ಕುಮಾರ ಪೆರ್ನಾಜೆ
ಅಂಜು ಬುರುಕರಿಗೆ ಹಗ್ಗವೂ ಹಾವಾಗಿ ಕಾಣುತ್ತದೆ. ಆದರೆ ನಿಜವಾದ ಹಾವನ್ನು ಕೂಡ ಹಗ್ಗ ಹಿಡಿದಂತೆ ಸುಲಭದ ಕೆಲಸ. ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಎಂಜಿನಿಯರ್ ಶಫೀಕ್ ಬಾಲ್ಯದಿಂದಲೇ ಹಾವು ಹಿಡಿಯುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಎಂಜಿನಿಯರಿಂಗ್ ಪದವೀಧರರಾದರೂ ಹಾವು ಹಿಡಿಯುವ ಹವ್ಯಾಸವನ್ನು ಈಗಲೂ ಇಟ್ಟುಕೊಂಡಿದ್ದಾರೆ.

ಇವರು ಕಳೆದ 5 ವರ್ಷಗಳ ಅವಧಿಯಲ್ಲಿ ಕನಿಷ್ಠ 100 ಕ್ಕೂ ಹೆಚ್ಚು ವಿವಿಧ ಜಾತಿಯ ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಎಲ್ಲಾ ಹಾವುಗಳು ವಿಷಕಾರಿಗಳಲ್ಲ. ನಾಗರಹಾವು, ರಕ್ತಮಂಡಲಿ, ಕಟ್ಟದ ಹಾವು, ಪಚ್ಚೆಮಂಡಲಿ, ಹಾರುವ ಹಾವು ಇತ್ಯಾದಿಗಳು ಅಪಾಯಕಾರಿ ಎನ್ನುವ ಶಫೀಕ್ ಹಾವುಗಳನ್ನು ಕೊಲ್ಲದೆ ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡಬೇಕು ಇಲ್ಲದಿದ್ದರೆ ಅವುಗಳ ಸಂತತಿ ಅಳಿಯುವ ಭಯವಿದೆ ಎನ್ನುತ್ತಾರೆ.
ಆಸಕ್ತ ವಿದ್ಯಾರ್ಥಿಗಳಿಗೆ, ಸ್ನೇಹಿತರಿಗೆ ಹಾವುಗಳ ಕುರಿತು ಪರಿಚಯ ಮಾಡಿಸುವ ಶಫೀಕ್ ಹಾವು ಕಂಡಾಕ್ಷಣ ಹೌಹಾರಿದರೆ ಅವುಗಳಿಗೂ ಒಂದು ರೀತಿಯ ಭಯವಾಗಿ ಅದು ನಮ್ಮೆಡೆಗೆ ಸರಿದು ಕಚ್ಚುವ ಭಯವಿದೆ. ಆದ ಕಾರಣ ಉರಗಗಳ ಕುರಿತು ಭಯ ಸಲ್ಲದು. ಅವು ಕೂಡ ನಮ್ಮ ಹಾಗೆ ಜೀವಿಸುವ ಹಕ್ಕು ಹೊಂದಿವೆ. ಖಂಡಿತವಾಗಿಯು ಕೂಡ ಯಾವುದೇ ವಿಷಕಾರಿ ಹಾವನ್ನು ಕೊಲ್ಲುವುದು ತಪ್ಪು ಎಂದು ಶಫೀಕ್ ಅಭಿಪ್ರಾಯ ಪಡುತ್ತಾರೆ.