ಹೊಸದಿಲ್ಲಿ: ಕೇಂದ್ರದ ಓರ್ವ ಮಾಜಿ ಸಚಿವರ ಮತ್ತು ಕಾಂಗ್ರೆಸ್ ಉಪಾಧ್ಯಕ್ಷರ ಸಮೀಪವರ್ತಿಗಳು ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಫಲಾನುಭವಿಗಳು ಎಂಬ ವರದಿಗಳ ಕುರಿತು ಕಾಂಗ್ರೆಸ್ ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ.ಕಾಪ್ಟರ್ ವ್ಯವಹಾರದಲ್ಲಿ ಮಧ್ಯವರ್ತಿಗಳಿಗೆ ಲಂಚ ನೀಡಲಾಗಿದೆ ಎಂಬ ಆದಾಯ ತೆರಿಗೆ ನಿರ್ದೇಶಕರ ಪ್ರಸ್ತಾವನೆಯನ್ನು ಫೆ. 14ರ ಪ್ರಸ್ ಇನಾ#ರ್ಮೇಶನ್ ಬ್ಯೂರೋದ ವೆಬ್ಸೈಟ್ನಲ್ಲಿ ಹಾಕಲಾಗಿತ್ತು. ಇದನ್ನು ಒಪ್ಪಿಕೊಂಡ ಬಳಿಕ ಸರಕಾರ ಈಗ ಯಾರಿಗೆ ಲಂಚ ನೀಡಲಾಗಿತ್ತು ಎನ್ನುವುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ. ಓರ್ವ ಮಾಜಿ ಕೇಂದ್ರ ಸಚಿವರ ಕುಟುಂಬ ಸದಸ್ಯರ ಮತ್ತು ಕಾಂಗ್ರೆಸ್ ಉಪಾಧ್ಯಕ್ಷರ ಸಮೀಪವರ್ತಿಯೋರ್ವರ ಹೆಸರುಗಳು ಕೇಳಿ ಬರುತ್ತಿವೆ ಎಂದು ಬಿಜೆಪಿ ಪಕ್ತಾರ ರಾಜೀವ್ ಪ್ರತಾಪ್ ರೂಡಿ ಸುದ್ದಿಗಾರರಿಗೆ ತಿಳಿಸಿದರು.ಈ ಆರೋಪಗಳಿಗೆ ಸಂಬಂಧಿಸಿ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು. ನಾವು ಈ ವಿಷಯವನ್ನು ಸಂಸತ್ತಿನಲ್ಲಿ ಬಲವಾಗಿ ಪ್ರಸ್ತಾವಿಸಲಿದ್ದೇವೆ ಎಂದು ಅವರು ಆಗ್ರಹಿಸಿದರು.ಇದೊಂದು ಮಹಾನ್ ಹಗರಣವಾಗಿದ್ದು, 360 ಕೋಟಿ ರೂ.ಗಳನ್ನು ಲಂಚವಾಗಿ ನೀಡಲಾಗಿದೆ. ರಕ್ಷಣಾ ಸಚಿವ ಎ.ಕೆ. ಆಯಂಟನಿ ಈಗ ಹಲವು ಆದೇಶಗಳನ್ನು ಮತ್ತು ಹೇಳಿಕೆಗಳನ್ನು ನೀಡುತ್ತಿರುವರು ಮತ್ತು ತನ್ನ ಪರಿಶುದ್ಧತೆಯ ವರ್ಚಸ್ಸನ್ನು ಕಾಯ್ದುಕೊಳ್ಳಲು ಶ್ರಮಿಸುತ್ತಿರುವರು. ಆದರೆ ಅವರು ಅ. 24, 2006ರಿಂದಲೇ ರಕ್ಷಣಾ ಸಚಿವರಾಗಿರುವರು ಎನ್ನುವುದು ನಿರಾಕರಿಸಲಾಗದಂಥ ಅಂಶವಾಗಿದೆ ಎಂದು ರೂಡಿ ತಿಳಿಸಿದರು.ವಿಷಯದ ಕುರಿತಂತೆ ಬಿಜೆಪಿ ಸಂಸದ ಪ್ರಕಾಶ್ ಜಾವಡೇಕರ್ ಅವರು ಡಿಸೆಂಬರ್ನಲ್ಲಿ ರಾಜ್ಯಸಭೆಯಲ್ಲಿ ಆ್ಯಂಟನಿ ಅವರಿಗೆ ಪ್ರಶ್ನೆ ಕೇಳಿದ್ದರು. ಲಂಚ ಪಾವತಿ ಬಗ್ಗೆ ಯಾವುದೇ ಪುರಾವೆ ಇಲ್ಲವೆಂದು ಸಚಿವರು ಪ್ರತಿಪಾದಿಸಿದ್ದರು. ಸರಕಾರ ಕಾಪ್ಟರ್ ವ್ಯವಹಾರಕ್ಕೆ ನಿಷ್ಕಳಂಕ ಪಟ್ಟ ನೀಡಿತ್ತು. ಆದರೆ ಅದೀಗ ವ್ಯವಹಾರವನ್ನು ರದ್ದುಗೊಳಿಸುವ ಅವಸರದಲ್ಲಿದೆ. ಅವರೀಗ ದೋಷಿಗಳಾಗಿದ್ದಾರೆ. ಆದರೆ ಅವರಿಗೆ ಲಂಚದ ಫಲಾನುಭವಿಗಳು ಯಾರು ಎನ್ನುವುದು ಈಗಲೂ ಗೊತ್ತಾಗಿಲ್ಲ ಎಂದು ರೂಡಿ ಟೀಕಿಸಿದರು.