ಕೋವಿಡ್ಗೆ ತುತ್ತಾಗುತ್ತಿರುವ ಜನನಾಯಕರು: ಎಲ್ಲರಿಗೂ ಇದೆ ಅಪಾಯ
Team Udayavani, Sep 25, 2020, 6:05 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ದೇಶದ ಪ್ರಮುಖ ಹಾಟ್ ಸ್ಪಾಟ್ಗಳಲ್ಲಿ ಒಂದಾಗಿರುವ ಕರ್ನಾಟಕದಲ್ಲಿ ಕೋವಿಡ್ 19 ಹಾವಳಿ ನಿಲ್ಲುತ್ತಲೇ ಇಲ್ಲ.
ಜನ ಸಾಮಾನ್ಯರು, ಜನನಾಯಕರು ಈ ವೈರಸ್ಗೆ ತುತ್ತಾಗುತ್ತಲೇ ಇದ್ದಾರೆ.
ರಾಜ್ಯದಲ್ಲಿ ಒಂದು ವಾರದಲ್ಲಿ ಮೂವರು ಜನಪ್ರತಿನಿಧಿಗಳು ಕೋವಿಡ್ 19ನಿಂದ ಮೃತಪಟ್ಟಿದ್ದಾರೆ.
ಕಳೆದ ಗುರುವಾರ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ, ಸೆ. 23ರಂದು ಕೇಂದ್ರ ರೈಲ್ವೇ ಖಾತೆ ಸಹಾಯಕ ಸಚಿವ, ಬಿಜೆಪಿ ಹಿರಿಯ ನಾಯಕ ಸುರೇಶ್ ಅಂಗಡಿ ಹಾಗೂ ಸೆ.24ರಂದು ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ನಿಧನ ಹೊಂದಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ರಾಜಕಾರಣಿಗಳಲ್ಲಿ ಅನೇಕರಿಗೆ ಕೋವಿಡ್ ಸೋಂಕು ತಗಲಿದೆ. ಮುಖ್ಯಮಂತ್ರಿ ಸೇರಿದಂತೆ ಅನೇಕ ರಾಜಕಾರಣಿಗಳು ಈಗ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು ಏರಿಕೆಯಾಗುತ್ತಿರುವ ಹೊತ್ತಲ್ಲೇ, ಚೇತರಿಕೆಯ ಪ್ರಮಾಣದಲ್ಲೂ ಉತ್ತಮ ಬೆಳವಣಿಗೆ ಕಂಡುಬರುತ್ತಿದೆ.
ಅನ್ಯ ರೋಗಗಳಿಗೆ ಹೋಲಿಸಿದರೆ ಕೋವಿಡ್ ಮರಣ ದರ ಕಡಿಮೆಯಿದೆ ಎನ್ನುವುದೇನೋ ಸತ್ಯವೇ, ಆದರೆ ಪ್ರತಿ ಜೀವವೂ ಅಮೂಲ್ಯವಾಗಿರುವುದರಿಂದಾಗಿ ಜನಸಾಮಾನ್ಯರಾಗಿರಲಿ, ರಾಜಕಾರಣಿಯಾಗಿರಲಿ ಒಂದೊಂದು ಸಾವೂ ಕೂಡ ಸಂಬಂಧಿಕರಿಗೆ, ಮನೆಯವರಿಗೆ, ಬೆಂಬಲಿಗರಿಗೆ ಅಪರಿಮಿತ ಯಾತನೆಯನ್ನು ಕೊಡುವಂಥದ್ದು.
ಅತ್ಯುತ್ತಮ ಆರೋಗ್ಯ ಸೇವೆ ಪಡೆಯುವ ಜನನಾಯಕರಿಗೇ ಹೀಗೆ ಆಗುತ್ತಿರುವಾಗ, ಜನಸಾಮಾನ್ಯರ ಪಾಡೇನು ಎನ್ನುವ ಪ್ರಶ್ನೆ ಎದುರಾಗುತ್ತಿದೆ. ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಾದ ಅಂಶವೆಂದರೆ ಕೋವಿಡ್ 19ನ ಗುಣಲಕ್ಷಣಗಳು ಅದು ಮಾಡಬಹುದಾದ ಹಾನಿಯ ಬಗ್ಗೆ ಈಗಲೂ ವಿಜ್ಞಾನ ವಲಯದಲ್ಲಿ ಒಂದು ಸ್ಪಷ್ಟತೆ ಮೂಡಿಲ್ಲ, ಅದಕ್ಕೆ ಲಸಿಕೆಯೂ ಸಿದ್ಧವಾಗಿಲ್ಲ, ನಿರ್ದಿಷ್ಟ ಚಿಕಿತ್ಸಾ ವಿಧಾನಗಳೂ ಅದಕ್ಕೆ ಇಲ್ಲ. ಹೀಗಾಗಿ, ಅಪಾಯ ಎಲ್ಲರಿಗೂ ಇದ್ದೇ ಇದೆ. ಜನಸಾಮಾನ್ಯರಿಗಂತೂ ತುಸು ಹೆಚ್ಚೇ ಸವಾಲುಗಳು (ಚಿಕಿತ್ಸೆಯ ವೆಚ್ಚ ಸೇರಿದಂತೆ) ಇರುತ್ತವೆ.
ಚೇತರಿಕೆ ಕಂಡವರು ಹಠಾತ್ತನೆ ಅಸ್ವಸ್ಥರಾಗುವುದು, ಪದೆಪದೆ ಜ್ವರಕ್ಕೆ ಈಡಾಗುವಂಥ ಉದಾಹರಣೆಗಳು ಸಾಕಷ್ಟು ವರದಿಯಾಗುತ್ತಿವೆ. ಹೃದ್ರೋಗ, ಶ್ವಾಸಕೋಶ, ಸಕ್ಕರೆ ಕಾಯಿಲೆಯಂಥ ಸಮಸ್ಯೆಯಿಂದ ಬಳಲುತ್ತಿರುವವರಿಗೆ, ವಯೋವೃದ್ಧರಿಗೆ ಈ ವೈರಾಣು ಮರಣಾಂತಕವಾಗಿ ಪರಿಣಮಿಸುತ್ತಿದೆ.
ಚೇತರಿಕೆಯಾದರೂ ಅನೇಕರಲ್ಲಿ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂದು ಅಧ್ಯಯನ ವರದಿಗಳು ಹೇಳುತ್ತಿವೆ. ದುರಂತವೆಂದರೆ, ಇಷ್ಟೆಲ್ಲ ಆಗುತ್ತಿದ್ದರೂ ಈ ರೋಗದ ಕುರಿತು ಭಾರತಾದ್ಯಂತ ಒಂದು ರೀತಿಯ ಅಸಡ್ಡೆಯ ಮನೋಭಾವ ಹೆಚ್ಚಾಗಿರುವುದು ಕಂಡುಬರುತ್ತಿದೆ.
ಇದು ಒಂದು ವಾರದ ಜ್ವರವಷ್ಟೇ, ಏನೂ ಆಗಲ್ಲ ಎನ್ನುವ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿವೆ. ಈ ಕಾರಣಕ್ಕಾಗಿಯೇ, ಲಕ್ಷಣಗಳು ಕಾಣಿಸಿಕೊಂಡರೂ ಅನೇಕರು ಪರೀಕ್ಷೆಗಳನ್ನೇ ಮಾಡಿಸಿಕೊಳ್ಳುತ್ತಿಲ್ಲ. ಪರೀಕ್ಷೆ ಮಾಡಿಸಿಕೊಳ್ಳದೆ ದಿನಗಳನ್ನು ದೂಡುವುದರಿಂದ, ರೋಗ ಉಲ್ಬಣಿಸುವ ಸಾಧ್ಯತೆ ಅಧಿಕವಿರುತ್ತದೆ. ನೆನಪಿರಲಿ, ನೀವು ಆರೋಗ್ಯವಂತರಾಗಿರಬಹುದು, ಆದರೆ ನಿಮ್ಮಿಂದ ಇತರರಿಗೆ ಸೋಂಕು ಹರಡಿ ಅದು ಅವರಿಗೆ ಮರಣಾಂತಕವಾಗಬಲ್ಲದು.
ಬಹುಶಃ ಮಾಧ್ಯಮಗಳಲ್ಲಿ ಈ ಕುರಿತು ಮೊದಲಿನಷ್ಟು ವರದಿಯಾಗದೆ ಇರುವುದು, ಚೇತರಿಕೆಯ ಪ್ರಮಾಣದಲ್ಲಿ ಹೆಚ್ಚಳ ಕಾಣಿಸಿಕೊಳ್ಳುತ್ತಿರುವುದರಿಂದಾಗಿ ಅಪಾಯವೇ ದೂರವಾಗಿಬಿಟ್ಟಿದೆ ಎಂಬಂಥ ಮನಃಸ್ಥಿತಿ ಹುಟ್ಟಿಕೊಂಡಿರಬಹುದು.
ಸಾಂಕ್ರಾಮಿಕಗಳು ಜನಸಾಮಾನ್ಯರು ಹಾಗೂ ಜನನಾಯಕರು ಎಂದು ಭೇದಭಾವ ಮಾಡುವುದಿಲ್ಲ. ಎಲ್ಲರೂ ಈಗ ಅಪಾಯವನ್ನು ಎದುರಿಸುತ್ತಿದ್ದಾರೆ. ಎಲ್ಲರೂ ಸುರಕ್ಷತ ಕ್ರಮಗಳನ್ನು ಅಸಡ್ಡೆಯಿಂದ ನೋಡದೆ ಸಾಮಾಜಿಕ ಅಂತರ ಹಾಗೂ ಸ್ವಚ್ಛತೆ ಪಾಲನೆಗೆ, ಮಾಸ್ಕ್ ಧರಿಸುವಿಕೆಗೆ, ಜ್ವರ ಕಾಣಿಸಿಕೊಂಡರೆ ತ್ವರಿತವಾಗಿ ಪರೀಕ್ಷೆಗಳಿಗೆ ಮುಂದಾಗುವುದು ಬಹಳ ಮುಖ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?