ಹೊಸದಿಲ್ಲಿ: ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ವಾಯುಪಡೆಯ ನಿವೃತ್ತ ದಂಡನಾಯಕ ಎಸ್. ಪಿ. ತ್ಯಾಗಿ ಲಂಚ ಪಡೆದುಕೊಂಡಿರುವುದಕ್ಕೆ ಬೇಕಾದಷ್ಟು ಪುರಾವೆಗಳಿವೆ ಎಂದು ಇಟಲಿಯ ಸರಕಾರಿ ಅಭಿಯೋಜಕರು ಹೇಳಿದ್ದಾರೆ.2004ರಿಂದ 2007ರ ತನಕ ದಂಡನಾಯಕರಾಗಿದ್ದ ತ್ಯಾಗಿ ಮೇಲೆ ಆಗಸ್ಟಾ ವೆಸ್ಟ್ಲ್ಯಾಂಡ್ ಬುಟ್ಟಿಗೆ ಈ ಟೆಂಡರು ಬೀಳುವಂತೆ ಮಾಡಲು ಹೆಲಿಕಾಪ್ಟರ್ನ ತಾಂತ್ರಿಕ ಅಗತ್ಯಗಳನ್ನು ಬದಲಾಯಿಸಿದ ಆರೋಪವಿದೆ. ಆಗಸ್ಟಾ ವೆಸ್ಟ್ಲ್ಯಾಂಡ್ನ ಸಾಮರ್ಥ್ಯಕ್ಕೆ ತಕ್ಕಂತೆ ಹೆಲಿಕಾಪ್ಟರ್ಗಳ ತಾಂತ್ರಿಕ ಅಗತ್ಯಗಳನ್ನು ಮರುರೂಪಿಸಲಾಗಿತ್ತು. ಈ ಟೆಂಡರ್ ಪ್ರಕ್ರಿಯೆಯಿಂದ ಎದುರಾಳಿಗಳಾದ ಅಮೆರಿಕ ಮತ್ತು ರಶ್ಯಾದ ಕಂಪೆನಿಗಳು ಹೊರಬೀಳುವಂತೆ ಮಾಡಲು ತ್ಯಾಗಿ ಸರ್ವ ಪ್ರಯತ್ನಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ ಹಾಗೂ ಇದಕ್ಕಾಗಿ ತ್ಯಾಗಿ ಸಹೋದರರಾದ ಜೂಲಿ, ರಾಜೀವ್ ಮತ್ತು ಡೋಸ್ಕಾ ತ್ಯಾಗಿಯ ಮೂಲಕ 70 ಲ. ರೂ. ಅಥವಾ 1 ಲಕ್ಷ ಯುರೊ ಕಿಕ್ಬ್ಯಾಕ್ ಪಡೆದುಕೊಂಡಿದ್ದಾರೆಂದು ಅಭಿಯೋಜಕರು ಹೇಳಿದ್ದಾರೆ.ತ್ಯಾಗಿ ವಿರುದ್ಧ ಬೇಕಾದಷ್ಟು ಪುರಾವೆಗಳಿವೆ. ತ್ಯಾಗಿ ಹೊರತು ಬೇರೆ ಯಾರ ವಿರುದ್ಧವೂ ಆರೋಪ ಹೊರಿಸುವುದು ಅಸಾಧ್ಯ. ಭಾರತದ ರಾಜಕಾರಣಿಗಳು ಈ ಹಗರಣದಲ್ಲಿ ಶಾಮೀಲಾಗಿರುವ ಬಗ್ಗೆ ಇಷ್ಟರ ತನಕ ಯಾವುದೇ ಪುರಾವೆಗಳು ಲಭಿಸಿಲ್ಲ ಎಂದಿದ್ದಾರೆ.