪ್ರದರ್ಶನಕ್ಕೆ ಮತ್ತೆ ಕಂಟಕ ಎದುರಾಗಿದೆ. ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಿ ಮಂಗಳವಾರ ರಾತ್ರಿ ಮದ್ರಾಸ್ ಹೈಕೋರ್ಟ್ನ ಏಕಸದಸ್ಯ ಪೀಠ ನೀಡಿದ್ದ ಮಧ್ಯಂತರ ತೀರ್ಪಿಗೆ ಬುಧವಾರ ತಡೆ ನೀಡಿರುವ ಹೈಕೋರ್ಟ್ನ ವಿಭಾಗೀಯ ಪೀಠ, ಫೆ.6ವರೆಗೆ ಚಿತ್ರ ಪ್ರದರ್ಶನ ಮಾಡದಂತೆ ಸೂಚಿಸಿದೆ.
ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಶೀಲಿಸಿದ ವಿಭಾಗಿಯ ಪೀಠ, ಬುಧವಾರ ಈ ಮಹತ್ವದ ಆದೇಶ ಹೊರಡಿಸಿದೆ. ಈ ನಡುವೆ ಚಿತ್ರ ಪ್ರದರ್ಶನ ವಿರುದ್ಧ ತಮಿಳುನಾಡು ಸರ್ಕಾರ ತಳೆದಿರುವ ನಿಲುವಿನಿಂದ ತೀರಾ ಬೇಸರಗೊಂಡಿರುವ ನಟ ಕಮಲ್ ಹಾಸನ್, ರಾಜ್ಯದಿಂದ ನಾನು ಹೊರಹೋಗುವುದೇ ತಮಿಳುನಾಡಿಗೆ ಬೇಕಾದಂತೆ ಕಾಣುತ್ತಿದೆ. ಹೀಗಾಗಿ ನಾನು ರಾಜ್ಯವನ್ನು ಬಿಟ್ಟು ಜಾತ್ಯತೀತ ಪ್ರದೇಶಕ್ಕೆ ತೆರಳುವ ಬಗ್ಗೆ ಚಿಂತನೆ ನಡೆಸಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿಯೂ ಘೋಷಿಸಿದ್ದಾರೆ. ಇನ್ನೊಂದೆಡೆ 'ವಿಶ್ವರೂಪಂ' ಚಿತ್ರ ಬಿಡುಗಡೆಗೆ ಉಂಟಾಗಿರುವ ಅಡ್ಡಿ ಬಗ್ಗೆ ನಟ ಶಾರುಖ್ ಖಾನ್ ಸೇರಿದಂತೆ ಹಲವು ಬಾಲಿವುಡ್ ನಟ, ನಟಿಯರು, ತಂತ್ರಜ್ಞರು ಅತೀವ ಬೇಸರ ವ್ಯಕ್ತಪಡಿಸಿದ್ದಾರೆ.
ಹೈಡ್ರಾಮಾ:
ವಿಶ್ವರೂಪಂ ಪ್ರದರ್ಶನದ ಮೇಲಿನ ನಿರ್ಬಂಧ ತೆರವುಗೊಂಡ ಹಿನ್ನೆಲೆಯಲ್ಲಿ ಬುಧವಾರ ತಮಿಳುನಾಡಿನಾದ್ಯಂತ ಚಿತ್ರ ಪ್ರದರ್ಶನಕ್ಕೆ ಎಲ್ಲಾ ಸಿದ್ಧತೆಗಳೂ ನಡೆದಿದ್ದವು. ಆದರೆ ಈ ಹಂತದಲ್ಲಿ ಮಧ್ಯಪ್ರವೇಶಿಸಿದ ತಮಿಳುನಾಡಿನ ಪೊಲೀಸರು, ನಿರ್ಬಂಧ ತೆರವುಗೊಳಿಸಿ ನ್ಯಾಯಾಲಯ ಹೊರಡಿಸಿರುವ ಆದೇಶದ ಪ್ರತಿ ಸಿಗುವವರೆಗೂ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಹಠ ಹಿಡಿದರು. ತಡ ರಾತ್ರಿ ತೀರ್ಪು ಹೊರಬಿದ್ದಿದ್ದರಿಂದ ಬುಧವಾರ ಬಹಳ ಹೊತ್ತಿನವರೆಗೂ ತೀರ್ಪಿನ ಪ್ರತಿ ಕಮಲ್ ಹಾಸನ್ಗೆ ಲಭ್ಯವಾಗಿರಲಿಲ್ಲ. ಹೀಗಾಗಿ ಅನುಮತಿ ಸಿಕ್ಕರೂ ಚಿತ್ರ ಪ್ರದರ್ಶಿಸಲಾಗದ ಸ್ಥಿತಿ ನಿರ್ಮಾಣವಾಯಿತು. ಹೀಗೆ ಸರ್ಕಾರದ ವಿಳಂಬ ತಂತ್ರ ಯಶಸ್ವಿಯಾದ ಬೆನ್ನಲ್ಲೇ ಮತ್ತೂಂದೆಡೆ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ತಮಿಳುನಾಡು ಸರ್ಕಾರ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಬುಧವಾರ ಮಧ್ಯಾಹ್ನದ ಹೊತ್ತಿಗೆ ಚಿತ್ರ ಪ್ರದರ್ಶನಕ್ಕೆ ತಡೆ ಒಡ್ಡಿತು. ಹೀಗಾಗಿ ಬುಧವಾರ ತಮಿಳುನಾಡಿನಲ್ಲಿ ವಿಶ್ವರೂಪಂ ಪ್ರದರ್ಶನ ಸಾಧ್ಯವಾಗಲಿಲ್ಲ.
ಪೆಟ್ರೋಲ್ ಬಾಂಬ್ ಎಸೆತ:
ಈ ನಡುವೆ ವಿಶ್ವರೂಪಂ ಚಿತ್ರ ಪ್ರದರ್ಶನ ವಿರೋಧಿಸಿ ಚೆನ್ನೈ, ರಾಮನಾಥಪುರಂ ಸೇರಿದಂತೆ ತಮಿಳುನಾಡಿನ ಕೆಲವು ಭಾಗಗಳಲ್ಲಿ ಚಿತ್ರಮಂದಿರಗಳ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಲಾಗಿದೆ.
ಶಾರುಖ್ ಬೆಂಬಲ:
'ವಿಶ್ವರೂಪಂ' ಬಿಡುಗಡೆಗೆ ವ್ಯಕ್ತವಾಗಿರುವ ವಿರೋಧಕ್ಕೆ ನಟ ಶಾರುಖ್ ಖಾನ್, ಮನೋಜ್ ಬಾಜಪೇಯಿ, ರಜತ್ ಕಪೂರ್, ನಾಗಾರ್ಜುನ ಸೇರಿದಂತೆ ಹಲವು ಖ್ಯಾತನಾಮರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಶಾರುಖ್, ಈ ಹಿಂದೆ ನನ್ನ ಅಭಿನಯದ 'ಬಿಲ್ಲು ಬಾರ್ಬರ್' ಮತ್ತು 'ಓಂ ಶಾಂತಿ ಓಂ' ಚಿತ್ರಗಳಿಗೂ ಇದೇ ರೀತಿಯ ಅಡ್ಡಿ ಉಂಟಾಗಿತ್ತು. ಸೆನ್ಸಾರ್ ಮಂಡಳಿ ಒಮ್ಮೆ ಚಿತ್ರಕ್ಕೆ ಅನುಮತಿ ನೀಡಿದ ಮೇಲೆ ಅದು ಎಲ್ಲರ ವೀಕ್ಷಣೆಗೆ ಅರ್ಹ ಎಂದೇ ಅರ್ಥ ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸಹ ಕಮಲ್ ಹಾಸನ್ ನೆರವಿಗೆ ಧಾವಿಸಿದ್ದು, ಪ್ರತಿಯೊಬ್ಬರಿಗೂ ವಾಕ್ ಮತ್ತು ಅಭಿಪ್ರಾಯ ಸ್ವಾತಂತ್ರ್ಯವಿದೆ. ಕಲಾವಿದರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಲು ಮುಕ್ತ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ನಟ ಪ್ರಭು, ಶಿವಕುಮಾರ್, ಖುಷೂº ಸೇರಿದಂತೆ ಹಲವು ನಟ, ನಟಿಯರು ಕಮಲ್ ನಿವಾಸಕ್ಕೆ ತೆರಳಿ ಅವರಿಗೆ ಸಾಂತ್ವನ ಹೇಳಿದರು.