Udayavani | Feb 18, 2013
ಸಾಗರ: ಮುಗ್ಧ ಹೆಣ್ಣುಮಕ್ಕಳನ್ನು ಲವ್ ಜಿಹಾದ್ನಂತಹ ಚಕ್ರವ್ಯೂಹದಲ್ಲಿ ಸಿಲುಕಿಸಿ ಮತಾಂತರಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಪೋಷಕರು ಹಾಗೂ ಸಮಾಜ ಈ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು ಎಂದು ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದರು.
ನಗರದ ವೀರಶೈವ ಕಲ್ಯಾಣಮಂಟಪದಲ್ಲಿ ಶಿವಮೊಗ್ಗದ ಗುರುಶಾಂತವೀರೇಶ್ವರ ಸೇವಾ ಸಮಿತಿ ಆಯೋಜಿಸಿದ್ದ ವೀರಶೈವ ವಧೂವರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿ, ಇದು ಅಂತರಾಷ್ಟ್ರೀಯ ಷಡ್ಯಂತ್ರ. ಹೆಣ್ಣುಮಕ್ಕಳು ಆಮಿಷಗಳಿಗೆ ಒಳಗಾಗಿಸಿ ಸಂದಿಗ್ಧತೆ ಸೃಷ್ಟಿಸುವ ವ್ಯವಸ್ಥಿತ ಜಾಲ ನಮ್ಮ ನಡುವೆ ಕಾರ್ಯನಿರ್ವಹಿಸುತ್ತಿದೆ. ಇದರ ವಿರುದ್ಧ ಜನಜಾಗೃತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಧೂವರರ ಅನ್ವೇಷಣಾ ಕೇಂದ್ರಗಳು ಮಹತ್ವದ ಪಾತ್ರ ವಹಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಹೊಣೆಗಾರಿಕೆ ಏನು ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಸಂಪರ್ಕದ ಕೊರತೆ ದಟ್ಟವಾಗುತ್ತಿರುವ ಕಾಲದಲ್ಲಿ ವಧೂವರರ ಅನ್ವೇಷಣಾ ಕೇಂದ್ರಗಳನ್ನು ಪೋಷಿಸುವ ಹಾಗೂ ಇದರ ಮೂಲಕ ಅನ್ವೇಷಣೆ ನಡೆಸುವ ಪ್ರಕ್ರಿಯೆ ಅನಿವಾರ್ಯವಾಗಿದೆ. ಈ ಚಟುವಟಿಕೆ ಒಂದು ಸಾಮಾಜಿಕ ಜವಾಬ್ದಾರಿಯಾಗಿರಬೇಕೇ ವಿನಃ ಇದಕ್ಕೆ ವ್ಯಾಪಾರೀ ಸೋಂಕು ತಗುಲಲು ಅವಕಾಶ ಕೊಡಬಾರದು ಎಂದು ಈಶ್ವರಪ್ಪ ವಿನಂತಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಪ್ರಸ್ತುತ ವಿವಾಹ ಎನ್ನುವುದು ಸಂಕೀರ್ಣ ಸ್ಥಿತಿಗೆ ತಲುಪಿದೆ. ಆಡಂಬರ, ಕಂದಾಚಾರ, ಮೂಡನಂಬಿಕೆ, ವೈಯಕ್ತಿಕ ಪ್ರತಿಷ್ಟೆ ವಿವಾಹದಲ್ಲಿರುವ ಶ್ರೇಷ್ಠತೆಯನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದೆ ಎಂದರು.
ಜಾತಿಯನ್ನೇ ಮೂಲವಾಗಿ ಇರಿಸಿಕೊಳ್ಳುವುದಕ್ಕಿಂತ ಬಸವಣ್ಣನವರು ಹೇಳಿದಂತೆ ಸಂಸ್ಕಾರವಂತ ಜಾತಿಯನ್ನು ಗುರುತಿಸುವ ಕೆಲಸವಾಗಬೇಕು. ಜಾತಿಮತ, ಕಂದಾಚಾರ, ಮೂಡನಂಬಿಕೆಗಳಿಂದ ಬೇಸತ್ತ ಯುವಜನಾಂಗ ಮದುವೆ ಬೇಡ ಎನ್ನುವ ಹಂತಕ್ಕೆ ತಲುಪಿದೆ. ಆದರಿಂದ ಸಮಸ್ಯೆಗಳು ಹೆಚ್ಚುತ್ತಿದೆ. ಮದುವೆಯನ್ನು ಸರಳಗೊಳಿಸುವ ಹಾಗೂ ಸಾಮೂಹಿಕ ವಿವಾಹಕ್ಕೆ ಆದ್ಯತೆ ನೀಡುವ ಕೆಲಸವಾಗಬೇಕು ಎಂದು ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ವೀರಶೈವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಿತಿಯ ಅಧ್ಯಕ್ಷ ಎಂ. ಮಹೇಶ್ವರಯ್ಯ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಸಮಾಜದ ಅಧ್ಯಕ್ಷ ಯು.ಸಿ.ಸಿದ್ದಲಿಂಗೇಶ್, ಮಾಜಿ ಅಧ್ಯಕ್ಷ ಯು.ಜೆ.ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ಸುಮ ಮಹಾಲಿಂಗಯ್ಯ ಪ್ರಾರ್ಥಿಸಿದರು. ಲೋಕೇಶಯ್ಯ ಸ್ವಾಗತಿಸಿದರು. ಮಹಾಲಿಂಗಯ್ಯ ಎಸ್. ಪ್ರಾಸ್ತಾವಿಕ ಮಾತನಾಡಿದರು. ಮಹಾಲಿಂಗಯ್ಯ ವಂದಿಸಿದರು. ರಶ್ಮಿ ಎಂ.ಎಸ್. ನಿರೂಪಿಸಿದರು. ಎಚ್.ಶಾಂತಾ ಆನಂದ್ ಮತ್ತು ತಂಡದವರಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು.