ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಫ್ಘನ್ನರಿಗೆ ನೆರವು ಸಿಗಲಿ
Team Udayavani, Aug 14, 2021, 6:00 AM IST
ನೆರೆಯ ಆಫ್ಘಾನಿಸ್ಥಾನದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ನೆರವು ಬೇಕಾಗಿದೆ. ಈಗಾಗಲೇ ಹೆಚ್ಚು ಕಡಿಮೆ ಮೂರನೇ ಎರಡರಷ್ಟು ಭಾಗವನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಅಫ್ಘಾನಿಸ್ಥಾನದ ಎರಡನೇ ಅತ್ಯಂತ ದೊಡ್ಡ ನಗರ ಕಂದಹಾರ್ ಅನ್ನೂ ತಾಲಿಬಾನಿಯರು ತಮ್ಮ ವಶಕ್ಕೆ ಪಡೆದಿದ್ದು, ಈಗಾಗಲೇ ಕಾಬೂಲ್ ಸನಿಹಕ್ಕೆ ಬಂದಿದ್ದಾರೆ. ಇದರ ನಡುವೆಯೇ ಅಮೆರಿಕ ತನ್ನ 3,000 ಯೋಧರನ್ನು ಅಫ್ಘಾನಿಸ್ಥಾನಕ್ಕೆ ಕಳುಹಿಸಿದ್ದು, ಬಾಕಿ ಉಳಿದಿರುವ ಸಿಬಂದಿಯನ್ನು ತ್ವರಿತಗತಿಯಲ್ಲಿ ವಾಪಸ್ ಕರೆಸಿಕೊಳ್ಳುತ್ತಿದೆ.
ಸದ್ಯ ಕಾಬೂಲ್ನಿಂದ 50 ಕಿ.ಮೀ. ದೂರದಲ್ಲಿರುವ ಲೋಗರ್ ಪ್ರಾಂತ್ಯದ ರಾಜಧಾನಿಯನ್ನೂ ವಶಕ್ಕೆ ಪಡೆಯಲಾಗಿದೆ. ಇದಾದ ಬಳಿಕ ರಾಜಧಾನಿ ಕಾಬೂಲ್ನತ್ತ ಉಗ್ರರು ತೆರಳಲಿದ್ದಾರೆ. ಹೀಗಾಗಿಯೇ ಅಮೆರಿಕ, ಭಾರತದಂತೆ ಉಳಿದ ದೇಶಗಳೂ ತಮ್ಮ ರಾಯಭಾರ ಕಚೇರಿಗಳ ಸಿಬಂದಿಯನ್ನು ವಾಪಸ್ ಕರೆಸಿಕೊಳ್ಳುವಲ್ಲಿ ನಿರತವಾಗಿವೆ.
ಇತ್ತ ಗುರುವಾರವಷ್ಟೇ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್, ತಾಲಿಬಾನಿಯರ ವಕ್ತಾರರಂತೆ ಮಾತನಾಡಿದ್ದು, ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಅಫ್ಘಾನಿಸ್ಥಾನದ ಅಧ್ಯಕ್ಷ ಹುದ್ದೆಯಲ್ಲಿ ಘನಿ ಇರುವವರೆಗೂ ತಾಲಿಬಾನ್ ಉಗ್ರರು, ಶಾಂತಿ ಮಾತುಕತೆ ನಡೆಸುವುದಿಲ್ಲ ಎಂದೂ ಇಮ್ರಾನ್ ಹೇಳಿದ್ದಾರೆ. ಈ ಮೂಲಕ ಉಗ್ರರ ಪ್ರತಿನಿಧಿಯಂತೆಯೇ ಅವರು ಮಾತನಾಡುತ್ತಿದ್ದಾರೆ. ಇದು ಕೂಡ ತಾಲಿಬಾನ್ ಉಗ್ರರಿಗೆ ಪಾಕಿಸ್ಥಾನ ಎಲ್ಲ ನೆರವು ಕೊಡುತ್ತಿದೆ ಎಂಬ ಅನುಮಾನ ಮೂಡಿದೆ.
ಅಫ್ಘಾನಿಸ್ಥಾನದ ಕ್ರಿಕೆಟಿಗ ರಶೀದ್ ಖಾನ್ ಅವರು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಸಮುದಾಯದ ನೆರವು ಕೇಳಿದ್ದರು.
ನಮ್ಮ ದೇಶ ಉಗ್ರರ ಹಿಡಿತಕ್ಕೆ ಹೋಗುತ್ತಿದೆ, ದಯಮಾಡಿ ನೆರವಿಗೆ ಬನ್ನಿ ಎಂದಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ ಕೂಡ ಅಫ್ಘಾನಿಸ್ಥಾನದ ಬೆನ್ನಿಗೆ ನಿಲ್ಲುವುದು ಅನುಮಾನ. ಹೀಗಾಗಿ ಕೆಲವೇ ದಿನಗಳಲ್ಲಿ ಇಡೀ ಅಫ್ಘಾನಿಸ್ಥಾನವೇ ಉಗ್ರರ ಕೈಗೆ ಹೋದರೂ ಅಚ್ಚರಿಯೇನಿಲ್ಲ.
ಒಂದು ವೇಳೆ ಇಡೀ ಅಫ್ಘಾನಿಸ್ಥಾನ ತಾಲಿಬಾನ್ ಉಗ್ರರ ಕೈಗೆ ಹೋದರೆ, ಅಲ್ಲಿನ ಜನರ ಪರಿಸ್ಥಿತಿ ಹೇಳುವಂತಿಲ್ಲ. ಈಗಾಗಲೇ ಸಿರಿಯಾ, ಸಿಬಿಯಾ, ಇರಾಕ್ನಂಥ ದೇಶಗಳು ಉಗ್ರರ ಕೈಗೆ ಹೋಗಿ ಏನಾಗಿದೆ ಎಂಬುದು ಇಡೀ ಜಗತ್ತಿಗೇ ಗೊತ್ತಾಗಿದೆ. ಮಾನವರ ಜೀವಕ್ಕಂತೂ ಬೆಲೆಯೇ ಇರುವುದಿಲ್ಲ. ಹೀಗಾಗಿ ಅಂತಾರಾಷ್ಟ್ರೀಯ ಸಮುದಾಯಗಳು ಈಗಲೇ ಎಚ್ಚೆತ್ತು, ಆ ದೇಶಕ್ಕೆ ಹೊಂದುವ ಹಾಗೆ ಶಾಂತಿ ಸೂತ್ರವೊಂದನ್ನು ರೂಪಿಸಬೇಕು. ಅಲ್ಲದೆ ಈಗಾಗಲೇ ತಾಲಿಬಾನ್ ಉಗ್ರರು ಅಲ್ಲಿನ ಸರಕಾರದ ಜತೆಗೆ ಮಾತುಕತೆಯನ್ನೂ ನಡೆಸುವ ಯತ್ನ ನಡೆಸಿದ್ದಾರೆ. ಕೆಲವೊಂದು ದೇಶಗಳು ಇದರ ಮಧ್ಯಸ್ಥಿಕೆಯನ್ನೂ ಮಾಡಿವೆ. ಹೀಗಾಗಿ ಬೇಗನೇ ಅಲ್ಲಿನ ಪರಿಸ್ಥಿತಿ ಸುಧಾರಣೆಗೆ ಯತ್ನಿಸಬೇಕು.
ಹಾಗೆಯೇ ಪಾಕಿಸ್ಥಾನ ಮತ್ತು ಚೀನದಂಥ ದೇಶಗಳು ಅಫ್ಘಾನಿಸ್ಥಾನದ ಬೆಳವಣಿಗೆಯನ್ನು ತಮಗೆ ಬೇಕಾದ ಹಾಗೆ ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳೂ ಇವೆ. ಅಫ್ಘಾನಿಸ್ಥಾನವನ್ನೇ ಮೂಲ ನೆಲೆಯನ್ನಾಗಿ ಮಾಡಿಕೊಂಡು ಭಾರತದ ವಿರುದ್ಧ ತಾಲಿಬಾನ್ ಉಗ್ರರನ್ನು ಎತ್ತಿಕಟ್ಟಿ ಕಾಶ್ಮೀರದಲ್ಲಿ ಅಶಾಂತಿ ಉಂಟು ಯತ್ನಿಸಬಹುದು.