ಚೀನ ಬಗ್ಗೆ ಎಚ್ಚರಿಕೆಯಿರಲಿ
Team Udayavani, Jun 9, 2020, 5:40 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭಾರತೀಯ ಪ್ರದೇಶಗಳಲ್ಲಿ ಚೀನ ಸೈನಿಕರ ಒಳನುಸುಳುವಿಕೆ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಆದರೆ ಕಳೆದೊಂದು ತಿಂಗಳಿಂದ ಚೀನಿ ಸೈನಿಕರ ವರ್ತನೆಯನ್ನು ನೋಡಿ ಇಡೀ ಜಗತ್ತು ಅಸಹ್ಯ ಪಡುತ್ತಿದೆ.
ಕಳೆದೊಂದು ತಿಂಗಳಿಂದ ಪೂರ್ವ ಲಡಾಖ್ ಪ್ರಾಂತ್ಯಗಳ ಬಳಿ ಚೀನಿ ಸೇನೆ ತೋರುತ್ತಾ ಬಂದ ಆಕ್ರಮಣಕಾರಿ ವರ್ತನೆ ಒಂದು ಹಂತಕ್ಕೆ ಶಾಂತವಾಗುವ ಲಕ್ಷಣಗಳು ಗೋಚರಿಸಿವೆ.
ಚೀನ ಮತ್ತು ಭಾರತೀಯ ಮಿಲಿಟರಿಯ ಉನ್ನತಾಧಿಕಾರಿಗಳ ನಡುವೆ ಶನಿವಾರ ಮಾತುಕತೆಯಾಗಿರುವುದು ಈ ಬೆಳವಣಿಗೆಗೆ ಕಾರಣ.
ಹಾಗೆಂದು, ಚೀನ ನಿಜಕ್ಕೂ ಶಾಂತವಾಗಿಬಿಡುತ್ತದೆ ಎಂದು ನಾವು ನಿರೀಕ್ಷಿಸುವಂತಿಲ್ಲ. ತನ್ನ ನೆಲದಲ್ಲೀಗ ಅದು ಮಿಲಿಟರಿ ಚಟುವಟಿಕೆಗಳಿಗೆ ವೇಗ ಕೊಡಲಾರಂಭಿಸಿದೆ. ಭಾರತೀಯ ಪ್ರದೇಶಗಳಲ್ಲಿ ಚೀನ ಸೈನಿಕರ ಒಳನುಸುಳುವಿಕೆ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ.
ಆದರೆ ಕಳೆದೊಂದು ತಿಂಗಳಿಂದ ಚೀನಿ ಸೈನಿಕರ ವರ್ತನೆಯನ್ನು ನೋಡಿ ಇಡೀ ವಿಶ್ವ ಅಸಹ್ಯ ಪಡುತ್ತಿದೆ. ಜಗತ್ತು ಕೋವಿಡ್ ವಿರುದ್ಧ ಹೋರಾಡುವಲ್ಲಿ ನಿರತವಾಗಿರುವಾಗ ಚೀನಿಯರು ಈ ಅನಿಶ್ಚಿತತೆಯನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದು ಖಂಡನೆಗೆ ಗುರಿಯಾಗುತ್ತಿದೆ.
ಭಾರತದ ಪ್ರದೇಶಗಳಲ್ಲಿ ಬಿಕ್ಕಟ್ಟು ಸೃಷ್ಟಿಸುವುದು ಹಾಗೂ ಇದರ ಜಾಡಲ್ಲಿ ಭಾರತದ ಮೇಲೆ ಒತ್ತಡ ಹೇರುವುದು ಚೀನದ ಹಳೆಯ ರಣನೀತಿಯಾಗಿದೆ. ಆದರೆ ಈಗ ಭಾರತದ ಯಾವುದೇ ಪ್ರದೇಶವನ್ನೂ ಕೈವಶ ಮಾಡಿಕೊಳ್ಳುವುದು ಸುಲಭವಲ್ಲ ಎನ್ನುವುದನ್ನು ಚೀನಿ ಆಡಳಿತ ಹಾಗೂ ಸೇನೆ ಸ್ಪಷ್ಟವಾಗಿ ಅರಿತಿವೆ. ಭಾರತವೀಗ 1962ರ ದೇಶವಾಗಿ ಉಳಿದಿಲ್ಲ.
ಸತ್ಯವೇನೆಂದರೆ, ಈ ಬಾರಿ ಚೀನದ ದುರ್ವರ್ತನೆಯ ಹಿಂದೆ ಅನ್ಯ ಕಾರಣವೂ ಇದೆ. ಭಾರತವು ಗಡಿ ಭಾಗದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿರು ವುದು ಚೀನದ ನಿದ್ದೆಗೆಡಿಸಿದೆ. ಪ್ಯಾಂಗಾಂಗ್ ತ್ಸೋ ಲೇಕ್ ಸನಿಹದ ಪ್ರದೇಶದಲ್ಲಿ ಭಾರತವು ರಣಾಂಗಣ ದೃಷ್ಟಿಯಿಂದ ಮಹತ್ವ ಪೂರ್ಣ ರಸ್ತೆಯನ್ನು ನಿರ್ಮಿ ಸಿರುವುದು ಚೀನವನ್ನು ಹೆಚ್ಚು ಕಾಡುತ್ತಿರುವ ವಿಷಯ. ಇನ್ನು ಗಲವಾನ್ ಕಣಿವೆಯಲ್ಲಿ ಭಾರತ ನಿರ್ಮಿಸುತ್ತಿರುವ ರಸ್ತೆಯ ಬಗ್ಗೆಯೂ ಚೀನ ಅಪಸ್ವರವೆತ್ತುತ್ತಿದೆ.
ನಿಸ್ಸಂದೇಹವಾಗಿಯೂ ಭಾರತ ನಿರ್ಮಿಸುತ್ತಿರುವ ರಸ್ತೆಯ ಇಂಚಿಂಚೂ ಕೂಡ ಚೀನಕ್ಕೆ ಬೆಟ್ಟದಷ್ಟು ಚಿಂತೆ ಹೆಚ್ಚಿಸುತ್ತಲೇ ಇದೆ. ಗಲವಾನ್ ಕಣಿವೆಯಲ್ಲಿ ಭಾರತೀಯ ಸೈನ್ಯದ ಉಪಸ್ಥಿತಿಯು ಹೆಚ್ಚಾದರೆ, ಚೀನಿ ಸೈನಿಕರ ಚಲನವಲನಗಳ ಮೇಲೆ ಹದ್ದಿನಗಣ್ಣಿಡಲು ಸುಲಭವಾಗುತ್ತದೆ. ಚೀನ ಎಷ್ಟೇ ಅಸಮಾಧಾನ ವ್ಯಕ್ತಪಡಿಸಿದರೂ ಭಾರತ ತಾನಿಡುತ್ತಿರುವ ಹೆಜ್ಜೆಯಿಂದ ಹಿಂದೆ ಸರಿಯುತ್ತಿಲ್ಲ. ಈ ಕಾರಣಕ್ಕಾಗಿಯೇ, ಚೀನ ಸದ್ಯಕ್ಕೆ ಸುಮ್ಮನಾದರೂ, ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಕ್ಕಟ್ಟನ್ನಂತೂ ಸೃಷ್ಟಿಸಲಿದೆ. ಈ ಬಗ್ಗೆ ಭಾರತ ಜಾಗರೂಕತೆಯಿಂದಿರಬೇಕು.