ಮಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಇಲ್ಲಿ ನಡೆದ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆ ಯಕ್ಷೋತ್ಸವ 2012 - 13ರಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ 'ಸುದರ್ಶನ ಗರ್ವಭಂಗ' ಯಕ್ಷಗಾನವು ಪ್ರಥಮ ಸ್ಥಾನ ಗಳಿಸಿ ಕೋಣೆತೋಟ ರಾಮಯ್ಯ ಭಟ್ ಮೆಮೋರಿಯಲ್ ಟ್ರೋಫಿಯನ್ನು ಗೆದ್ದುಕೊಂಡಿದೆ.ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿ ತಂಡ ಪ್ರದರ್ಶಿಸಿದ 'ವಿದ್ಯುನ್ಮತಿ ಕಲ್ಯಾಣ' ಯಕ್ಷಗಾನವು ರನ್ನರ್ ಅಪ್ ಹಾಗೂ ಸುರತ್ಕಲ್ ಗೋವಿಂದದಾಸ ಕಾಲೇಜು ತಂಡದ 'ಸುಧನ್ವ ಮೋಕ್ಷ' ಯಕ್ಷಗಾನ ತೃತೀಯ ಸ್ಥಾನ ಗಳಿಸಿತು.ಫೆ. 16 ಮತ್ತು 17ರಂದು ಜರಗಿದ ಯಕ್ಷೋತ್ಸವದಲ್ಲಿ 10 ಕಾಲೇಜುಗಳ ತಂಡಗಳು ಭಾಗವಹಿಸಿದ್ದವು.ಸಮಾರೋಪದಲ್ಲಿ ಗುರುಪುರ ಗೋಳಿದಡಿಗುತ್ತು ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ, ಯಕ್ಷಗಾನ ಕಲಾವಿದರಾದ ಶ್ರೀಧರ ಭಂಡಾರಿ ಪುತ್ತೂರು, ಡಿ. ಮನೋಹರ ಕುಮಾರ್, ಎಂ.ಎಂ.ಸಿ. ರೈ ಅವರು ಮುಖ್ಯ ಅತಿಥಿಗಳಾಗಿದ್ದರು. ಉದ್ಯಮಿ ಪುಷ್ಪರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು.ಯಕ್ಷೋತ್ಸವ ಸಂಚಾಲಕ ಪ್ರೊ| ಟಿ. ವಿದ್ಯಾಶಂಕರ್ ಸ್ವಾಗತಿಸಿದರು. ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ನರೇಶ್ ಎಂ. ವಿಜೇತರ ವಿವರ ನೀಡಿದರು. ಧನಂಜಯ ವಂದಿಸಿದರು.