ಹೊಸದಿಲ್ಲಿ: ಕಾಡುಗಳ್ಳ ವೀರಪ್ಪನ್ನ ನಾಲ್ವರು ಸಹಚರರ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟು ಮುಂದಿನ ಆದೇಶ ತನಕ ತಡೆಹಿಡಿದಿದೆ. 2004ರಲ್ಲಿ ಕರ್ನಾಟಕದಲ್ಲಿ 22 ಪೊಲೀಸರ ಸಾವಿಗೆ ಕಾರಣವಾದ ನೆಲಬಾಂಬ್ ಸ್ಫೋಟ ನಡೆಸಿದ್ದಕ್ಕಾಗಿ ಈ ನಾಲ್ವರಿಗೆ ಮರಣದಂಡನೆ ವಿಧಿಸಲಾಗಿತ್ತು.ವರಿಷ್ಠ ನ್ಯಾಯಮೂರ್ತಿ ಅಲ್ತಮಸ್ ಕಬೀರ್, ನ್ಯಾಯಮೂರ್ತಿ ಎ.ಆರ್. ದವೆ ಮತ್ತು ನ್ಯಾಯಮೂರ್ತಿ ವಿಕ್ರಮ್ಜಿತ್ ಸೇನ್ ಅವರನ್ನೊಳಗೊಂಡ ಪೀಠ ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ನಿಗದಿಪಡಿಸಿತು. 'ಈ ಅವಧಿಯಲ್ಲಿ ನಾಲ್ವರು ಅಪರಾಧಿಗಳ ಗಲ್ಲು ಶಿಕ್ಷೆ ಅನುಷ್ಠಾನ ಮೇಲೆ ತಡೆಯಾಜ್ಞೆ ಜಾರಿಯಲ್ಲಿರುವುದು' ಎಂದು ಪೀಠ ಹೇಳಿತಲ್ಲದೆ ''ರಿಟ್ ಅರ್ಜಿಯ ವಿಚಾರಣೆ ನಾಡಿದ್ದು(ಬುಧವಾರ) ನಡೆಯಲಿದೆ' ಎಂದು ತಿಳಿಸಿತು.ನಾಲ್ವರು ಅಪರಾಧಿಗಳ ಪರ ರಿಟ್ ಅರ್ಜಿಯನ್ನು ವಕೀಲ ಸಮಿಕ್ ನಾರಾಯಣ್ ಸಲ್ಲಿಸಿದರು. ಈ ಮುನ್ನ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯ ಸ್ವೀಕಾರಾರ್ಹತೆ ಕುರಿತು ಅಟಾರ್ನಿ ಜನರಲ್ ಜಿ.ಇ.ವಹನ್ವತಿ ಅವರು ಆಕ್ಷೇಪ ಸಲ್ಲಿಸಿದ ಬಳಿಕ ಅರ್ಜಿಯನ್ನು ಸರಿಪಡಿಸುವುದಕ್ಕೆ ನಾರಾಯಣ್ ಅವರಿಗೆ ಸ್ವಾತಂತ್ರ್ಯ ನೀಡಲಾಗಿತ್ತು.ತಾಂತ್ರಿಕ ಕಾರಣಗಳ ಮೇಲೆ ಅರ್ಜಿಯ ಸ್ವೀಕಾರಾರ್ಹತೆಯನ್ನು ಪ್ರಶ್ನಿಸಿದ ವಹನ್ವತಿ, ಅರ್ಜಿಯ ಪ್ರತಿಯನ್ನು ಸೋಮವಾರ ಮುಂಜಾನೆ ತನಕ ಕೇಂದ್ರಕ್ಕಾಗಲೀ ಕರ್ನಾಟಕ ಸರಕಾರಕ್ಕಾಗಲೀ ನೀಡಲಾಗಿಲ್ಲ ಎಂದು ತಗಾದೆ ತೆಗೆದರು. ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಕೊಲಿನ್ ಗೊನ್ಸಾಲ್ವಿಸ್ ಸರಿಯಾದ ಅರ್ಜಿ ಸಲ್ಲಿಸಲು ಒಂದು ಅಥವಾ ಎರಡು ದಿನಗಳ ಅವಕಾಶವೀಯಬೇಕೆಂದು ಕೋರಿದರು.ಫೆ. 16ರಂದು ಸುಪ್ರೀಂಕೋರ್ಟು ನಾಲ್ವರು ಅಪರಾಧಿಗಳ ಅರ್ಜಿಯ ತುರ್ತು ವಿಚಾರಣೆಯನ್ನು ನಡೆಸಲು ನಿರಾಕರಿಸಿತ್ತು ಮತ್ತು ಅವರನ್ನು ಫೆ. 17ರಂದು ಗಲ್ಲಿಗೇರಿಸಲಾಗುವುದೆಂಬ ವದಂತಿಗೆ ಯಾವುದೇ ಆಧಾರವಿಲ್ಲವೆಂದು ಹೇಳಿತ್ತು.ವೀರಪ್ಪನ್ನ ಅಣ್ಣ ಜ್ಞಾನಪ್ರಕಾಶ್, ಸೈಮನ್, ಮೀಸೆಕಾರ್ ಮಾದಯ್ಯ ಮತ್ತು ಬಿಲವೇಂದ್ರನ್ ಅವರಿಗೆ 1993ರಲ್ಲಿ ಕರ್ನಾಟಕದ ಪಾಲಾರ್ನಲ್ಲಿ ನೆಲಬಾಂಬ್ ಸ್ಫೋಟಿಸಿ 22 ಪೊಲೀಸರನ್ನು ಹತ್ಯೆಗೈದುದಕ್ಕಾಗಿ ಮರಣದಂಡನೆ ವಿಧಿಸಲಾಗಿದೆ. ಅವರ ದಯಾಭಿಕ್ಷೆ ಅರ್ಜಿಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಫೆ. 13ರಂದು ತಿರಸ್ಕರಿಸಿದ್ದರು. ನಾಲ್ವರು ಅಪರಾಧಿಗಳು ಈಗ ಬೆಳಗಾವಿ ಜೈಲಿನಲ್ಲಿದ್ದಾರೆ.