ಹೊಸದಿಲ್ಲಿ: ಬಿಜೆಪಿ ನಾಯಕ ಅರುಣ್ ಜೇತ್ಲೀ ಅವರ ದೂರವಾಣಿ ಕರೆ ವಿವರ ಸಂಗ್ರಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವರದಿಯನ್ನು ದಿಲ್ಲಿ ಪೊಲೀಸರು ಗೃಹ ವ್ಯವಹಾರಗಳ ಖಾತೆಗೆ ಸಲ್ಲಿಸಿದ್ದಾರೆ.ಪೊಲೀಸರು ಈ ಪ್ರಕರಣದಲ್ಲಿ ಇನ್ನೋರ್ವ ವ್ಯಕ್ತಿಯನ್ನು ಬಂಧಿಸಿದ ತಾಸುಗಳ ತರುವಾಯ ಈ ವರದಿಯನ್ನು ಸಲ್ಲಿಸಲಾಯಿತು. ಬಂಧಿತ ವ್ಯಕ್ತಿಯನ್ನು ನೀರಜ್ ಎಂದು ಗುರುತಿಸಲಾಗಿದೆ. ಆತ ಖಾಸಗಿ ಪತ್ತೇದಾರಿ ಸಂಸ್ಥೆಯೊಂದರ ಉದ್ಯೋಗಿ ಎನ್ನಲಾಗಿದೆ. ಜೇತ್ಲೀ ಅವರ ಕರೆ ವಿವರಗಳನ್ನು ಸಂಗ್ರಹಿಸಿದ ಆರೋಪದಲ್ಲಿ ಆತನನ್ನು ಬಂಧಿಸಲಾಗಿದೆ.ಕೆಲವು ದಿನಗಳ ಹಿಂದೆ ಅರವಿಂದ್ ದಾಬಾಸ್ ಎಂಬ ಕಾನ್ಸ್ಟೆಬಲ್ನನ್ನು ಬಂಧಿಸಲಾಗಿತ್ತು. ವೈಯಕ್ತಿಕ ಕಾರಣಗಳಿಗಾಗಿ ತಾನು ವಿವರವನ್ನು ಸಂಗ್ರಹಿಸಿದ್ದೆ ಎಂದು ಆತ ತಿಳಿಸಿದ್ದನು.ಇದೊಂದು ಅನಧಿಕೃತ ಬೇಹುಗಾರಿಕೆ ಪ್ರಕರಣವಾಗಿದೆ. ಗೃಹ ಸಚಿವ ಸುಶೀಲ್ಕುಮಾರ್ ಶಿಂಧೆ ಬಲವಾದ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿತ್ತು.ಜೇತ್ಲೀ ಅವರ ನಡೆಯನ್ನು ಪತ್ತೆ ಹಚ್ಚುವ ಈ ಘಟನೆ ಹಿಂದೆ ಯಾರು ಇರುವರು ಮತ್ತು ಅವರ ಉದ್ದೇಶ ಏನೆನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.