ಜನಹಿತ ಚಿಂತಕ
ಹರಿಹರಪಳ್ಳತ್ತಡ್ಕ-ಬಾಳುಗೋಡು ನಡುವಿನ ಡಾಮರು ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ.
ಈ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು, ಸರಕಾರಿ ಬಸ್ಗಳು, ಬೈಕ್, ಜೀಪುಗಳು ಡಾಮರು ಎದ್ದುಹೋದ ಹೊಂಡ-ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಎದ್ದುಬಿದ್ದು ಸಂಚರಿಸುತ್ತಿವೆ.
ಡಾಮರು ರಸ್ತೆ ಎಂದು ಇಲಾಖೆಯ ಕಡತದಲ್ಲಿದ್ದರೂ ಡಾಮರು ಮಾತ್ರ ಎದ್ದು ಹೋಗಿ ಹೊಂಡಗಳೇ ಅಧಿಕವಾಗಿವೆ. ನಡೆದಾಡಲೂ ಕಷ್ಟವಾದ ಗ್ರಾಮೀಣಭಾಗದ ರಸ್ತೆ ಇದಾಗಿದೆ.
ಮರು ಡಾಮರೀಕರಣ ಅಸಾಧ್ಯವಾದರೆ, ಕೊನೆಗೆ ಹೊಂಡಗಳನ್ನು ಮುಚ್ಚಿ ಸಂಚಾರ ಯೋಗ್ಯ ರಸ್ತೆಯನ್ನಾಗಿ ಪರಿವರ್ತಿಸಿ ಎಂಬುದು ಈ ಮಾರ್ಗದಲ್ಲಿ ಸಂಚರಿಸುವ ಗ್ರಾಮಸ್ಥರ ಬೇಡಿಕೆ.
ಗ್ರಾಮೀಣಪ್ರದೇಶಗಳ ರಸ್ತೆ, ಕುಡಿಯುವ ನೀರು, ವಿದ್ಯುತ್ ಮೊದಲಾದ ಮೂಲಭೂತ ಸೌಲಭ್ಯಗಳಿಗೆ ಪ್ರಥಮ ಆದ್ಯತೆ ನೀಡುತ್ತೇವೆ ಎನ್ನುವ ಜನಪ್ರತಿನಿಧಿಗಳೇ, ಇಲಾಖೆಯವರೇ ಒಮ್ಮೆ ಈ ರಸ್ತೆಯ ದುರವಸ್ಥೆಯನ್ನು ಕಂಡು ರಸ್ತೆಯನ್ನು ದುರಸ್ತಿಮಾಡಬಾರದೇ?