Udayavani | Feb 18, 2013
ಉಡುಪಿ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವ ಸ್ಪಷ್ಟ ಸೂಚನೆಗಳಿವೆ ಎಂದು ಕೇಂದ್ರ ಸಚಿವ ರೆಹ್ಮಾನ್ ಖಾನ್ ಹೇಳಿದ್ದಾರೆ.
ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಶನಿವಾರ ಜರಗಿದ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೆ ಪೂರಕವಾಗಿ ಜರಗುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಸೆಮಿಫೈನಲ್ ಆಗಿದ್ದು, ಇದರಲ್ಲಿ ನಮಗೆ ಉತ್ತಮ ಫಲಿತಾಂಶ ದೊರಕಬೇಕಾದರೆ ಎಲ್ಲ ಕಾರ್ಯಕರ್ತರು ಶ್ರಮಿಸಬೇಕಾಗಿದೆ ಎಂದು ಕರೆ ನೀಡಿದರು.
ನಗರಸಭೆಯ 35 ಕ್ಷೇತ್ರಗಳಿಗೂ ವಾರ್ಡ್ ಸಮಿತಿಗಳೇ ಸೂಚಿಸಿದ ಅಭ್ಯರ್ಥಿಗಳನ್ನು ಆರಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಬಿಜೆಪಿ ಆಡಳಿತಾವಧಿಯಲ್ಲಿ ನಡೆಯುತ್ತಿದ್ದ ಸ್ವಜನ ಪಕ್ಷಪಾತ ಭ್ರಷ್ಟಾಚಾರದಿಂದ ಜನತೆ ರೋಸಿಹೋಗಿದ್ದು, ಮತದಾರರು ಬದಲಾವಣೆಗಾಗಿ ಕಾತರರಾಗಿರುವುದು ಎಲ್ಲೆಲ್ಲೂ ಕಂಡು ಬರುತ್ತಿದೆ. ಕಾಂಗ್ರೆಸ್ ಪಕ್ಷ ನಗರಸಭೆಯಲ್ಲಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದರು.
ನಮ್ಮ ಪಕ್ಷವು ಯಾವಾಗಲೂ ಅಭಿವೃದ್ಧಿ ಪರವಾಗಿದ್ದು, ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಪ್ರತಿಯೊಬ್ಬ ಕಾರ್ಯಕರ್ತ ಮತದಾರರಿಗೆ ತಿಳಿಸಬೇಕು. ಕಾಂಗ್ರೆಸ್ ಪಕ್ಷ ನಗರದ ಅಭಿವೃದ್ಧಿಗೆ ಹಾಕಿಕೊಂಡ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವ ಕೆಲಸ ಮಾಡಬೇಕಾಗಿದೆ. ನಗರಸಭೆಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಕೊಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮಧ್ವರಾಜ್ ಹೇಳಿದರು.
ಮುಖಂಡರಾದ ಎಂ.ಎ. ಗಫೂರ್, ಮೊದೀನ್ ಬಾವಾ, ಅಶೋಕ್ ಕುಮಾರ್ ಕೊಡವೂರು, ವೆರೋನಿಕಾ ಕರ್ನೆàಲಿಯೋ, ಕೇಶವ ಎಂ. ಕೋಟ್ಯಾನ್, ದಿನೇಶ್ ಪುತ್ರನ್, ಬಿ. ನರಸಿಂಹಮೂರ್ತಿ, ಕೇದಾರನಾಥ ಕಿಶೋರ್, ಇಂದ್ರಾಳಿ ಕುಶಲ ಶೆಟ್ಟಿ, ಭಾಸ್ಕರ ರಾವ್ ಕಿದಿಯೂರು, ಅಮೃತ್ ಶೆಣೈ, ಯತೀಶ್ ಕರ್ಕೆàರಾ, ಮಿಥುನ್ ಅಮೀನ್, ಓಬು ಪೂಜಾರಿ, ಅಬ್ದುಲ್ ರಹಿಮಾನ್, ಮನೋಜ್ ಕರ್ಕೇರ, ಗಣೇಶ್ ನೆರ್ಗಿ, ಲಕ್ಷ್ಮಣ ಶೆಣೈ, ಸತೀಶ್ ಅಮೀನ್ ಪಡುಕೆರೆ, ಜಯಾನಂದ ಕಲ್ಯಾಣಪುರ, ಪ್ರಖ್ಯಾತ್ ಶೆಟ್ಟಿ ತೆಂಕನಿಡಿಯೂರು, ಆನಂದಿ, ಲತಾ ಭಾಸ್ಕರ್ ಮೊದಲಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಜನಾರ್ದನ ಭಂಡಾರ್ಕರ್ ಕಾರ್ಯಕ್ರಮ ನಿರೂಪಿಸಿದರು.