ಉದ್ಯೋಗಿಗಳಲ್ಲಿ ಆತಂಕ ಕಂಪೆನಿಗಳು ಎಚ್ಚರಿಕೆ ವಹಿಸಲಿ
Team Udayavani, May 11, 2020, 5:42 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋವಿಡ್ ಸಾಂಕ್ರಾಮಿಕದ ಹಾವಳಿ ದಿನೇ ದಿನೇ ಹೆಚ್ಚುತ್ತಾ ವಿಶ್ವಾದ್ಯಂತ ಸಾವು ನೋವಿನ ಸಂಖ್ಯೆ ಅಧಿಕವಾಗುತ್ತಲೇ ಇದೆ.
ಇಟಲಿ, ಬ್ರಿಟನ್, ಅಮೆರಿಕದಂಥ ರಾಷ್ಟ್ರಗಳಲ್ಲಿ ಈ ವೈರಸ್ ಮಾರಣ ಹೋಮ ನಡೆಸಿದೆ. ಅತ್ಯುತ್ತಮ ಆರೋಗ್ಯ ವ್ಯವಸ್ಥೆಯ ಹೊರತಾಗಿಯೂ ಆ ದೇಶಗಳು ಕುಸಿದು ಕುಳಿತಿವೆ.
ಭಾರತದಲ್ಲೂ ಸೋಂಕಿತರ ಸಂಖ್ಯೆ ವೃದ್ಧಿಸುತ್ತಲೇ ಇದೆ. ಜೂನ್-ಜುಲೈ ತಿಂಗಳಲ್ಲಿ ಸೋಂಕಿತರ ಹಾಗೂ ಮೃತ ಪಟ್ಟವರ ಪ್ರಮಾಣ ಬಹಳ ಹೆಚ್ಚಲಿದೆ ಎಂದು ಪರಿಣತರು ಎಚ್ಚರಿಸುತ್ತಿದ್ದಾರೆ.
ಈ ಎಲ್ಲಾ ಸಂಗತಿಗಳನ್ನು, ಸುದ್ದಿಗಳನ್ನು ಅರಿತಿರುವ ಜನಸಾಮಾನ್ಯರಲ್ಲಿ ಸಹಜವಾಗಿಯೇ ಆತಂಕ ಮಡುಗಟ್ಟಿದೆ. ಅನೇಕರಿಗೆ ತಾವೆಲ್ಲಿ ಸೋಂಕಿತರಾಗುತ್ತೀವೋ ಎನ್ನುವುದಕ್ಕಿಂತ ತಮ್ಮಿಂದಾಗಿ ಎಲ್ಲಿ ಮನೆಯವರಿಗೆ ಸೋಂಕು ತಗುಲುತ್ತದೋ ಎಂಬ ಭಯ ಅಧಿಕವಿರುತ್ತದೆ. ಅದರಲ್ಲೂ ವೃದ್ಧರು ಇರುವ ಕುಟುಂಬಗಳಲ್ಲಿ ಈ ಆತಂಕ ಸಹಜ. ಈ ಕಾರಣಕ್ಕಾಗಿಯೇ, ಅನೇಕ ಉದ್ಯೋಗಸ್ಥರೀಗ ಪುನಃ ಕಚೇರಿಗೆ ತೆರಳುವ ವಿಚಾರದಲ್ಲಿ ಕಳವಳಗೊಂಡಿದ್ದಾರೆ.
ಲಾಕ್ಡೌನ್ ನಿಯಮಗಳಲ್ಲಿ ಸಡಿಲಿಕೆ ತಂದ ನಂತರದಿಂದ ಖಾಸಗಿ ಕಂಪೆನಿಗಳ ಉದ್ಯೋಗಿಗಳೂ ಆಫೀಸ್ಗೆ ತೆರಳಲಾರಂಭಿಸಿದ್ದಾರೆ. ಖಾಸಗಿ ಕಂಪೆನಿಗಳ ಉದ್ಯೋಗಿಗಳಲ್ಲಿ ನಡೆಸಲಾದ ಸಮೀಕ್ಷೆಯೊಂದರಲ್ಲಿ 93 ಪ್ರತಿಶತ ಜನರು ತಮಗೆ ಆಫೀಸ್ಗೆ ಹೋಗುವ ವಿಚಾರದಲ್ಲಿ ಬಹಳ ಆತಂಕವಿರುವುದಾಗಿ ಹೇಳಿದ್ದಾರೆ.
ಕಾರ್ಯಸ್ಥಳದಲ್ಲಿ ತಮ್ಮ ಸ್ವಾಸ್ಥ್ಯ ಸುರಕ್ಷತೆಯ ಬಗ್ಗೆ ಕಂಪೆನಿಗಳು ಕಾಳಜಿ ಮಾಡುತ್ತವೋ ಇಲ್ಲವೋ ಎನ್ನುವುದು ಈ ಆತಂಕಕ್ಕೆ ಮೂಲ ಕಾರಣ. ಮೈಂಡ್ಮ್ಯಾಪ್ ಅಡ್ವಾನ್ಸ್ ಎಂಬ ಸಂಸ್ಥೆಯು ದಿಲ್ಲಿ, ಮುಂಬೈ ಮತ್ತು ಬೆಂಗಳೂರಿನ 560 ಚಿಕ್ಕ, ಮಧ್ಯಮ ಹಾಗೂ ದೊಡ್ಡ ಉದ್ಯಮಗಳಲ್ಲಿ ಈ ಸಮೀಕ್ಷೆ ನಡೆಸಿದ್ದು, ಇದರಲ್ಲಿ 85 ಪ್ರತಿಶತ ಪುರುಷರು ಹಾಗೂ 15 ಪ್ರತಿಶತ ಮಹಿಳೆಯರು ಪಾಲ್ಗೊಂಡಿದ್ದರು. ನಿತ್ಯವೂ ಕಚೇರಿಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡುವುದು ಸಾಧ್ಯವೇ ಎನ್ನುವ ಪ್ರಶ್ನೆಯನ್ನು ಅವರು ಕೇಳುತ್ತಿದ್ದಾರೆ.
ಕೆಲ ದಿನಗಳಿಂದ ಲಾಕ್ಡೌನ್ನ ಹೊರತಾಗಿಯೂ ವಿವಿಧ ರೀತಿಯ ಉದ್ಯೋಗಗಳಿಗೆ, ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿರುವುದರಿಂದ, ಮೇ 17ರ ಗಡುವು ಮುಗಿದ ನಂತರ, ಲಾಕ್ಡೌನ್ ಅನ್ನು ಮುಂದುವರಿಸಲಾಗುವುದೋ ಇಲ್ಲವೋ ಎಂಬ ಅನುಮಾನ ಹೆಚ್ಚಿದೆ. ಲಾಕ್ಡೌನ್ ಮುಂದುವರಿಸಿದರೂ ಕೂಡ ಇನ್ನೂ ಅನೇಕ ಕ್ಷೇತ್ರಗಳು ಕಾರ್ಯಾರಂಭಿಸಬಹುದು.
ಆದರೂ, ಲಾಕ್ಡೌನ್ಗೂ ಒಂದು ಮಿತಿಯಿರಲೇಬೇಕು ಮತ್ತು ಸಾಮಾಜಿಕ -ಆರ್ಥಿಕ ಚಟುವಟಿಕೆಗಳನ್ನು ಹೆಚ್ಚು ಸಮಯ ನಿಲ್ಲಿಸುವುದಕ್ಕೆ ಆಗುವುದಿಲ್ಲ. ಹೀಗಾಗಿ, ಕಂಪೆನಿ ಹಾಗೂ ಕಾರ್ಖಾನೆಗಳನ್ನು ತೆರೆಯಲೇಬೇಕಾಗುತ್ತದೆ.
ನಮ್ಮ ಮುಂದಿರುವ ಮಾರ್ಗವೆಂದರೆ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು. ಚಾಚೂತಪ್ಪದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಹಾಗೂ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು ಅತ್ಯಂತ ಪರಿಣಾಮಕಾರಿ ಮಾರ್ಗ ಎನ್ನುವುದು ಸಾಬೀತಾಗಿದೆ.
ಏನೇ ಇದ್ದರೂ, ಉದ್ಯೋಗಿಗಳ ಆತಂಕವನ್ನು ನಿವಾರಿಸುವ ಕೆಲಸವನ್ನು ಕಂಪೆನಿಗಳು ಮಾಡಬೇಕಿದೆ. ತಾವು ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ, ಕಚೇರಿಯಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಪೂರ್ಣ ಮಾಹಿತಿಯನ್ನು ಉದ್ಯೋಗಿಗಳಿಗೆ ಒದಗಿಸುವಂತಾಗಬೇಕು ಹಾಗೂ ಅಸಡ್ಡೆ ಮಾಡದೇ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’