ಹೊಸಬರ ಸಿನಿಮಾವೆಂದರೆ ಮೂಗು ಮುರಿಯುವವರೇ ಜಾಸ್ತಿ. ಅದು ಪ್ರೇಕ್ಷಕರಿಂದ ಹಿಡಿದು ಚಿತ್ರರಂಗದ ಮಂದಿವರೆಗೂ ಹೊಸಬರನ್ನು ಟ್ರೀಟ್ ಮಾಡೋ ರೀತಿ ಅಷ್ಟಕ್ಕಷ್ಟೇ. ಹೊಸಬರಿಗೆ ಬಾಯಿ ಮಾತಿನ ಪ್ರೋತ್ಸಾಹ ಕೊಡೋಕು ಹಿಂದೆ-ಮುಂದೆ ನೋಡೋ ನಮ್ಮ ಗಾಂಧಿನಗರದಲ್ಲಿ, ಕ್ರೇಜಿಸ್ಟಾರ್ ರವಿಚಂದ್ರನ್ ಮಾತ್ರ ಹೊಸಬರ ತಂಡವೊಂದನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುವ ಜೊತೆಗೆ ಆ ಸಿನಿಮಾವನ್ನು ಪ್ರೊಮೋಟ್ ಕೂಡಾ ಮಾಡುತ್ತಿದ್ದಾರೆ. ಇದು ರವಿಚಂದ್ರನ್ ಅವರ ಸಿನಿಮಾ ಪ್ರೀತಿಗೆ ಹಿಡಿದ ಕೈ ಕನ್ನಡಿ. ಹೌದು, 'ಗೊಂಬೆಗಳ ಲವ್' ಚಿತ್ರ ನೋಡಿದ ರವಿಚಂದ್ರನ್ಗೆ ಇಂತಹ ಒಳ್ಳೆಯ ಪ್ರಯತ್ನವಿರುವ ಚಿತ್ರ ಸೊರಗಿ ಹೋಗಬಾರದೆಂದೆನಿಸಿ ಸ್ವತಃ ತಾವೇ ವಾಹಿನಿಗಳಲ್ಲಿ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಈಗ 'ಗೊಂಬೆಗಳ ಲವ್' ಚಿತ್ರತಂಡಕ್ಕೆ ಹೊಸ ಚೈತನ್ಯ ತಂದಿದೆ. ಸಂತೋಷ್ ಎಂಬ ಹೊಸಬ 'ಗೊಂಬೆಗಳ ಲವ್' ಸಿನಿಮಾದ ನಿರ್ದೇಶಕ. ಸಿನಿಮಾ ನೋಡಿದ ಎಲ್ಲರೂ ಫಿದಾ ಆಗಿ, 'ಮೊದಲ ಪ್ರಯತ್ನದಲ್ಲೇ ಒಂದು ಒಳ್ಳೆಯ ಪ್ರಯೋಗ ಮಾಡಿದ್ದಾನೆ' ಎಂದು ಬೆನ್ನುತಟ್ಟಿದ್ದರು. ಜೊತೆಗೆ ಮಾಧ್ಯಮಗಳಿಂದಲೂ ಸಿನಿಮಾ ಬಗ್ಗೆ ಒಳ್ಳೆಯ ಪ್ರಶಂಸೆ ಬಂತು. ಹೀಗಿರುವಾಗ ಅದೊಂದು ದಿನ ರವಿಚಂದ್ರನ್ ಅವರಿಗೆ ಅವರ ಒಂದಿಬ್ಬರು ಆಪ್ತರು, 'ಗೊಂಬೆಗಳ ಲವ್' ಸಿನಿಮಾ ತುಂಬಾ ಚೆನ್ನಾಗಿದೆ. ಹುಡುಗ ಹೊಸಬನಾದರೂ ಹೊಸ ಕಾನ್ಸೆಪ್ಟ್ನೊಂದಿಗೆ ಮಾಡಿದ್ದಾನೆ' ಎಂದಿದ್ದಾರೆ. ಸಿನಿಮಾವನ್ನೇ ಕನಸು ಕಾಣುವ ಸಿನಿಮಾವನ್ನೇ ಉಸಿರಾಡುವ ರವಿಚಂದ್ರನ್ ಅವರಿಗೆ ಇಷ್ಟು ಸಾಕಿತ್ತು. ತಕ್ಷಣ ನಿರ್ದೇಶಕ ಸಂತೋಷ್ ಅವರನ್ನು ಕರೆಸಿಕೊಂಡು ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ತಮ್ಮ ಮನೆಯಲ್ಲೇ ಸಿನಿಮಾ ಪ್ರೊಜೆಕ್ಷನ್ ಹಾಕಿಸಿ ಸಿನಿಮಾ ನೋಡಿದ್ದಾರೆ. ಸಿನಿಮಾ ನೋಡಿದ ರವಿಚಂದ್ರನ್ ಫುಲ್ ಖುಷಿಯಾಗಿ, 'ನಿಜಕ್ಕೂ ತುಂಬಾ ಚೆನ್ನಾಗಿ ಸಿನಿಮಾ ಮಾಡಿದ್ದೀಯಾ. ಎಲ್ಲೂ ಬೋರ್ ಆಗುವುದಿಲ್ಲ. ಒಳ್ಳೆಯ ಪ್ರಯತ್ನ' ಎಂದು ಬೆನ್ನುತಟ್ಟುವ ಜೊತೆಗೆ ವಾಹಿನಿಗಳ 'ಗೊಂಬೆಗಳ ಲವ್' ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನಾಡಿದ್ದಾರೆ. ಇದು ರವಿಚಂದ್ರನ್ ಅವರ ಹೃದಯವಂತಿಕೆ, ಸಿನಿಮಾ ಪ್ರೀತಿಗೆ ಹಿಡಿದ ಕೈ ಗನ್ನಡಿ. ಇಂತಹ ಬೆಳವಣಿಗೆಗಳು ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಆದರೆ ಹೊಸಬರು ಸ್ವಲ್ಪ ಉಸಿರಾಡಬಹುದು. ಸ್ಟಾರ್ ನಟರು ಹೊಸಬರಿಗೆ ಪ್ರೋತ್ಸಾಹ ಕೊಟ್ಟರೆ ಹೊಸಬರೂ ಬದುಕಿಕೊಳ್ಳುತ್ತಾರೆ. ಇದರಿಂದ ಸ್ಟಾರ್ ನಟರ ಇಮೇಜ್ಗೆàನು ಧಕ್ಕೆಯಾಗುವುದಿಲ್ಲ, ಬದಲಾಗಿ ಹೆಚ್ಚೇ ಆಗುತ್ತದೆ. ಇದು ಒಂದು ಬೆಳವಣಿಗೆಯಾದರೆ, ಹೊಸಬರ 'ಪದೇ ಪದೇ' ಸಿನಿಮಾವನ್ನು ದರ್ಶನ್ ಹಾಗೂ ಸುದೀಪ್ ನೋಡುತ್ತಾರೆಂಬ ಜಾಹೀರಾತೊಂದು ಬಂದಿದೆ. ಇದು ಈಡೇರಿದರೆ ಖುಷಿಯ ಸಂಗತಿ. ಥಿಯೇಟರ್ನಲ್ಲಿ ಒಂದಷ್ಟು ಜನ ಸೇರಬಹುದು, ನಿರ್ಮಾಪಕ ಉಸಿರಾಡಬಹುದು.