ಮೈಸೂರು ಅತ್ಯಾಚಾರ ಘಟನೆಗೆ ರಾಜಕೀಯ ಲೇಪ ಬೇಡ
Team Udayavani, Aug 27, 2021, 6:00 AM IST
ಸಾಂಸ್ಕೃತಿಕ ರಾಜಧಾನಿ, ನಿವೃತ್ತರ ಸ್ವರ್ಗ ಎಂದೇ ಕರೆಯಲ್ಪಡುವ ಮೈಸೂರಿನಲ್ಲಿ ಕೆಲವು ತಿಂಗಳುಗಳಿಂದ ನಿರಂತರವಾಗಿ ನಡೆಯುತ್ತಿರುವ ಅಪರಾಧ ಕೃತ್ಯಗಳು ಜನರ ನಿದ್ದೆ ಗೆಡಿಸಿದ್ದು, ಆತಂಕದಿಂದ ದಿನದೂಡು ವಂತಾಗಿದೆ. ಕೇವಲ 2 ದಿನಗಳ ಅವಧಿಯಲ್ಲಿ ನಡೆದ ಶೂಟೌಟ್ ಮತ್ತು ಗ್ಯಾಂಗ್ರೇಪ್ ಇಡೀ ಪೊಲೀಸ್ ವ್ಯವಸ್ಥೆಯನ್ನೇ ಅಣಕಿಸುವಂತಿದೆ.
ಮಂಗಳವಾರ ರಾತ್ರಿ ಯುವತಿ ಮೇಲೆ ನಡೆದಿರುವ ಗ್ಯಾಂಗ್ರೇಪ್ ಪ್ರಕರಣವಂತೂ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದಾಗಿದೆ. ನಿರ್ಜನ ಪ್ರದೇಶದಲ್ಲಿ ಆಕೆಯೊಂದಿಗಿದ್ದ ಯುವಕನ ಮೇಲೆ ಹಲ್ಲೆ ಮಾಡಿ, ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವುದು ಅವರ ಪೈಶಾಚಿಕ ವರ್ತನೆಯನ್ನು ತೋರಿಸುತ್ತಿದೆ.
ಈ ಘಟನೆಯ ಅನಂತರ ಆಡಳಿತ ಮತ್ತು ವಿಪಕ್ಷಗಳ ನಡುವೆ ಗಲಾಟೆಯೂ ಜೋರಾಗಿದೆ. ಹಾಗೆಯೇ ಗೃಹ ಸಚಿವರು ವಿಪಕ್ಷದ ವಿರುದ್ಧವೇ ವಿವಾದಾತ್ಮಕ ಹೇಳಿಕೆ ನೀಡಿ ಕಡೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಇಂಥ ಘಟನೆಗಳು ನಡೆದಾಗ ಆಡಳಿತ ಮತ್ತು ವಿಪಕ್ಷಗಳು ಸೂಕ್ಷ್ಮವಾಗಿ ವರ್ತಿಸಬೇಕು ಎಂಬುದು ಪ್ರಮುಖವಾದ ವಿಚಾರ. ಅಷ್ಟೇ ಅಲ್ಲ, ಯಾವ ಸಂದರ್ಭದಲ್ಲಿ ಹೇಳಿಕೆ ಕೊಡುತ್ತಿದ್ದೇವೆ ಎಂಬುದೂ ಇಲ್ಲಿ ಪ್ರಮುಖವಾಗುತ್ತದೆ.
ಲಾಕ್ಡೌನ್ ತೆರವಾದ ಅನಂತರ ನಗರದಲ್ಲಿನ 18 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 13ಕ್ಕೂ ಹೆಚ್ಚು ಮನೆಗಳ್ಳತನ, 8 ಸರಗಳ್ಳತನ, 6 ಅತ್ಯಾಚಾರ, 3 ಕೊಲೆ ಪ್ರಕರಣಗಳು ಸಂಭವಿಸಿರುವುದು ಮೈಸೂರಲ್ಲಿ ನಿಧಾನಗತಿಯಲ್ಲಿ ಕ್ರೈಂ ರೇಟ್ ಹೆಚ್ಚುತ್ತಿರುವಂತೆ ಗೋಚರಿಸುತ್ತಿದೆ.
ಆಗಸ್ಟ್ 14ರ ತಡರಾತ್ರಿ ಉದಯಗಿರಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯ ಹತ್ಯೆಮಾಡಿದ ಕಿಡಿಗೇಡಿಗಳು, ಮೃತ ವ್ಯಕ್ತಿಯ ಕೈ ಮತ್ತು ಕಾಲನ್ನು ಠಾಣೆಗೆ ತಂದು ಒಪ್ಪಿಸುವ ಮೂಲಕ ವಿಕೃತಿ ಮೆರೆದಿದ್ದರು. ಇದಾದ ಮರುದಿನ ಮೊಬೈಲ್ ವಿಚಾರಕ್ಕೆ ಯುವಕನನ್ನು ಹತ್ಯೆ ಮಾಡಲಾಗಿತ್ತು. ಬಳಿಕ ಆ.23ರಂದು ದರೋಡೆಕೋರರು ಚಿನ್ನದಂಗಡಿ ದೋಚಿ ಪರಾರಿಯಾಗುವಾಗ ಅಮಾಯಕನಿಗೆ ಗುಂಡು ಹಾರಿಸಿ ಹತ್ಯೆಗೈದಿದ್ದರು. ಜತೆಗೆ ಅದೇ ದಿನ ಸರಸ್ವತಿಪುರಂನಲ್ಲಿ ಯುವಕರ ಗುಂಪೊಂದು ಯುವತಿಯ ಮೇಲೆ ಮರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಘಟನೆ ನಡೆದಿತ್ತು. ಈ ಎಲ್ಲ ಅಪರಾಧ ಕೃತ್ಯಗಳು ಮಾಸುವ ಮುನ್ನವೇ ವಿಶ್ವವಿಖ್ಯಾತ ಹಾಗೂ ಧಾರ್ಮಿಕ ಸ್ಥಳವಾದ ಚಾಮುಂಡಿ ಬೆಟ್ಟದ ವ್ಯಾಪ್ತಿಯಲ್ಲಿ ದುರುಳರ ಗುಂಪೊಂದು ಮಂಗಳವಾರ ರಾತ್ರಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿದ್ದು, ಇಡೀ ಮೈಸೂರನ್ನೇ ಬೆಚ್ಚಿ ಬೀಳಿಸಿದೆ.
ಮೈಸೂರಲ್ಲಿ ಕಳೆದ 8 ತಿಂಗಳುಗಳಲ್ಲಿ ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಿಯಕರನಿಂದ, ಸಂಬಂಧಿಯಿಂದ ಅತ್ಯಾಚಾರವಾಗಿರುವ ಬಗ್ಗೆ 5 ಪ್ರಕರಣಗಳು ದಾಖಲಾಗಿವೆ. ಆದರೆ ಇದೇ ಮೊದಲ ಬಾರಿಗೆ ದಿಲ್ಲಿ ನಿರ್ಭಯಾ ಪ್ರಕರಣ ಹೋಲುವ ಸಾಮೂಹಿಕ ಅತ್ಯಾಚಾರ ಮೈಸೂರಲ್ಲಿ ನಡೆದಿದ್ದು, ಈ ಮೂಲಕ 6 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.
ಒಟ್ಟಾರೆ ಪೊಲೀಸ್ ಆಯುಕ್ತರು, ಡಿಸಿಪಿ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಹೊಸ ಮುಖವಾಗಿದ್ದು, ಮೈಸೂರಿನ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಕೊರತೆಯಿಂದಾಗಿ ಹಾಗೂ ಆಡಳಿತಾತ್ಮಕ ಮತ್ತು ರಾಜಕೀಯ ಕಾರಣಗಳಿಂದಾಗಿ ಕ್ರೈಂ ರೇಟ್ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ. ಏನೇ ಆಗಲಿ ಎಲ್ಲ ರಾಜಕೀಯ ಬದಿಗಿಟ್ಟು, ಮೊದಲು ಆರೋಪಿಗಳನ್ನು ಪತ್ತೆ ಮಾಡಬೇಕು. ಈ ಆರೋಪಿಗಳಿಗೆ ಕಠಿನ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಪೊಲೀಸ್ ಇಲಾಖೆ ಮೇಲೆ ಜನರ ನಂಬಿಕೆ ಹೋಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ