ಕೋಝಿಕ್ಕೋಡ್: ಕೇರಳ-ಕರ್ನಾಟಕ ಗಡಿಯಲ್ಲಿ ನಕ್ಸಲರು ಬೀಡುಬಿಟ್ಟಿರುವ ಬಗ್ಗೆ ಪೊಲೀಸರಿಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ ಉಭಯ ರಾಜ್ಯಗಳಿಗೆ ಎಲ್ಲ ಮುನ್ನೆಚ್ಚರಿಕೆಗಳನ್ನು ವಹಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ಮುಲ್ಲಪಳ್ಳಿ ರಾಮಚಂದ್ರನ್ ಹೇಳಿದ್ದಾರೆ.ಮಾವೋವಾದಿಗಳ ಉಪಸ್ಥಿತಿಯ ಬಳಿಕ ಕೇಂದ್ರಕ್ಕೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಗರಿಷ್ಠ ಕಟ್ಟೆಚ್ಚರದಲ್ಲಿರಲು ಸೂಚಿಸಿದೆ ಎಂದರು.ಕೇರಳದಲ್ಲಿ ಸುಮಾರು 7 ಎಡಪಂಥೀಯ ತೀವ್ರವಾದಿ ಸಂಘಟನೆಗಳಿದ್ದರೂ ಅವುಗಳು ಭದ್ರ ನೆಲೆ ಹೊಂದಿಲ್ಲ. ಈ ಪೈಕಿ ಕೆಲವು ಸಂಘಟನೆಗಳು ಈಗ ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಗಾಬರಿಯಾಗಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದರು.ಸೂರ್ಯನೆಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಲಿಪಶು ಮಹಿಳೆಯ ಕುರಿತು ಕಾಂಗ್ರೆಸ್ ಸಂಸದ ಕೆ. ಸುಧಾಕರನ್ ಹಗುರವಾಗಿ ಮಾತನಾಡಿರುವ ಬಗ್ಗೆ ಕೇಳಿದಾಗ ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದರು.ಮಸ್ಕತ್ನಲ್ಲಿ ಸಮಾರಂಭವೊಂದರಲ್ಲಿ ಭಾಗವಹಿಸಲು ಹೋಗಿದ್ದ ಸುಧಾಕರನ್ ಅಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿರುವ ಮಹಿಳೆಯ ಚಾರಿತ್ರ್ಯವನ್ನು ಅವಹೇಳನ ಮಾಡಿ ಮಾತನಾಡಿರುವುದಕ್ಕೆ ವಿಪಕ್ಷದಿಂದ ಮಾತ್ರವಲ್ಲ ಕಾಂಗ್ರೆಸ್ನಿಂದಲೂ ತೀವ್ರ ಪ್ರತಿಭಟನೆ ಎದುರಾಗಿದೆ. ಕಾಂಗ್ರೆಸ್ನ ಹಲವು ನಾಯಕಿಯರು ಸುಧಾಕರನ್ ಹೇಳಿಕೆಯನ್ನು ಖಂಡಿಸಿದ್ದಾರೆ.