ಬೆಂಗಳೂರು : ವಿಧಾನಸೌಧ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಕ್ಕೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಹೈಕೋರ್ಟ್, ಸೋಮವಾರ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.ನ್ಯಾಯಾಲಯದ ಆದೇಶವಿದ್ದರೂ ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಿಸಲು ಏನು ಸಮಸ್ಯೆ?, ಸ್ಥಳಾಂತರ ವಿಷಯದಲ್ಲಿ ಮೆಟ್ರೋ ನಿಗಮ ಮತ್ತು ಸರ್ಕಾರ ಏಕೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿವೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕೆ.ಶ್ರೀಧರ್ ರಾವ್ ಮತ್ತು ನ್ಯಾ.ಎಸ್. ಅಬ್ದುಲ್ ನಜೀರ್ ಅವರಿದ್ದ ವಿಭಾಗೀಯ ಪೀಠವು , ಎರಡು ದಿನಗಳಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಿಸುವ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸುವಂತೆ ತಾಕೀತು ಮಾಡಿತು.ಹೈಕೋರ್ಟ್ ಆದೇಶಿಸಿದ್ದರೂ ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಿಸಲು ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ವಕೀಲ ಎ.ವಿ. ಅಮರ್ನಾಥ್ ಅರ್ಜಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಪೀಠವು ಪ್ರತಿಮೆ ಸ್ಥಳಾಂತರಕ್ಕೆ ಏಕೆ ಇಷ್ಟುದಿನ ಕಾಲಾವಕಾಶ ತೆಗೆದುಕೊಳ್ಳಲಾಗುತ್ತಿದೆ. ಮೆಟ್ರೋ ಕಾಮಗಾರಿ ಮುಗಿದಿದ್ದು, ಪ್ರತಿಮೆ ಸ್ಥಳಾಂತರಿಸುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳುತ್ತದೆ. ಇನ್ನೊಂದೆಡೆ ಕಾಮಗಾರಿ ಇನ್ನು ಮುಗಿದಿಲ್ಲ. ಪ್ರತಿಮೆಯಿಂದಾಗಿ ಕಾಮಗಾರಿ ವಿಳಂಬ ವಾಗುತ್ತಿದೆ. ಈ ವರ್ಷಾಂತ್ಯದವರೆಗೆ ಪ್ರತಿಮೆ ಕೆಳಭಾಗದ ಕಾಮಗಾರಿ ಮುಂದುವರೆಯಲಿದೆ ಎಂದು ಮೆಟ್ರೋ ನಿಗಮ ತಿಳಿಸಿದೆ. ಸರ್ಕಾರ ಮತ್ತು ಮೆಟ್ರೋ ನಿಗಮದ ಈ ಹೇಳಿಕೆಗಳು ವಿಭಿನ್ನವಾಗಿದೆ ಎಂದು ಪೀಠ ಬೇಸರ ವ್ಯಕ್ತಪಡಿಸಿತು.ಪ್ರತಿಮೆ ಸ್ಥ ಳಾಂತರಿಸಲು ಇರುವ ನೈಜ ಸಮಸ್ಯೆ ಏನು?. ಪ್ರಸ್ತುತ ಪ್ರತಿಮೆಯನ್ನು ಹಗ್ಗದಿಂದ ಸುತ್ತಿ ನೇತು ಹಾಕಲಾಗಿದೆ. ಇದರಿಂದ ಪ್ರತಿಮೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸದ್ಯ ಪ್ರತಿಮೆ ಸ್ಥಳಾಂತರಿಸಿ ಮೆಟ್ರೋ ಕಾಮಗಾರಿ ಮುಗಿದ ಬಳಿಕ ಅದೇ ಸ್ಥಳದಲ್ಲಿ ಪ್ರತಿಮೆ ಸ್ಥಾಪಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿತು.ಈ ಕುರಿತು ಸ್ಪಷ್ಟ ನಿಲುವು ತಿಳಿಸಲು ಎರಡು ದಿನಗಳ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿಈ ಮನವಿಯನ್ನು ಮಾನ್ಯ ಮಾಡಿದ ಪೀಠ ಎರಡು ದಿನಗಳಲ್ಲಿ ಸರ್ಕಾರ ನಿಲುವು ತಿಳಿಸಬೇಕು ಎಂದು ಅಂತಿಮ ಗಡುವು ವಿಧಿಸಿ ವಿಚಾರಣೆ ಮುಂದೂಡಿತು.