ಸವಾಲಿನ ಸರಮಾಲೆ
Team Udayavani, Oct 14, 2019, 6:00 AM IST
ರಾಜ್ಯ ವಿಧಾನಮಂಡಲದ ಅಧಿವೇಶನ ರಜಾ ದಿನವಾದ ಎರಡನೇ ಶನಿವಾರವೂ ಸೇರಿ ಮೂರು ದಿನಗಳ ಕಾಲ ನಡೆದು ನಿರೀಕ್ಷೆಯಂತೆ ಪ್ರವಾಹ ಪರಿಹಾರವೇ ಪ್ರಮುಖವಾಗಿ ಚರ್ಚೆಯಾಗಿ ಸರಕಾರದ ಪರವಾಗಿ ಉತ್ತರವೂ ಕೊಟ್ಟು ಬಿಜೆಪಿ ಸರಕಾರ ನಿಟ್ಟುಸಿರು ಬಿಟ್ಟಿದೆ.
ಬಿಜೆಪಿ ಸರಕಾರದ ಪಾಲಿಗೆ ಮೊದಲ ಅಧಿವೇಶನ ಒಂದು ರೀತಿಯಲ್ಲಿ ಅಗ್ನಿಪರೀಕ್ಷೆಯಾಗಿತ್ತು. ಮುಖ್ಯಮಂತ್ರಿ, ಮೂವರು ಉಪ ಮುಖ್ಯಮಂತ್ರಿಗಳು ಸೇರಿದಂತೆ ಇಡೀ ಸಚಿವ ಸಂಪುಟ ತಂಡವಾಗಿ ರಕ್ಷಣಾತ್ಮಕವಾಗಿ ಅಧಿವೇಶನ ನಿಭಾಯಿಸಿತು. ಬಜೆಟ್ಗೂ ಅನುಮೋದನೆ ಪಡೆದು ನೆರೆ ಪರಿಹಾರಕ್ಕಾಗಿ ಪೂರಕ ಅಂದಾಜಿನಲ್ಲೂ ಹಣ ಹೊಂದಾಣಿಕೆ ಮಾಡಿಕೊಂಡಿದೆ.
ಆದರೆ, ಇದೀಗ ಸರಕಾರದ ಮೇಲೆ ಮತ್ತೂಂದು ಮಹತ್ತರ ಜವಾಬ್ದಾರಿಯಿದೆ. ಅಧಿವೇಶನದಲ್ಲಿ ನೀಡಿರುವ ಭರವಸೆ, ವಾಗ್ಧಾನದಂತೆ ಪರಿಹಾರ ವಿತರಣೆಯಾಗಬೇಕಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಹಾಗೂ ಪುನರ್ವಸತಿ ವಿಚಾರದಲ್ಲಿ ಯಡಿಯೂರಪ್ಪ ಅವರು ಕೇಂದ್ರ ಸರಕಾರದ ನೆರವಿನ ಜತೆಗೆ ರಾಜ್ಯ ಸರಕಾರದಿಂದಲೂ ನೆರವು ಘೋಷಿಸಿ ಸ್ವಲ್ಪ ಮಟ್ಟಿಗೆ ಧಾರಾಳತನ ತೋರಿದ್ದಾರೆ. ಈಗ ಅನುಷ್ಟಾನಕ್ಕೆ ತರುವ ಕೆಲಸ ಆಗಬೇಕಾಗಿದೆ.
ಪ್ರವಾಹದಲ್ಲಿ ಮನೆ ಕಳೆದುಕೊಂಡವರಲ್ಲಿ ಒಂದೇ ಮನೆಯಲ್ಲಿ ಎರಡು ಅಥವಾ ಮೂರು ಕುಟುಂಬ ಇದ್ದರೂ ಅವರಿಗೂ ಐದು ಲಕ್ಷ ರೂ. ಪರಿಹಾರ, ಶೇ.25 ರಷ್ಟು ಹಾನಿಯಾಗಿರುವ ಮನೆಗೂ ಐದು ಲಕ್ಷ ರೂ. ಪರಿಹಾರ, ಮನೆ ಕಳೆದುಕೊಂಡವರು ಪ್ರಾರಂಭಿಕ ಗುರುತಿಸುವಿಕೆಯಲ್ಲಿ ತಪ್ಪಿ ಹೋಗಿದ್ದರೆ ಮತ್ತೆ ಸಮೀಕ್ಷೆ, ಪ್ರವಾಹದಲ್ಲಿ ಅಂಗಡಿ-ಮುಂಗಟ್ಟು ಕೊಚ್ಚಿ ಹೋಗಿದ್ದರೂ ತಲಾ 20ಸಾವಿರ ರೂ. ಪರಿಹಾರ, ಎನ್ಡಿಆರ್ಎಫ್ ನಿಯಮಾವಳಿ ಪ್ರಕಾರ ಪರಿಹಾರದ ಜತೆಗೆ ರಾಜ್ಯ ಸರಕಾರದಿಂದ ಪ್ರತಿ ಹೆಕ್ಟೇರ್ಗೆ 10 ಸಾವಿರ ರೂ. ಪರಿಹಾರ ಘೋಷಿಸಿರುವ ಯಡಿಯೂರಪ್ಪ ಅವರು ಅದಕ್ಕೆ ಹಣ ಹೊಂದಿಸಿಕೊಳ್ಳಬೇಕಾಗಿದೆ.
ಡಿಸೆಂಬರ್ ತಿಂಗಳಲ್ಲಿ ಅಥವಾ ಜನವರಿ ತಿಂಗಳಲ್ಲಿ ಮತ್ತೆ ಅಧಿವೇಶನ ಕರೆಯಬೇಕು. ಆ ವೇಳೆಗೆ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ವಿಚಾರದಲ್ಲಿ ಸರಕಾರ ಕೊಟ್ಟ ಮಾತು ಉಳಿಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಪ್ರತಿಪಕ್ಷಗಳು ಮುಂದಿನ ಅಧಿವೇಶನದಲ್ಲೂ ಇದೇ ವಿಚಾರ ಮುಂದಿಟ್ಟು ಸರಕಾರಕ್ಕೆ ತಲೆನೋವು ತರಬಹುದು.
ರಾಜ್ಯದಲ್ಲಿ ಪ್ರಸ್ತುತ ಇರುವ ಆರ್ಥಿಕ ಪರಿಸ್ಥಿತಿ ಆಶಾದಾಯಕವೇನೂ ಅಲ್ಲ. ಇದರ ನಡುವೆಯೇ ಸಂತ್ರಸ್ತರ ಪರಿಹಾರ, ಯೋಜನೆಗಳ ಜಾರಿಗೆ ಕ್ರಮ ಕೈಗೊಳ್ಳಬೇಕಾಗಿದೆ. ಆರ್ಥಿಕ ಸಂಪನ್ಮೂಲ ಕ್ರೋಢೀಕರಣವಂತೂ ಮುಂದಿನ ಆರು ತಿಂಗಳು ಕಠಿನವೇ ಆಗುವ ಮುನ್ಸೂಚನೆ ಇದೆ. ಇದನ್ನು ಸರಕಾರ ಹೇಗೆ ನಿಭಾಯಿಸಲಿದೆ ಎಂಬುದು ಕಾದು ನೋಡಬೇಕಾಗಿದೆ. ಈ ಮಧ್ಯೆ, ಅನರ್ಹತೆಗೊಂಡಿರುವ ಶಾಸಕರ ಕ್ಷೇತ್ರಗಳಲ್ಲಿ ಉಪ ಚುನಾವಣೆಯೂ ಘೋಷಣೆಯಾಗಿರುವುದರಿಂದ ಜನರ ಒಲವು ಗಳಿಸಬೇಕಿದೆ.
ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಹೊಸ ಬಜೆಟ್ ಮಂಡಿಸುವ ಉತ್ಸಾಹ ತೋರಿದ್ದ ಯಡಿಯೂರಪ್ಪ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿ ನೋಡಿ ಯಥಾಸ್ಥಿತಿ ಕಾಪಾಡಿಕೊಂಡರೆ ಸಾಕು ಎಂಬ ಜಾಣ್ಮೆ ಮೆರೆದು ಪೂರಕ ಅಂದಾಜು ಮಂಡಿಸಿ ಒಪ್ಪಿಗೆ ಪಡೆದುಕೊಂಡಿದ್ದಾರೆ.ಹೇಗೂ ಪ್ರಸಕ್ತ ಆರ್ಥಿಕ ವರ್ಷದ ಆರು ತಿಂಗಳು ಮುಗಿದಿರುವುದರಿಂದ ಮತ್ತೆ ಹೊಸ ಬಜೆಟ್ ಮಂಡಿಸಲು ಹೋಗಿಲ್ಲ. ಮುಂದಿನ ಮೂರು ತಿಂಗಳು ರಾಜ್ಯದ ಆಡಳಿತ ಯಂತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಯಾವ ರೀತಿ ಕೆಲಸ ಮಾಡಲಿದ್ದಾರೆ ಎಂಬುದು ಬಿಜೆಪಿ ಸರಕಾರದ ಸಾಧನೆಗೆ ಸಾಕ್ಷಿಯಾಗಲಿದೆ.
ಪ್ರತಿಪಕ್ಷಗಳು ಸಹ ಪ್ರವಾಹ ಪರಿಹಾರ ಹಾಗೂ ಪುನರ್ವಸತಿ ವಿಚಾರದಲ್ಲಿ ರಾಜಕೀಯಕ್ಕೆ ಅವಕಾಶ ಕೊಡದೆ ತೊಂದರೆಗೊಳಗಾದವರಿಗೆ ಪರಿಹಾರ ಸಿಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಪ್ರವಾಹ
ಪೀಡಿತ ಪ್ರದೇಶಗಳನ್ನು ಪ್ರತಿನಿಧಿಸುವ ಶಾಸಕರು, ಸಂಸದರು, ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್ ಸದಸ್ಯರು ನಿಜಕ್ಕೂ ಸಮಸ್ಯೆಗೆ ಸಿಲುಕಿರುವವರಿಗೆ ಸರಕಾರದ ನೆರವು ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತಾಗಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ
Bhuvanam gaganam Teaser: ಭುವನಂ ಗಗನಂ ಟೀಸರ್ ಬಂತು
Bharjari Gandu: ಟ್ರೇಲರ್ನಲ್ಲಿ ಭರ್ಜರಿ ಗಂಡು
Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್ನಲ್ಲಿ ಶೂಟಿಂಗ್!
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್