ಪರಿಸರಪ್ರಿಯ
ಮಳೆಗಾಲದ ಬಳಿಕನದಿ, ಹಳ್ಳ, ಕೆರೆಗಳಲ್ಲಿ ಮೀನಿನ ಬೇಟೆ ನಡೆಸುವುದೆಂದರೆ ಸುಲಭವಲ್ಲ; ಅದಕ್ಕೆ ವಿಶೇಷವಾದ ಚಾಕಚಕ್ಯತೆ ಬೇಕು.
ಜನ ಮೀನು ಹಿಡಿಯುವ ಕಾಯಕದಲ್ಲಿ ತೊಡಗುವುದು ಒಮ್ಮೆ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ. ಮತ್ತೂಮ್ಮೆ ಮಳೆಗಾಲ ಮುಗಿದು ನೀರು ಕಡಿಮೆಯಾದಾಗ. ಇದು ಸಮುದ್ರದ ಮೀನುಗಾರರ ಕಥೆಯಲ್ಲ. ಹಳ್ಳಿ ಪ್ರದೇಶಗಳಲ್ಲಿ ನದಿ, ಹಳ್ಳ, ಕೆರೆಗಳಲ್ಲಿ ಮೀನು ಹಿಡಿಯುವ ಕಾಯಕ ನಡೆಸುವವರ ಕಥೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ನದಿಗಳಲ್ಲಿ ಕೆಂಪು ಬಣ್ಣದ ನೀರು ಬರುವ ಸಮಯದಲ್ಲಿ ಆ ನೀರಿನಲ್ಲಿ ಮೀನುಗಳು ಬರುವುದರಿಂದ ಆ ಸಮಯದಲ್ಲಿ ಮೀನು ಹಿಡಿಯುವವರು ತಮ್ಮ ಕಾಯಕಕ್ಕೆ ತೊಡಗುತ್ತಾರೆ. ನಂತರ ಅವರು ಮೀನು ಹಿಡಿಯಲು ಹೋಗುವುದು ಮಳೆಗಾಲ ಮುಗಿದ ನಂತರ. ಮೀನು ಹಿಡಿಯುವುದು ಸುಲಭದ ಮಾತಲ್ಲ. ಇದು ಯುಕ್ತಿಯಿಂದ ನಡೆಯುವ ಕೆಲಸ.
ಅಂತಹ ಚಾಕಚಕ್ಯತೆಯಿಂದ ವರ್ಷವಿಡೀ ನೀರಿನಲ್ಲಿ ಒಡಾಡುವ ಕುಂಡಡ್ಕದ ಬಾಬು ಮೀನಿನ ಭೇಟೆಯಲ್ಲಿ ನಿಸೀÕಮರು. ಪ್ರಾಥಮಿಕ ವಿದ್ಯಾಭ್ಯಾಸ ಮಾಡಿರುವ ಬಾಬು ಊರಿನಲ್ಲಿ ನದಿ, ಕೆರೆ ತೋಡುಗಳಲ್ಲಿ ಮೀನು ಇರುವ ಜಾಗ, ಏಡಿಯ ಆವಾಸ ತಾಣಗಳು, ಸಿಗಡಿಯ ನೆಲೆ ಇವುಗಳನ್ನು ನಿಂತಲ್ಲೇ ಪಟ ಪಟ ಹೇಳುತ್ತಾರೆ. ಮಳೆ ಮುಗಿದ ನಂತರ ಅವರ ಮನೆಯಲ್ಲಿ ತೋಡಿನ ಮೀನಿನ ಪರಿಮಳ ಇರದ ದಿನಗಳೇ ಇಲ್ಲ.
ಮಳೆಗಾಲದ ಸಮಯದಲ್ಲಿ ಅಣೆಕಟ್ಟೆ ನೀರಲ್ಲಿ ಗಾಳ ಹಿಡಿದು ಕೂರುವ ಇವರಿಗೆ ಮಳೆಯೂ ಇಲ್ಲ, ಚಳಿಯೂ ಇಲ್ಲ. ಆದರೆ ಅವರಿಗೆ ಇದಕ್ಕಿಂತಲೂ ಸುಲಭದ ಕೆಲಸ ಬಲೆಯ ಮೂಲಕ ಮೀನು ಹಿಡಿಯುವುದು. ಸಂಜೆಯ ಸಮಯದಲ್ಲಿ ಬಲೆ ಬಿಟ್ಟರೆ ರಾತ್ರಿಯಾಗುತ್ತಲೇ ಮೀನುಗಳು ಬಲೆಗೆ ಬಿದ್ದಿರುತ್ತವೆ. ಬೆಳಗ್ಗೆ ಬಲೆಯನ್ನು ಮೇಲಕ್ಕೆತ್ತಿ ಮೀನನ್ನು ಬೇರ್ಪಡಿಸುತ್ತೇನೆ ಎನ್ನುತ್ತಾರೆ ಬಾಬು.
ಗುಡ್ಡದಲ್ಲಿ ಸಿಗುವ ಅಮಲು ಜಾತಿಯ ಕಳ್ಳಿ, ಕಾರೆ ಕಡ್ಡಿಗಳನ್ನು ನೀರಿಗೆ ಹಾಕಿ ಕಳಸಿ ಮೀನುಗಳಿಗೆ ಅಮಲು ಬರಿಸಿ ಹಿಡಿಯಬಹುದು. ಇವರು ಮೀನು ಹಿಡಿಯಲು ಹೊರಟರೆ ಸಾಕು ಕುಂಡಡ್ಕದ ಹುಡುಗ ಝಬೈರ್ ಬಿದಿರ ಕಡ್ಡಿಯ ಚೀಲ ಹಿಡಿದು ಬಾಬು ಅವರಿಗೆ ಸಾಥ್ ನೀಡುತ್ತಾರೆ.