ಎಚ್.ಬಿ.ಕಿರಣ್ಕುಮಾರ್
ಸೊಪ್ಪು, ತರಕಾರಿ ಬೆಲೆ ಗಗನಕ್ಕೇರಿದೆ. ಆದರೂ ತಾಜಾ ಮತ್ತು ಶುದ್ಧ ತರಕಾರಿ ಸಿಗೋದು ಕಷ್ಟ. ತರಕಾರಿ ಬೆಳೆಯಲು ಮನೆಯ ಸುತ್ತ ಜಾಗವಿಲ್ಲ. ಇದಕ್ಕೆ ಇಲ್ಲಿದೆ ಉಪಾಯ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟೆರಸ್ ಕಿಚನ್ ಗಾರ್ಡನ್ ಎಂಬ ಸರಳ ಮಾರ್ಗೋಪಾಯ ಕಂಡುಕೊಂಡಿದೆ. ಆರ್ಸಿಸಿ ಮನೆಯ ವಿಶಾಲವಾದ, ಸಮರ್ಪಕ ಗಾಳಿ ಬೆಳಕು ಸಿಗುವ ಮೇಲ್ಚಾವಣಿ ಸದ್ಬಳಕೆ ಮಾಡಿಕೊಂಡು ಸೊಪ್ಪು, ತರಕಾರಿ ಬೆಳೆಯುವ ಮಾಸ್ಟರ್ ಪ್ಲಾನ್ ಸಿದ್ಧ ಮಾಡಿ ಪ್ರಾಯೋಗಿಕವಾಗಿ ಯೋಜನೆಯ ಸದಸ್ಯೆ ವಸಂತನಗರದ ಸುವರ್ಣಮ್ಮ ಅವರ ಮನೆಯಲ್ಲಿ ಅಳವಡಿಸಿ ಯಶಸ್ವಿಯಾಗಿದೆ.
ಪ್ಲಾಸ್ಟಿಕ್ ಚೀಲಗಳಲ್ಲಿ ಮಣ್ಣು ಅಥವಾ ನಾರಿನ ಪುಡಿ (ಕೋಕೋ ಪಿಥ್) ತುಂಬಿ ತಮಗೆ ಬೇಕಾದ ತರಕಾರಿ, ಸೊಪ್ಪು ಬೆಳೆಯಬಹುದು. ಬಟ್ಟೆ ಒಗೆದ ನೀರು, ಪಾತ್ರೆ ತೊಳೆದ ನೀರನ್ನು ಬಳಸಿ ಅದೂ ಸಂಪೂರ್ಣ ರಾಸಾಯನಿಕಮುಕ್ತ ಸಾವಯವ ತರಕಾರಿ ಬೆಳೆಯುವುದು ಇದರ ವಿಶೇಷ.
ಧರ್ಮಸ್ಥಳ ಯೋಜನೆಯ ಜಾnನ ವಿಕಾಸ ಸಮನ್ವಯಾಧಿಕಾರಿ ಅಶ್ವಿನಿ ನಮ್ಮ ಟೆರಸ್ ಮೇಲೆ ಈ ಹೊಸ ಪ್ಲಾನ್ ಅಳವಡಿಸಲು ಕೇಳಿಕೊಂಡಾಗ ಒಲ್ಲದ ಮನಸ್ಸಿನಿಂದ ಒಪ್ಪಿದೆ. ಸಂಯೋಜಕಿಯರಾದ ಪುಷ್ಪ, ವಿಜಯಕುಮಾರಿ, ಕಾರ್ಯಕರ್ತರು ಚೀಲ, ಮಣ್ಣು, ಗಿಡ ಹೊತ್ತು ತಂದು ಟೆರಸ್ ಮೇಲೆ ಹಾಕಿ ಹತ್ತದಿನೈದು ದಿನ ಆರೈಕೆ ಮಾಡಿದರು. ಸಹಜವಾಗಿ ಗಿಡ ಬೆಳೆದ ಪರಿ ನೋಡಿ ತಾವೂ ಸಹ ಆಕರ್ಷಿತರಾಗಿ ಪೋಷಣೆಗೆ ಮುಂದಾದೆವು. 30 ದಿನಗಳಲ್ಲಿ ಬಗೆ ಬಗೆಯ ತರಕಾರಿ ಬಿಟ್ಟಾಗ ಹೇಳಲಾಗದಷ್ಟು ಸಂತೋಷ ಪಟ್ಟೆವು ಎಂದು ಸುವರ್ಣಮ್ಮ ಭಾವುಕರಾಗುತ್ತಾರೆ.
ಇಡೀ ಸಂಸಾರಕ್ಕೆ ಆರ್ಥಿಕ, ಆರೋಗ್ಯ ಚೈತನ್ಯ ನೀಡುವ ಈ ಟೆರಸ್ ಕಿಚನ್ ಗಾರ್ಡನ್ ಅಳವಡಿಕೆಯಿಂದ ಸುವರ್ಣಮ್ಮ ಕುಟುಂಬ ಸಾರ್ಥಕಬಾವ ತೋರುತ್ತಿದೆ. ಇದನ್ನು ನೋಡಿಯಾದರೂ ಜನರು ತಮ್ಮ ಟೆರಸ್ ಮೇಲೂ ತರಕಾರಿ ಬೆಳೆಯಲು ಉತ್ಸುಕರಾದರೆ ಧರ್ಮಸ್ಥಳ ಯೋಜನೆಯ ಶ್ರಮ ಸಾರ್ಥಕ.
ಕೋಟ್-ತರಕಾರಿ ಬೆಲೆ ದುಬಾರಿಯಾಗಿದ್ದರಿಂದ ಅಡಿಗೆಗೆ ತರಕಾರಿ ತಂದರೆ ಸಾಕಪ್ಪ ಎನ್ನುತ್ತಿದ್ದ ನಾವು ಈಗ ಸ್ನೇಹಿತರಿಗೆ, ಹಿತೈಷಿಗಳಿಗೆ ತರಕಾರಿ ದಾನ ಮಾಡುತ್ತಿದ್ದೇವೆ. ಪ್ರತಿ ದಿನ ಹಸಿ ತರಕಾರಿ ತಿನ್ನುತ್ತಿದ್ದೇವೆ. ಮೊದಲು ಟೊಮೋಟೊ, ಬದನೆ ಹಾಕಿದ್ದ ನಾವು ಈಗ ಬೆಂಡೆ, ಬೀನ್ಸ್, ಹಿತ್ತಲವರೆ, ಪಡವಲಕಾಯಿ, ಅಲೂಗಡ್ಡೆ, ಮೂಲಂಗಿ ಹೀಗೆ ತರಹೇವಾರಿ ತರಕಾರಿ ಜೊತೆ ಸೊಪ್ಪು ಕೂಡ ಬೆಳೆಯುತ್ತಿದ್ದೇವೆ. ಅದೂ ಸಂಪೂರ್ಣ ರಾಸಾಯನಿಕಮುಕ್ತವಾಗಿ.