ಲಸಿಕೆ ನೋಂದಣಿ ಪ್ರಕ್ರಿಯೆ ಸರಳೀಕರಣವಾಗಬೇಕು
Team Udayavani, Mar 5, 2021, 6:50 AM IST
ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆ ನೀಡಿಕೆ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಕಳೆದ ನಾಲ್ಕು ದಿನಗ ಳಿಂದ ಹಿರಿಯ ನಾಗರಿಕರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಮೊದಲ ದಿನ 2,000ದಷ್ಟು ಮಂದಿ ಭಾಗವಹಿಸಿದ್ದರೆ, ಗುರುವಾರ ನಾಲ್ಕನೇ ದಿನ 11,000 ಮಂದಿಯಷ್ಟು ನಾಗರಿಕರು ಲಸಿಕೆ ಸ್ವೀಕರಿಸಿರುವುದು ಅವರಲ್ಲಿನ ಉತ್ಸಾಹದ ಪ್ರತೀಕ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಸ್ವೀಕರಿಸದೆ ಇಡೀ ಪ್ರಕ್ರಿಯೆ ಬಗ್ಗೆ ಆತಂಕಕ್ಕೆ ಕಾರಣವಾಗಿದ್ದರು. ಸರಕಾರ ಹಾಗೂ ಆಡಳಿತ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರೂ ಆರೋಗ್ಯ ಕಾರ್ಯಕರ್ತರು ನಿರಾಶದಾಯಕ ಪ್ರತಿಕ್ರಿಯೆ ನೀಡಿದ್ದರು. ಆದರೆ ಹಿರಿಯ ನಾಗರಿಕರು ಸಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಆದರೆ 45 ವರ್ಷ ವಯೋಮಿತಿಯ ಇತರ ಆರೋಗ್ಯ ಸಮಸ್ಯೆಗಳುಳ್ಳ ಮಂದಿ ಲಸಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವ ಪ್ರಮಾಣ ಕುಂಠಿತವಾಗಿದ್ದು, ಈ ಬಗ್ಗೆ ವಿಶ್ಲೇಷಿಸಬೇಕಾಗಿದೆ. ರಾಷ್ಟ್ರಪತಿ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವು ಗಣ್ಯರು ಲಸಿಕೆ ಪಡೆದುಕೊಳ್ಳುವ ಮೂಲಕ ಇಡೀ ಸಮಾಜಕ್ಕೆ ಹೊಸ ಭರವಸೆ ಮೂಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಲಸಿಕೆ ಪ್ರಕ್ರಿಯೆಯಲ್ಲಿ ಕಾಣಿಸುತ್ತಿರುವ ಹಲವು ಸಮಸ್ಯೆ ಗಳನ್ನು ಕೂಡಲೇ ಬಗೆಹರಿಸಬೇಕಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ಸಾಕಷ್ಟು ವ್ಯತ್ಯಯಗಳಾಗುತ್ತಿರುವುದು ಎದ್ದು ಕಾಣುತ್ತಿದೆ. ಸರ್ವರ್ ಸಮಸ್ಯೆಯಿಂದ ನೋಂದಣಿ ಪ್ರಕ್ರಿಯೆ ಸುಲಲಿತವಾಗಿಲ್ಲ ಎಂಬ ದೂರಿದೆ. ಈ ನಿಟ್ಟಿನಲ್ಲಿ ತಾಂತ್ರಿಕ ಸಮಸ್ಯೆಯನ್ನು ಆದಷ್ಟು ಶೀಘ್ರ ಪರಿಹರಿಸಬೇಕಿದೆ. ಈಗಾಗಲೇ ದಿನದ 24 ಗಂಟೆಯೂ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ದೊರೆತಿರುವುದು ಅನುಕೂಲಕರವೇ. ಆದರೆ ನೋಂದಣಿ ಸಹ ನಿರಾಯಾಸವಾಗಿ ದಿನದ 24 ಗಂಟೆಯೂ ಆಗುವಂತಿದ್ದರೆ ಹಿರಿಯ ನಾಗರಿಕರು ಆಸ್ಪತ್ರೆಯಲ್ಲಿ ಅಲೆದಾಡುವುದು ತಪ್ಪುತ್ತದೆ. ಹಲವು ಆಸ್ಪತ್ರೆಗಳಲ್ಲಿ ಲಸಿಕೆ ಪಡೆದುಕೊಳ್ಳುವುದಕ್ಕಿಂತ ನೋಂದಣಿಗೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಇದನ್ನು ತಪ್ಪಿಸಬೇಕಾದರೆ ಪ್ರತೀ ಆಸ್ಪತ್ರೆಯಲ್ಲೂ ನಾಲ್ಕರಿಂದ ಐದು ಕೌಂಟರ್ಗಳನ್ನು ತೆರೆಯಬೇಕು.
ಬಹುತೇಕ ಹಿರಿಯ ನಾಗರಿಕರಿಗೆ ಸ್ವಂತ ಮೊಬೈಲ್ ನಂಬರ್, ಹ್ಯಾಂಡ್ಸೆಟ್ಗಳಿರುವುದಿಲ್ಲ ಎನ್ನುವುದು ಲಸಿಕಾ ಕೇಂದ್ರಗಳಲ್ಲಿ ದಿನವೂ ಕಂಡುಬರುತ್ತಿರುವ ಚಿತ್ರಣ. ಅವರು ಮನೆಮಂದಿಯ ಮೊಬೈಲನ್ನು ಆಶ್ರಯಿಸಬೇಕಾಗಿದೆ. ಮನೆಮಂದಿ ರಜೆ ಹಾಕಿ ಆಸ್ಪತ್ರೆಗೆ ಬಂದರೆ ಬರೆ ನೋಂದಣಿಗಾಗಿಯೇ ದಿನಕಳೆದ ಉದಾಹರಣೆಗಳಿವೆ. ಹೀಗಾಗಿ ಅಂಚೆ ಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್ನಂಥ ಕೇಂದ್ರಗಳಲ್ಲೂ ನೋಂದಣಿ ಆರಂಭಿಸಿದರೆ ಉತ್ತಮ. ಈಗಾಗಲೇ ಜಿಲ್ಲಾ, ತಾಲೂಕು ಆರೋಗ್ಯ ಕೇಂದ್ರಗಳಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೂ ವಿಸ್ತರಿಸಿದರೆ ಗ್ರಾಮೀಣ ಭಾಗದ ಹಿರಿಯ ನಾಗರಿಕರಿಗೆ ಅನುಕೂಲವಾಗುತ್ತದೆ.
ಇತರ ಆರೋಗ್ಯ ಸಮಸ್ಯೆ ಇರುವ ನಾಗರಿಕರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಯೋಚನೆಗೀಡು ಮಾಡುವ ವಿಷಯ. ಇಲ್ಲಿ ಹಲವರಿಗೆ ಯಾವ ಆರೋಗ್ಯ ಸಮಸ್ಯೆ ಇದ್ದವರು ಲಸಿಕೆ ಪಡೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಜಾಗೃ ತಿ ಮೂಡಿಸ ಬೇಕು ಹಾಗೂ ಅನಾರೋಗ್ಯ ದೃಢೀಕರಣ ಪತ್ರದ ನೀಡಿಕೆಯನ್ನು ಸರಳೀಕರಣಗೊಳಿಸಬೇಕಾಗಿದೆ.