ತೀರ್ಥಹಳ್ಳಿ : ಶಿವಮೊಗ್ಗ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗುಂಬೆ ಮೂಲಕ ಸಂಚರಿಸುವ ಮಿನಿ ಬಸ್ಗಳು ಮುಂದಿನ 10 ದಿನಗಳ ಕಾಲ ಸಂಚಾರ ನಿಲ್ಲಿಸಿದ್ದು, ಈ ಭಾಗದ ಹಲವು ಪ್ರಯಾಣಿಕರಿಗೆ ತೊಂದರೆಯಾಗಿದೆ.ಆಗುಂಬೆ ಘಾಟಿಯ ಉಡುಪಿ ಜಿಲ್ಲೆ ವ್ಯಾಪ್ತಿಯ ತಿರುವುಗಳಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಯು 10 ದಿನಗಳ ಕಾಲ ನಡೆಯಲಿದೆ. ಆದ್ದರಿಂದ ಈ ಭಾಗದಲ್ಲಿ ಸಂಚರಿಸುವ ವಾಹನಗಳು ಬೇರೆ ಮಾರ್ಗದಲ್ಲಿ ಸಂಚರಿಸಬೇಕಾಗಿದೆ. ಶಿವಮೊಗ್ಗದಿಂದ ತೀರ್ಥಹಳ್ಳಿ ಮೂಲಕ ಮಣಿಪಾಲ್, ಉಡುಪಿ, ಮಂಗಳೂರಿಗೆ ಹೋಗುವ ಬಸ್ಗಳು ಶೃಂಗೇರಿ ಕೆರೆಕಟ್ಟೆ ಹಾಗೂ ಹುಲಿಕಲ್ ಘಾಟಿ ಮುಖಾಂತರ ಸಂಚರಿಸಬೇಕಾಗಿದೆ. ಅಲ್ಲದೇ, ಮಣಿಪಾಲ್ ಆಸ್ಪತ್ರೆಗೆ ಹೋಗಬೇಕಾದ ಆ್ಯಂಬುಲೆನ್ಸ್ಗಳು ಬೇರೆ ಮಾರ್ಗದಲ್ಲಿ ಸಂಚರಿಸಬೇಕಾಗಿದೆ.ಉಡುಪಿ ಜಿಲ್ಲೆ ವ್ಯಾಪ್ತಿಯ 10 ದಿನಗಳ ಕಾಮಗಾರಿ ಮುಗಿದ ನಂತರ ಶಿವಮೊಗ್ಗ ಜಿಲ್ಲೆಯ ಆಗುಂಬೆ ಘಾಟಿಯ ತಿರುವುಗಳಲ್ಲೂ ಕಾಮಗಾರಿ ನಡೆಯಲಿದ್ದು, ನಂತರದ 10 ದಿನಗಳು ಮತ್ತೆ ಸಂಚಾರ ಅವ್ಯವಸ್ಥೆಗೆ ಕಾರಣವಾಗಲಿದೆ. ಈ ಸಮಸ್ಯೆಯಿಂದ ದಿನನಿತ್ಯ ಸಂಚರಿಸುವ ಶಾಲಾ ಕಾಲೇಜು ಮಕ್ಕಳಿಗೆ ಪ್ರಯಾಣಿಕರಿಗೆ, ರೋಗಿಗಳಿಗೆ ಭಾರೀ ಸಮಸ್ಯೆಯಾಗುವುದಾಗಿ ಸಾರ್ವಜನಿಕರಿಂದ ದೂರು ಕೇಳಿಬಂದಿದೆ.