ಯಾವುದೇ ತರಕಾರಿಯನ್ನು ನೆಲದಲ್ಲಿಟ್ಟ ಕೂಡಲೇ ಅದು ನೆಲದ ತೇವವನ್ನು ಹೀರಿ ಬಹು ಬೇಗ ಹಾಳಾಗುತ್ತದೆ. ನಮ್ಮ ಹಿರಿಯರು ಸೌತೆ, ಸಿಹಿಕುಂಬಳವನ್ನು ಬಾಳೆದಿಂಡಿನ ಒಣಹಗ್ಗದಲ್ಲಿ ಅಡುಗೆಮನೆ ಅಥವಾ ಪಡಸಾಲೆಯಲ್ಲಿ ತೂಗುಹಾಕಿದ ಬಿದಿರಿಗೆ ನೇತುಹಾಕಿದ್ದನ್ನು ನೆನಪಿಸಿಕೊಳ್ಳಬಹುದು. ಈಗ ಆ ಕ್ರಮವೇ ಮರೆತುಹೋದಂತಿದೆ. ಹಾಗೆ ಸಂಗ್ರಹಿಸಲ್ಪಟ್ಟ ತರಕಾರಿಗಳು ಹಲವು ತಿಂಗಳ ಕಾಲ ಹಾಳಾಗದೆ ಉಳಿಯುತ್ತಿದ್ದವು..ಮೆಣಸನ್ನು ತೊಟ್ಟು ತೆಗೆದು ಸಂಗ್ರಸಿಹಿಟ್ಟರೆ ದೀರ್ಘಕಾಲ ಉಪಯೋಗಕ್ಕೆ ಬರುವುದಿಲ್ಲ. .ಉಪ್ಪುನೀರಿನಲ್ಲಿ ಮಾವಿನಕಾಯಿ, ಅಂಬಡೆ, ಹಲಸಿನಕಾಯಿ ಸೊಳೆಯನ್ನು ಸಂಗ್ರಹಿಟ್ಟು ಅದನ್ನು ಮಳೆಗಾಲದಲ್ಲಿ ಊಟದ ಜೊತೆಗೆ ಸಾರು- ಪಲ್ಯ ಮಾಡಿ ಬಳಸುವ ಪರಿಪಾಠವಿತ್ತು. ಅದು ಬಡತನದ ಕಾರಣಕ್ಕಾಗಿ ಅಲ್ಲ , ನಿಸರ್ಗಕ್ಕೆ ಹತ್ತಿರವಾಗಿರುವ ಆಹಾರ ಸಂಪ್ರದಾಯ ಎಂಬ ಕಾರಣಕ್ಕಾಗಿ. ಹಾಗೆ, ಸಂಗ್ರಹಿಸಿಟ್ಟ ವಸ್ತುಗಳು ಫ್ರಿಡ್ಜ್ನಲ್ಲಿಟ್ಟ ವಸ್ತುಗಳಿಗಿಂತ ಎಷ್ಟೋ ಉತ್ತಮ. ಫ್ರಿಡ್ಜ್ಗಳಲ್ಲಾದರೋ ಅಷ್ಟೊಂದು ದೀರ್ಘಾವಧಿಯವರೆಗೆ ಸಂಗ್ರಹಿಸಿಡುವುದು ಸಾಧ್ಯವಿಲ್ಲ..ಅಕ್ಕಿಯನ್ನು ಹಿಟ್ಟು ಮಾಡುವ ಮೊದಲು ನೀರಿನಲ್ಲಿ ತೊಳೆಯಬೇಕು. ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಮೂರ್ನಾಲ್ಕು ದಿನಗಳ ಕಡುಬಿಸಿಲು ಬಿದ್ದರೂ ಒಳ್ಳೆಯದೇ. ಈಗ ಅದರಿಂದ ಹಿಟ್ಟು ತಯಾರಿಸಿದರೆ ಅದು ದೀರ್ಘಕಾಲ ಹಾಳಾಗದೆ ಉಳಿಯುತ್ತದೆ. ಜೋಳ, ರಾಗಿಯ ಹಿಟ್ಟು ತಯಾರಿಸುವುದಿದ್ದರೂ ಇದೇ ವಿಧಾನ ಉತ್ತಮ. ಅಲ್ಲದೆ, ಹಿಟ್ಟನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿಟ್ಟರೆ ಬಹು ಕಾಲ ಬಳಸಬಹುದಾಗಿದೆ. .ಡಬ್ಬದಲ್ಲಿ ದೀರ್ಘಕಾಲ ಉಳಿಯಬೇಕೆಂದು ಸಂಗ್ರಹಿಸಿಡುವ ವಸ್ತುವನ್ನು ಬಳಸುವಾಗ ತೇವ ಅದರೊಳಗೆ ಪ್ರವೇಶಿಸದಂತೆ ಎಚ್ಚರವಹಿಸಬೇಕು. ಬಳಸುವ ಚಮಚಾದಲ್ಲಿ ನೀರಿನ ಅಂಶ ಇರಲೇಬಾರದು. ಉಪ್ಪಿನಕಾಯಿಯಂಥ ಪದಾರ್ಥಗಳು ಬೇಗನೆ ಹಾಳಾಗಲು ಬಳಸುವಾಗ ತೇವಾಂಶ ಒಳಪ್ರವೇಶಿಸುವುದೇ ಮುಖ್ಯ ಕಾರಣ. .ತುಪ್ಪವನ್ನು ಕುದಿಸುವಾಗ ಮೆಂತ್ಯೆ ಹಾಕಿದರೆ ಅದರ ಸುವಾಸನೆ ಮಾಸುವುದಿಲ್ಲ..ಅಕ್ಕಿ ಅಥವಾ ಇತರ ಪದಾರ್ಥಗಳು ದೀರ್ಘಕಾಲ ಹಾಳಾಗದೆ ಉಳಿಯಬೇಕಾದರೆ ಅದನ್ನು ಸಂಗ್ರಹಿಸಿದ ಪಾತ್ರೆಯೊಳಗೆ ಕಹಿಬೇವು ಹಾಕಿಡಬೇಕು.