ಮುಂಬಯಿ: ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಅಳಿಯನ ಕಳವಾಗಿರುವ ಕಾರಿನ ಪತ್ತೆಗೆ ಸಂಪೂರ್ಣ ಪೊಲೀಸ್ ಪಡೆ ಮೂರು ದಿನಗಳಿಂದ ಸಕಲ ಪ್ರಯತ್ನ ನಡೆಸಿದ್ದರೂ ಕೊನೆಗೆ ಲೀಲಾವತಿ ಆಸ್ಪತ್ರೆ ಸಮೀಪ ಕಾರನ್ನು ನೋಡಿದ ಶಿಂಧೆ ಪುತ್ರಿ ಪ್ರಣೀತಿ ಪೊಲೀಸರನ್ನು ಜಾಗೃತಗೊಳಿಸಿದರು.ಬಾಂದ್ರಾ ರಿಕ್ಲಮೇಶನ್ ಸಮೀಪದ ಕೊಳಚೆಗೇರಿಯೊಂದರಲ್ಲಿ ಅನಾಥ ಸ್ಥಿತಿಯಲ್ಲಿ ಕಾರು ಪತ್ತೆಯಾಗುವುದರೊಂದಿಗೆ ಎಂ.ಎನ್.ಜೋಶಿ ಮಾರ್ಗ ಪೊಲೀಸರು ನಿರಾಳರಾಗಿದ್ದಾರೆ.ಗೃಹ ಸಚಿವಾಲಯ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಾರನ್ನು ಪತ್ತೆ ಹಚ್ಚಿ ಮಾಲಕನ ವಶಕ್ಕೊಪ್ಪಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಇತರ ಕರ್ತವ್ಯಗಳನ್ನು ಬದಿಗಿರಿಸಿ ವಿವಿಧ ಪೊಲೀಸ್ ಠಾಣೆಗಳ ಪೊಲೀಸರು ಕಾರನ್ನು ಪತ್ತೆ ಹಚ್ಚುವ ಹಿಂದೆ ಬಿದ್ದಿದ್ದರು. ಮೂರು ವಿಶೇಷ ತಂಡಗಳನ್ನೂ ರಚಿಸಿದ್ದರು.ಸುಶೀಲ್ ಕುಮಾರ್ ಶಿಂಧೆ ಅವರ ಮಗಳ ಗಂಡ ರಾಜ್ ಶ್ರೋಫ್ ಅವರ ಕಾರು ಕರ್ರಿರೋಡ್ನ ಬಾವಲಾ ಕಂಪೌಂಡ್ನಿಂದ ಮೂರು ದಿನಗಳ ಹಿಂದೆ ಕಳವಾಗಿತ್ತು.ಶಿಂಧೆ ಅವರ ಮಗಳು ಪ್ರಣೀತಿ ಬಾಂದ್ರಾದ ಪಾಲಿಹಿಲ್ನಿಂದ ವರ್ಲಿಗೆ ತನ್ನ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ತನ್ನ ಭಾವನ ಕಳವಾಗಿರುವ ಕಾರು ಲೀಲಾವತಿ ಆಸ್ಪತ್ರೆ ಸಮೀಪ ಗಮನಿಸಿದರು.ತತ್ಕ್ಷಣ ಆಕೆ ತನ್ನ ಕಾರಿನ ಚಾಲಕ ವಿಜಯ್ ಖರಾಟ್ ಸಹಾಯದಲ್ಲಿ ಆ ಕಾರನ್ನು ಬೆನ್ನಟ್ಟ ತೊಡಗಿದರು. ಆ ಕಾರನ್ನು ಚಾಲಕ ದಾದರ್ ಕಡೆಗೆ ಚಲಾಯಿಸುತ್ತಿದ್ದ .ತತ್ಕ್ಷಣ ಪ್ರಣೀತಿ ಪೊಲೀಸ್ ಕಂಟ್ರೋಲ್ ರೂಮ್ಗೆ ಮಾಹಿತಿ ನೀಡಿದರು. ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕಾಗಮಿಸಿದ ಬಾಂದ್ರಾ ಪೊಲೀಸರು ಕೊಳಚೆಗೇರಿಯಲ್ಲಿ ಶೋಧ ನಡೆಸಿದಾಗ ಮೂರು ಗಂಟೆಗಳ ಬಳಿಕ ಕಾರು ಪತ್ತೆಯಾಯಿತು. ಬಳಿಕ ಕಾರನ್ನು ಕಳ್ಳತನ ಪ್ರಕರಣ ದಾಖಲಾಗಿರುವ ಎಂ.ಎನ್.ಜೋಶಿ ಮಾರ್ಗ ಠಾಣಾ ಪೊಲೀಸರ ವಶಕ್ಕೊಪ್ಪಿಸಿದರು.ಜಾಯ್ರೈಡ್ಗಾಗಿ ದುಬಾರಿ ಕಾರನ್ನು ಅಪರಿಚಿತ ವ್ಯಕ್ತಿಗಳು ಕದ್ದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.