ಮರೆತು ಹೋ(ಗ)ದ ಮೈಸೂರಿನ ಪುಟಗಳನ್ನು ತಿರುವುತ್ತಾ…
Team Udayavani, Apr 25, 2021, 1:21 PM IST
ಮೈಸೂರು ಎಂಬುದು ಒಂದು ಸೋಜಿಗ ನನಗೆ. ಹುಟ್ಟಿದ ಊರು ಅಲ್ಲದಿದ್ದರು, ಬದುಕಿನ ಸಂಭ್ರಮವನ್ನು ಕಲಿಸಿಕೊಟ್ಟ ನೆಲ. ಬುದ್ಧಿ ಬೆಳೆದು, ನಾನು ಬೆಳೆಯುತ್ತಿರುವಾಗಿಂದಲೂ ಈಗಿನವರೆಗೂ ಮೈಸೂರಿಗೆ, ನನ್ನವರ ಮನೆಗೆ ಪ್ರತಿ ವರ್ಷ ಹಾಜರಿಯಿದ್ದದ್ದೆ. ಕಾಲ ಮುಂದೆ ಹೋದ ಹಾಗೆ ಮೈಸೂರು ಅಮ್ಮನ ತವರೂರಾಗಿ, ಅವಳ ಒಡಹುಟ್ಟಿದವರ ನೆಲೆಯಾಯಿತು. ಹಾಗಾಗಿ ಮೈಸೂರಿಗೆ ಪ್ರತಿ ಬಾರಿ ಕಾಲಿಡಲು ಅಜ್ಜಿ ಮನೆ ನೆಪವಾಯಿತು.
ಈ ಊರು ಇಷ್ಟವಾಗುವುದು ಅಲ್ಲಿರುವ ಶಬ್ದದೊಳಗಿನ ನಿಶ್ಯಬ್ದತೆಗೆ, ಜೀವನ ಪ್ರೀತಿಗೆ. ಮೈಸೂರಿನ ಅರಮನೆ, ಕೆ. ಆರ್.ಎಸ್ ಕಾರಂಜಿ, ಅಲ್ಲಿನ ಹಬ್ಬ, ಅದರ ಸಂಭ್ರಮ, ತಿಂಡಿಗಳು ಇವೆಲ್ಲವೂ ನನಗೆ ಪ್ರತಿಬಾರಿಯೂ ಹೊಸತಾಗೇ ಕಾಣಿಸುತ್ತದೆ.
ಈ ಸುಂದರ ಮೈಸೂರಿನ ಇತಿಹಾಸದ ಪುಟಗಳನ್ನು ತೆಗೆದಾಗ ಓದಲು ಸಿಗುವ ಅದೆಷ್ಟೋ ಅರಿಯದ ವಿಷಯಗಳಿವೆ ವಿಸ್ಮಯದ ಸಂಗತಿಗಳಿವೆ. ಇವೆಲ್ಲವನ್ನೂ ತೆರೆದಿಡುವ ಪುಸ್ತಕವೇ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರ ‘ಮರೆತು ಹೋದ ಮೈಸೂರಿನ ಪುಟಗಳು’.
ಓದಿ : ಮೂಲ ಕಸ್ಟಮ್ಸ್ ಸುಂಕ-ಆರೋಗ್ಯ ಸೆಸ್ ಮನ್ನಾ ಸ್ವಾಗತಾರ್ಹ: ಜೋಶಿ
ಮೈಸೂರು ಮಹಾರಾಜರ ವಂಶಾವಳಿಯಿಂದ ಹಿಡಿದು, ರಾಜನಿಷ್ಠೆಯವರೆಗೆ ಇತಿಹಾಸದ ಸುಮಾರು 50 ಸಂಗತಿಗಳನ್ನು, ವಿಚಾರಗಳನ್ನು ಈ ಪುಸ್ತಕ ತೆರೆದಿಡುತ್ತದೆ.
ಮೈಸೂರಿನ ಗುರುತಾದ ಮೈಸೂರು ಪಾಕ್ ನ ಹುಟ್ಟು, ಜೋರು ಮಳೆಯ ಚಳಿ ಹುಟ್ಟಿಸುವ ಸಮಯದಲ್ಲಿ ನಾಲಿಗೆ ಬಯಸುವ ಹುರುಳಿ ಕಟ್ಟಿನ ಸಾರು ಮಹರಾಜರಿಗೆ ರುಚಿ ಹಿಡಿಸಿದ್ದು, ಮಹಾರಾಜರ ವಂಶಕ್ಕೆ ಶಾಪ ನೀಡಿ ಕಾವೇರಿಯಲ್ಲಿ ವಿಲೀನಳಾದ ಅಲಮೇಲಮ್ಮನ ಕಥೆ, ನಾಲ್ವಡಿ ಕೃಷ್ಣರಾಜರ ಸಂಗೀತ ವಿದ್ವತ್ತ್, ಶಿವಮೊಗ್ಗದ ಮೆಗಾನ್ ಆಸ್ಪತ್ರೆ, ಬೆಂಗಳೂರಿನ ಲಾಲ್ ಬಾಗ್, ಮೈಸೂರಿನ ಜಗನ್ಮೋಹನ ಪ್ಯಾಲೇಸ್ ಹೆಸರುಗಳ ನಾಂದಿಯ ಹಿಂದಿನ ಕಾರಣವನ್ನು ಈ ಕೃತಿ ಎಳೆಎಳೆಯಾಗಿ ತಿಳಿಸುತ್ತದೆ.
ಇವೆಲ್ಲದರ ಜೊತೆಗೆ ವೀಣೆಯ ಬೆಡಗಾದ ಮೈಸೂರಿನ ಸಯ್ಯಾಜಿ ರಾವ್ ರಸ್ತೆ, ಅಲ್ಲಿನ ಅರಮನೆ ಬ್ಯಾಂಡ್ ನ ನಾದ ದಿಲ್ಲಿಯವರೆಗೂ ಕೇಳಿಸಿದ್ದು, ಝಾನ್ಸೀ ರಾಣಿಗೆ ಸಹಾಯ ಹಸ್ತ ಚಾಚಿದ್ದು, ಮೈಸೂರಿನಲ್ಲಿ ಎದ್ದು ನಿಂದಿರುವ ಅಂಚೆ ಬಸಪ್ಪ, ಜೇಮ್ಸ್ ಗೋರ್ಡಾನ್ ಹಾಗೂ ದೊಡ್ಡ – ಚಿಕ್ಕ ಗಡಿಯಾರದ ನಡುವೆ ಇರುವ ಅಪ್ಪ – ಮಗನ ನಂಟು, ಮಹಾರಾಣಿ ಕಾಲೇಜಿನ ಸ್ಥಾಪನೆಗೆ ಕಾರಣರಾದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು, ತಮ್ಮ ತೊಂಭತ್ತರ ಇಳಿ ವಯಸ್ಸಿನಲ್ಲೂ ಸರಳತೆಯನ್ನು ತೋರಿದ ಸರ್.ಎಮ್. ವಿಶ್ವೇಶ್ವರಯ್ಯನವರು ಮತ್ತು ಕೊನೆಯುಸಿರವರೆಗೂ ರಾಜನಿಷ್ಠೆ ಪಾಲಿಸಿದ ನರ್ತಕಿ.
ಇಂತಹದ್ದೇ ಸೋಜಿಗದಿಂದ ಕೂಡಿದ ಮೈಸೂರಿನ ಪುಟಗಳನ್ನು ಈ ಪುಸ್ತಕದಲ್ಲಿ ತೆರೆದಷ್ಟು ಖುಷಿ ಕೊಡುತ್ತದೆ. ಮೈಸೂರೇ ಸುಂದರ ಅದರ ಇತಿಹಾಸವೂ ಅಷ್ಟೇ ವೈಭವಯುತವಾಗಿದೆ.
ವಿಧಾತ್ರಿ ಭಟ್
ಎಸ್.ಡಿ.ಎಮ್. ಕಾಲೇಜು ಉಜಿರೆ.
ಓದಿ : ಕರ್ಫ್ಯೂ ಇದ್ದರೂ ಹುಟ್ಟುಹಬ್ಬ ಆಚರಿಸಿ ಪಟಾಕಿ ಸಿಡಿಸಿದ ಪೊಲೀಸ್ ಮಗ : 14 ಮಂದಿ ಬಂಧನ