ಚಿತ್ರ-ವರದಿ : ಸುಭಾಶ್ ಶಿರಿಯಾ | Feb 18, 2013
ಡೊಂಬಿವಲಿ: ಮೊಗವೀರ ಸಮಾಜವು ಅತ್ಯಂತ ಪ್ರಾಚೀನ ಸಮಾಜವಾಗಿದ್ದು, ಕಾಲಕ್ರಮೇಣ ನೈಸರ್ಗಿಕ ಮತ್ತು ಭೌಗೋಳಿಕ ಸ್ಥಿತ್ಯಾಂತರಗಳಿಂದ ಜಗತ್ತಿನ ಇತರೆಡೆಗಳಲ್ಲಿ ಇವರ ಜೀವನ ವರ್ಗಾವಣೆಗೊಂಡಿದೆ. ಕೇರಳದ ಮುಕ್ಕೋರ್ ಸಮಾಜವು ಮೊಗವೀರ ಸಮಾಜದಂತೆ ಸಮಾಜ ಸಂಸ್ಕೃತಿಯನ್ನು ಹೊಂದಿದ, ಸಾಗರದಲ್ಲಿ ದುಡಿಯುವ ಜನಾಂಗವಾಗಿದೆ. ಈ ಜನಾಂಗವು ಮೆಡಿಟರೇನಿಯನ್ ದ್ವೀಪದಲ್ಲೂ ಕಂಡುಬಂದಿದೆ ಎಂದು ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಅಭಿಪ್ರಾಯಿಸಿದರು.

ಫೆ. 17 ರಂದು ಡೊಂಬಿವಲಿ ಪೂರ್ವದ ಬ್ರಾಹ್ಮಣ ಸಮಾಜ ಸಭಾಗೃಹದಲ್ಲಿ ಜರಗಿದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮುಖವಾಣಿ ಮೊಗವೀರ ಮಾಸಿಕದ 73 ರ ಸಂಭ್ರಮದ ನಿಮಿತ್ತ ನಡೆದ 4 ನೇ ಓದುಗರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಲ ಬದಲಾದಂತೆ ಚಲನಶೀಲತೆಯನ್ನು ನಾವು ಒಪ್ಪಿಕೊಳ್ಳಬೇಕಾದ ಸನ್ನಿವೇಶ ಬರುತ್ತದೆ. ಅದರಂತೆ ಆರಾಧನೆಯ ಮೂಲ ಸಿದ್ಧಾಂತಕ್ಕೆ ಧಕ್ಕೆ ಬಾರದಂತೆ ಜಾಗ್ರತೆ ವಹಿಸಬೇಕಾದ ಅಗತ್ಯವಿದೆ. ಇಂದು ಮಂಡಿಸಲಾದ ವಿಚಾರಗೋಷ್ಟಿಯಲ್ಲಿ ಅಧ್ಯಯನಶೀಲತೆ ಕಂಡುಬಂದಿದ್ದು, ಇದನ್ನು ದಾಖಲೀಕರಿಸುವ ಅಗತ್ಯವಿದೆ ಎಂದರು.
ಸಮಾವೇಶವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ವಸಂತ ಕಲಕೋಟಿ ಅವರು, ಮೊಗವೀರ ವ್ಯವಸ್ಥಾಪಕ ಮಂಡಳಿಗೆ 111 ವರ್ಷಗಳ ಇತಿಹಾಸವಿದ್ದು, ಇದು ಸಾಧಾರಣ ಉದ್ಯೋಗವಂತರಿಂದ ಸ್ಥಾಪನೆಗೊಂಡ ಸಂಸ್ಥೆಯಾಗಿದ್ದು, ಕೆಳಮಟ್ಟದಿಂದಲೇ ಬೆಳೆದ ಈ ಸಂಸ್ಥೆಯು ಸಮಾಜ ಬಾಂಧವರ ಪ್ರಾಮಾಣಿಕತೆ ಹಾಗೂ ಸಂಘಟನಾ ಶಕ್ತಿಯಿಂದ ಹಲವು ಕ್ಷೇತ್ರಗಳಲ್ಲಿ ದಾಖಲೆಗಳನ್ನು ನಿರ್ಮಿಸಿದೆ. ಇದರಲ್ಲಿ ಒಂದು ಮುಂಬಯಿಯ ಮೊದಲ ಕನ್ನಡದ ಜಾತೀಯ ಉಖಪತ್ರಿಕೆಯಾಗಿ ಮೊಗವೀರ ಮಾಸಿಕವು ಹೊರಬಂದಿದೆ. ಆದರೆ ಇದು ಕೇವಲ ಒಂದು ಸಮಾಜಕ್ಕೆ ಸೀಮಿತವಾಗಿರದೆ ಸಮಸ್ತ ಮುಂಬಯಿಯ ತುಳು ಕನ್ನಡಿಗರ ಪತ್ರಿಕೆಯಾಗಿ ಬೆಳೆದು ಬಂದಿದೆ ಎಂದು ನುಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಅಜಿತ್ ಸುವರ್ಣ ಅವರು ಮಾತನಾಡಿ, ಮಂಡಳಿಯ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತನ್ನದೆ ಆದ ಕೊಡುಗೆಯನ್ನು ನೀಡುತ್ತಿದ್ದು, ಸಮಾಜದ ಸಾಹಿತಿಗಳನ್ನು ಹಾಗೂ ಬರಹಗಾರರನ್ನು ಯಾವಾಗಲೂ ಪ್ರೋತ್ಸಾಹಿಸುತ್ತಾ ಬಂದಿದೆ. ಮಂಡಳಿಯು ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು, ಮೇ 4 ರಂದು ಅಂಧೇರಿ ಪಶ್ಚಿಮದ ಮೊಗವೀರ ಭವನದ ಸಮೀಪದಲ್ಲಿ ಅತ್ಯಾಧುನಿಕ ಸುಸಜ್ಜಿತ ಸಭಾಗೃಹ ಲೋಕಾರ್ಪಣೆಗೊಳ್ಳಲಿದೆ. ಸರ್ವ ತುಳು-ಕನ್ನಡಿಗರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿನಂತಿಸಿದರು.
ಸಮಾರಂಭದಲ್ಲಿ ಮೊಗವೀರ ಮಾಸಿಕದ ಮಾಜಿ ಸಂಪಾದಕಿ ಜಿ. ಪಿ. ಕುಸುಮಾ ಅವರ ಮೊಗವೀರ ಮಾಸಿಕ ಒಂದು ಅಧ್ಯಯನ ಎಂ. ಫಿಲ್ ಅಧ್ಯಯನ ಸಂಪ್ರಬಂಧದ ಕೃತಿಯನ್ನು ಡಾ| ಸುನೀತಾ ಶೆಟ್ಟಿ ಅವರು ಬಿಡುಗಡೆಗೊಳಿಸಿದರು. ಲೇಖಕ ಹರೀಶ್ ಹೆಜ್ಮಾಡಿ ಅವರು ಕೃತಿ ಪರಿಚಯಿಸಿದರು. ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು ಮತ್ತು ಜಿ. ಪಿ. ಕುಸುಮಾ ಅವರನ್ನು ಗೌರವಿಸಲಾಯಿತು.
ಸಮಾವೇಶದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾಜಗತ್ತು ವಿಜಯಕುಮಾರ್ ಶೆಟ್ಟಿ ಅವರು ಭೂತಾರಾದಾನೆ ಅಂದು-ಇಂದು, ಶ್ರೀನಿವಾಸ ಸಾಫಲ್ಯ ಅವರು ಮೊಗವೀರರು ಮತ್ತು ಸಫಲಿಗರು, ಲೇಖಕ ದೇವದಾಸ ಪಿ. ಸಾಲ್ಯಾನ್ ಅವರು ಸಾಹಿತ್ಯ ಮತ್ತು ಮೊಗವೀರರು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಿರಿನಾಡ ವೆಲ್ಫೆàರ್ ಅಸೋಸಿಯೇಶನ್ದ ಸದಸ್ಯರು ಸವಿತಾ ಸಾಲ್ಯಾನ್ ಮತ್ತು ಬಳಗ, ವಿಜಯ ಆ್ಯಂಡ್ ಗ್ರೂಪ್ ಅವರಿಂದ ನೃತ್ಯ ವೈವಿಧ್ಯ ನಡೆಯಿತು.
ಡಾ| ವಾಣಿ ಉಚ್ಚಿಲ್ಕರ್ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಟಿ ಜರಗಿತು. ಮಂಡಳಿಯ ಡೊಂಬಿವಲಿ ಶಾಖೆಯ ಕಾರ್ಯಾಧ್ಯಕ್ಷ ಶೇಖರ್ ಮೆಂಡನ್ ಸ್ವಾಗತಿಸಿದರು. ಮೊಗವೀರ ಸಂಪಾದಕ ಅಶೋಕ್ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಡೊಂಬಿವಲಿ ಶಾಖೆಯ ಕಾರ್ಯದರ್ಶಿ ಯಧುವೀರ್ ಪುತ್ರನ್ ಅವರು ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಮೊಗವೀರ ಮಂಡಳಿಯ ಗೌರವ ಪ್ರಧಾನ ಕಾರ್ಯದರ್ಶಿ ಎಚ್. ಅರುಣ್ಕುಮಾರ್, ಮಾಜಿ ಸಂಪಾದಕ ಜಿ. ಕೆ. ರಮೇಶ್, ಮೊಗವೀರ ಮಾಸಿಕದ ಮ್ಯಾನೇಜರ್ ಸುರೇಶ್ ತಿಂಗಳಾಯ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮೊಗವೀರ ಸಮಾಜವು ಮುಂಬಯಿಯಲ್ಲಿ ಬಹಳ ಹಿರಿಯ ಸಂಸ್ಥೆಯಾಗಿದ್ದು, ಇದು ಅನೇಕ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದೆ. ಮೊಗವೀರ ಮಾಸಿಕದ ಮೂಲಕ ಸಾಹಿತಿಗಳನ್ನು ಮತ್ತು ಲೇಖಕರನ್ನು ಪ್ರೋತ್ಸಾಹಿಸುತ್ತಿರುವುದು ಅಭಿನಂದನೀಯ. ಈ ಪತ್ರಿಕೆಯು 73 ವರ್ಷಗಳನ್ನು ದಾಖಲಿಕರಿಸಿರುವುದು ಮುಂಬಯಿ ಕನ್ನಡಿಗರಿಗೆ ಹೆಮ್ಮೆಯ ಸಂಗತಿ - ಚಂದ್ರಶೇಖರ ಪಾಲೆತ್ತಾಡಿ (ಸಂಪಾದಕರು : ಕರ್ನಾಟಕ ಮಲ್ಲ).
ಇಂದಿನ ಸಮಾರಂಭವು ಸಾಹಿತ್ಯಕ ಕ್ಷೇತ್ರದಲ್ಲಿ ಒಂದು ಉತ್ತಮ ಕಾರ್ಯಕ್ರಮವಾಗಿದ್ದು, ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು - ಕರುಣಾಕರ ಶೆಟ್ಟಿ (ಉದ್ಯಮಿ).
ಕಳೆದ 7 ದಶಕಗಳಿಂದ ಮೊಗವೀರ ಮಾಸಿಕವು ಮುಂಬಯಿಯಲ್ಲಿ ಅನೇಕ ಲೇಖಕರನ್ನು ಹಾಗೂ ಉದಯೋನ್ಮುಖ ಸಾಹಿತಿಗಳನ್ನು ಬೆಳೆಸಿದೆ. ಸಾಮಾಜಿಕ ಕ್ಷೇತ್ರದಲ್ಲಿ ಜಾತಿಮೀರಿ ಕೆಲಸವನ್ನು ಮಾಡಿದೆ ಎಂಬುವುದಕ್ಕೆ ಅನೇಕ ನಿದರ್ಶನಗಳಿವೆ - ಡಾ| ಜಿ. ಎನ್. ಉಪಾಧ್ಯ (ಮುಖ್ಯಸ್ಥರು : ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ).