ಪ.ರಾಮಕೃಷ್ಣ ಶಾಸ್ತ್ರಿ
ಇದರ ಹಣ್ಣು ಅಷ್ಟೇನೂ ರಚಿಕರವಲ್ಲ, ಆದರೆ ಚಿಪ್ಸ್ಗೆ ಹೇಳಿ ಮಾಡಿಸಿದಂತಿರುವುದರಿಂದ ಇದನ್ನು ಚಿಪ್ಸ್ ಹಲಸು ಎಂದು ಕರೆಯುತ್ತಾರೆ.
ಬೆಳ್ತಂಗಡಿ ತಾಲೂಕಿನ ಪೆರೊಡಿಕಟ್ಟೆಯಲ್ಲಿರುವ ತಲೆಮಾರುಗಳ ಇತಿಹಾಸವಿರುವಂತಹ 50 ಅಡಿ ಎತ್ತರದ ಹಲಸಿನ ಮರವೊಂದರಲ್ಲಿ ವರ್ಷಕ್ಕೆ ಸಾವಿರಾರು ಹಲಸುಗಳಾದರೂ ಇದು ತಿನ್ನಲು ಅಷ್ಟೊಂದು ರುಚಿಕರವಾಗಿಲ್ಲ. ಆದರೆ ಇದು ಚಿಪ್ಸ್ಗೆ ಹೇಳಿ ಮಾಡಿಸಿದ ಹಲಸು ಹಾಗಾಗಿಯೇ ಇದನ್ನು ಚಿಪ್ಸ್ ಹಲಸು ಎಂದು ಕರೆಯುತ್ತಾರೆ.
ರೆಂಬೆ ಕೊಂಬೆಗಳಲ್ಲೆಲ್ಲಾ ಕಾಯಿ ಕೊಡುವ ಈ ಮರವನ್ನು ಕಾಯಿ ಬಿಟ್ಟ ಸಂದರ್ಭದಲ್ಲಿ ಏರುವಂತಿಲ್ಲ. ಮರಹತ್ತಲಾಗದಷ್ಟು ಹಣ್ಣುಗಳಿರುತ್ತವೆ. ಈ ಮರದಲ್ಲಿ ಜನವರಿ ತಿಂಗಳಲ್ಲಿ ಎಳೆಯ ಕಾಯಿಗಳು ಕಾಣಿಸಿಕೊಂಡು ಜೂನ್ ತಿಂಗಳ ವೇಳೆಗೆ ಹಲಸು ಬಲಿತು ಹಣ್ಣಾಗುತ್ತದೆ. ಕೆಲವು ಮರಗಳು ಕೆಲವೊಂದು ವರ್ಷಗಳಲ್ಲಿ ಫಲವನ್ನೇ ಕೊಡದಿದ್ದರೂ ಈ ಮರ ಮಾತ್ರ ವರ್ಷಂಪ್ರತಿ ಸಾವಿರಾರು ಹಣ್ಣುಗಳನ್ನು ನೀಡುತ್ತದೆ.
ಈ ಮರದ ಹಣ್ಣು ಸಾಧಾರಣ ಬಲಿತಾಗ ತೊಳೆಗಳನ್ನು ಸೀಳಿ ಉಪ್ಪುನೀರಿನಲ್ಲಿ ಅದ್ದಿ ಕುದಿಯುವ ಎಣ್ಣೆಗೆ ಹಾಕಿ ಕರಿದರೆ ಗರಿಗರಿಯಾದ ಚಿಪ್ಸ್ ಸಿದ್ಧವಾಗುತ್ತದೆ. ಇದರ ಚಿಪ್ಸ್ನ್ನು ತಿಂದವರೂ ಇಂತಹ ಚಿಪ್ಸ್ನ್ನು ತಿಂದೇ ಇಲ್ಲ ಎನ್ನುತ್ತಾರೆ. ಅಷ್ಟೊಂದು ರುಚಿಕರ ಇದರ ಚಿಪ್ಸ್. ಹಾಗಾಗಿ ಈ ಮರದ ಹಣ್ಣು ಬಲಿತಾಗ ಜನ ಮರದ ಸುತ್ತ ಮುಗಿಬೀಳುತ್ತಾರೆ.
ಬೇಕರಿಯವರೂ ಇದರ ಹಣ್ಣುಗಳನ್ನು ಕೊಂಡು ಹೋಗುವುದುಂಟು. ಹೀಗಾಗಿ ಈ ಹಣ್ಣಿಗೆ ಬಹಳ ಬೇಡಿಕೆ. ನೀರು ಗೊಬ್ಬರವಿಲ್ಲದೆ ಫಲ ನೀಡುವ ಈ ಮರದ ಹಣ್ಣುಗಳನ್ನು ಹಣಕೊಟ್ಟು ಕೊಂಡುಕೊಳ್ಳುವವರಿದ್ದಾರೆ.