Udayavani | Feb 19, 2013
ಬೆಂಗಳೂರು: ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ನಗರದಲ್ಲಿ ನಡೆದ ಮೂರು ದಿನಗಳ ತರಬೇತಿ ಶಿಬಿರದ ಅಂತಿಮ ದಿನ ಉಪಸ್ಥಿತರಿದ್ದರೂ ಅಭ್ಯಾಸಕ್ಕೆ ಇಳಿಯದೇ ಅಚ್ಚರಿ ಮೂಡಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಸರಣಿಗಾಗಿ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರು ದಿನಗಳ ತರಬೇತಿ ಶಿಬಿರದ ಅಂತಿಮ ದಿನವಾದ ಸೋಮವಾರ ಬೌಲರ್ಗಳು ತಮ್ಮ ಸಾಮರ್ಥ್ಯವನ್ನು ಓರೆಗೆ ಹಚ್ಚಿದರೆ, ಬ್ಯಾಟ್ಸ್ಮನ್ಗಳು ಬ್ಯಾಟಿಂಗ್ ಸುಧಾರಣೆಯತ್ತ ಗಮನ ಹರಿಸಿದ್ದರು.

ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಧೋನಿ ಅಭ್ಯಾಸ ಮಾಡದೇ ಸಹ ಆಟಗಾರರ ಜತೆ ಮಾತುಕತೆ ನಡೆಸುತ್ತಾ ಕಾಲ ಕಳೆದರು. ಹಿರಿಯ ಆಟಗಾರ ಸಚಿನ್, ಹರ್ಭಜನ್ ಸಿಂಗ್ ಮತ್ತು ಚೇತೇಶ್ವರ್ ಪೂಜಾರ ಅವರೊಂದಿಗೆ ನೆಟ್ ಅಭ್ಯಾಸದ ವೇಳೆ ಸುದೀರ್ಘ ಮಾತುಕತೆ ನಡೆಸಿದರು.

ಮೊದಲೆರಡು ದಿನಗಳ ಕಾಲ ಎರಡು ಅವಧಿಯಲ್ಲಿ ಕಠಿಣ ಅಭ್ಯಾಸ ನಡೆಸಿದ್ದ ಆಟಗಾರರು ಸೋಮವಾರ ನಿರಾಳವಾಗಿದ್ದಂತೆ ಕಂಡು ಬಂದಿತ್ತು. ಮಧ್ಯಾಹ್ನದ 3 ಗಂಟೆ ನಂತರ ಅಭ್ಯಾಸಕ್ಕಿಳಿದ ಆಟಗಾರರು ನೇರವಾಗಿ ಅಭ್ಯಾಸಕ್ಕಿಳಿದರು. ಸಚಿನ್, ರಹಾನೆ, ವಿರಾಟ್ ಕೊಹ್ಲಿ, ಮುರಳಿ ವಿಜಯ್ ಮತ್ತು ಸೆಹ್ವಾಗ್ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ವೇಗ ಹಾಗೂ ಸ್ಪಿನ್ನರ್ಗಳನ್ನು ಸತತವಾಗಿ ಎದುರಿಸುವ ಮೂಲಕ ಅಂತಿಮ ಕಸರತ್ತು ನಡೆಸಿದರು.

ಅಶೋಕ್ ದಿಂಡಾ, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮ, ಪ್ರಗ್ಯಾನ್ ಓಜಾ ಮತ್ತು ಆರ್. ಅಶ್ವಿನ್ ಸುಮಾರು ಒಂದು ಗಂಟೆ ಬೌಲಿಂಗ್ ಮಾಡಿದರು.

ಸಚಿನ್ ಸುಮಾರು 45 ನಿಮಿಷಗಳ ಕಾಲ ಅಭ್ಯಾಸ ನಡೆಸಿ ಗಮನ ಸೆಳೆದರು. ಫೆ.22ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಆಟಗಾರರು ಮಂಗಳವಾರ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ.
