ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಬದಲಾವಣೆ ಅನಿವಾರ್ಯ
Team Udayavani, Jun 29, 2019, 5:51 AM IST
ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಹೊಣೆ ಹೊತ್ತು ಪಕ್ಷದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿರುವ ರಾಹುಲ್ ಗಾಂಧಿ ತನ್ನ ನಿರ್ಧಾರದಿಂದ ಹಿಂದೆ ಸರಿಯಲು ಒಪ್ಪದ ಕಾರಣ ಕಾಂಗ್ರೆಸ್ ಈಗ ಹೊಸ ಅಧ್ಯಕ್ಷರನ್ನು ಹುಡುಕುವುದು ಅನಿವಾರ್ಯವಾಗಿದೆ. ಬುಧವಾರ ನಡೆದ ಪಕ್ಷದ ಸಭೆಯಲ್ಲೂ ರಾಜೀನಾಮೆ ನಿರ್ಧಾರವನ್ನು ಹಿಂಪಡೆಯುವಂತೆ ರಾಹುಲ್ ಮನವೊಲಿಸುವ ಇನ್ನೊಂದು ಸುತ್ತಿನ ಪ್ರಯತ್ನ ನಡೆದಿದೆ. ಆದರೆ ಈ ಬಾರಿ ರಾಹುಲ್ ತನ್ನ ನಿರ್ಧಾರ ಅಚಲ ಎಂದು ಇನ್ನಷ್ಟು ಸ್ಪಷ್ಟವಾಗಿ ಹೇಳಿರುವುದರಿಂದ ಕಾಂಗ್ರೆಸ್ ನಾಯಕರು ಪರ್ಯಾಯ ನಾಯಕನ ತಲಾಶೆಗೆ ಮುಂದಾಗಿದ್ದಾರೆ ಮತ್ತು ಇದು ಈ ಹೊತ್ತಿನ ಅಗತ್ಯವೂ ಆಗಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸತತ ಎರಡನೇ ಬಾರಿಗೆ ನೆಲಕಚ್ಚಿದೆ. 2014ರಲ್ಲಿ 44 ಸ್ಥಾನಗಳಿಸಿದ್ದ ಕಾಂಗ್ರೆಸ್ಗೆ ಈ ಬಾರಿ 52 ಸ್ಥಾನಗಳು ಸಿಕ್ಕಿವೆ. 2014ರಲ್ಲಿ ರಾಹುಲ್ ಗಾಂಧಿ ಪಕ್ಷದ ಅಧ್ಯರಲ್ಲದಿದ್ದರೂ ಅವರ ನೇತ್ವತ್ವದಲ್ಲೇ ಚುನಾವಣೆ ಎದುರಿಸಲಾಗಿತ್ತು. 2019ರಲ್ಲಿ ಸ್ವತಹ ರಾಹುಲ್ ಗಾಂಧಿಯೇ ಪಕ್ಷದ ಸೂತ್ರಧಾರರಾಗಿದ್ದರು. ಈ ಸಲ 8 ಸೀಟನ್ನು ಹೆಚ್ಚುವರಿಯಾಗಿ ಗಳಿಸಲು ಸಾಧ್ಯವಾಗಿದ್ದರೂ ಈ ಸೋಲು 2014ರ ಸೋಲಿಗಿಂತಲೂ ಹೆಚ್ಚು ತೀವ್ರವಾಗಿ ಕಾಂಗ್ರೆಸನ್ನು ಚುಚ್ಚುತ್ತಿದೆ. ಬಿಜೆಪಿ ಕೈಯಿಂದ ಅಧಿಕಾರ ಕಸಿದುಕೊಳ್ಳಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಇರುವ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸಿತು. ಪ್ರಿಯಾಂಕ ಗಾಂಧಿಯನ್ನು ಕರೆತಂದು ಹೊಣೆ ವಹಿಸಿದ್ದೂ ಆಯಿತು. ಆದರೆ ಯಾವುದರಿಂದಲೂ ಕಾಂಗ್ರೆಸ್ನ ಪತನವನ್ನು ತಡೆಯಲು ಸಾಧ್ಯವಾಗಿಲ್ಲ. ಸ್ವತಹ ರಾಹುಲ್ ಗಾಂಧಿಯೇ ಅಮೇಠಿಯಲ್ಲಿ ಸೋತು ಹೋಗಿದ್ದಾರೆ. ಈ ಪರಿಸ್ಥಿತಿಯಲ್ಲಿ ಪಕ್ಷದ ಅಧ್ಯಕ್ಷ ಸೋಲಿನ ಹೊಣೆ ಹೊತ್ತುಕೊಂಡು ರಾಜೀನಾಮೆ ನೀಡುವುದು ಸಮಂಜಸ ನಿರ್ಧಾರವೇ ಆಗಿತ್ತು. ಆ ಕೆಲಸವನ್ನು ರಾಹುಲ್ ಗಾಂಧಿ ಪ್ರಾಮಾಣಿಕವಾಗಿ ಮಾಡಿದ್ದಾರೆ. ಆದರೆ ಅನಂತರ ಕಾಂಗ್ರೆಸ್ ನಾಯಕರು ನಡೆದುಕೊಳ್ಳುತ್ತಿರುವ ರೀತಿ ಮಾತ್ರ ಪಕ್ಷದ ಭವಿಷ್ಯ ಮುಂದೆ ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟಿದೆ. ಕಾಂಗ್ರೆಸ್ಗೆ ಗಾಂಧಿ ಪರಿವಾರ ಬಿಟ್ಟರೆ ಅನ್ಯ ಗತಿಯಿಲ್ಲ ಎಂಬ ರೀತಿಯಲ್ಲಿ ಅವರು ಗೋಗರೆಯುತ್ತಿರುವುದನ್ನು ನೋಡುವಾಗ ಈ ಪಕ್ಷ ಎಂದಿಗಾದರೂ ಚೇತರಿಸಿತೇ ಎಂಬ ಸಂಶಯ ಮೂಡುತ್ತದೆ.
ಕಾಂಗ್ರೆಸ್ಗೆ ಇಂದು ಈ ಗತಿಯಾಗಲು ಕಾರಣ ಆತ್ಮಾವಲೋಕನ ಮಾಡಿಕೊಳ್ಳಲು ತಯಾರಿಲ್ಲದಿರುವ ಅದರ ಸ್ವಭಾವ. ಸೋಲಿನ ಪರಾಮರ್ಶೆಗಿಂತಲೂ ಬಿಜೆಪಿಯ ಗೆಲುವಿಗೆ ಮತಯಂತ್ರಗಳನ್ನು ದೂಷಿಸುವುದು, ಮಾರುಕಟ್ಟೆ ಮಾಡಿರುವುದರ ಫಲ ಎಂದು ವ್ಯಂಗ್ಯವಾಡುವುದು ಮತ್ತು ಅದೃಷ್ಟ ಬಲ ಎಂದು ಹಲುಬುವುದರಲ್ಲೇ ಕಾಂಗ್ರೆಸ್ ನಾಯಕರು ಕಾಲ ಕಳೆಯುತ್ತಿದ್ದಾರೆ. ಪ್ರಿಯಾಂಕ ಗಾಂಧಿ ಸೋಲಿನ ಹೊಣೆಯನ್ನು ಕಾರ್ಯಕರ್ತರ ತಲೆಗೆ ಕಟ್ಟಿದಾಗ ಅದನ್ನು ಪ್ರತಿಭಟಿಸುವ ಓರ್ವ ನಾಯಕ ಕಾಂಗ್ರೆಸ್ನಲ್ಲಿ ಕಾಣಲಿಲ್ಲ. ಸಂಘಟನಾತ್ಮಕ ಚುನಾವಣೆ ಮತ್ತು ಹೊಸ ನಾಯಕತ್ವ ಪಕ್ಷಕ್ಕೆ ಈಗ ತೀರಾ ಅಗತ್ಯವಾಗಿದೆ. ಪರ್ಯಾಯ ನಾಯಕನನ್ನು ಹುಡುಕುವುದು ಮತ್ತು ಬದಲಾವಣೆಗೆ ಒಗ್ಗಿಕೊಳ್ಳುವುದು ಕಾಂಗ್ರೆಸ್ಗೆ ಈಗ ಅನಿವಾರ್ಯ. ಒಂದು ಕುಟುಂಬದ ಪಕ್ಷ ಎಂಬ ಟೀಕೆಯಿಂದ ಪಾರಾಗಲು ಕೂಡಾ ಗಾಂಧಿ ಪರಿವಾರದಿಂದ ಹೊರತಾದ ಒಬ್ಬರಿಗೆ ಪಕ್ಷದ ಚುಕ್ಕಾಣಿ ವಹಿಸಬೇಕು. ಗಾಂಧಿ ಪರಿವಾರ ಕಾಂಗ್ರೆಸಿಗರನ್ನು ಬೆಸೆಯುವ ಅಂಟು ಎನ್ನುವುದು ನಿಜ. ನಾಯಕತ್ವ ಬೇರೊಬ್ಬರ ಕೈಗೆ ಹೋದರೆ ಪಕ್ಷದೊಳಗೆ ಗುಂಪುಗಾರಿಕೆ ಪ್ರಾರಂಭವಾಗಬಹುದು ಮತ್ತು ಪಕ್ಷ ಹೋಳಾಗುವ ಸಾಧ್ಯತೆ ಇದೆ ಎನ್ನುವುದು ನಿಜವೇ. ಹಾಗೆಂದು ಬದಲಾವಣೆಗೆ ಒಡ್ಡಿಕೊಳ್ಳದಿದ್ದರೆ ಆಗುವ ಪರಿಣಾಮವೇನೂ ಕಡಿಮೆಯಲ್ಲ. ಈ ವರ್ಷಾಂತ್ಯದಲ್ಲಿ ನಡೆಯುವ ಮಹಾರಾಷ್ಟ್ರ ಮತ್ತು ಹರ್ಯಾಣದ ವಿಧಾನಸಭೆ ಚುನಾವಣೆಗಾಗುವಾಗ ಪಕ್ಷವನ್ನು ಪುನರ್ಸಂಘಟಿಸುವ ಸಾಮರ್ಥ್ಯವುಳ್ಳ ನಾಯಕನನ್ನು ಪಕ್ಷ ಹುಡುಕಲೇ ಬೇಕಾಗಿದೆ. ಈ ಪರಿಸ್ಥಿತಿಯಲ್ಲಿ ನಾಯಕತ್ವ ರಹಿತವಾಗಿರುವುದು ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗಬಹುದು. ಪಕ್ಷ ಈಗ ತೀವ್ರ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಗಾಂಧಿ ಪರಿವಾರದ ಪ್ರಭಾವದಿಂದ ಹೊರಬರಲು, ಹೊಸ ನಾಯಕತ್ವವನ್ನು ಸೃಷ್ಟಿಸಲು ಸಿಕ್ಕಿದ ಅವಕಾಶ ಎಂದು ಭಾವಿಸಿದರೆ ಚೇತರಿಸಿಕೊಳ್ಳಬಹುದು. ಬದಲಾವಣೆಯನ್ನು ಒಪ್ಪಿಕೊಳ್ಳುವುದು ತುಸು ಕಷ್ಟವಾಗಬಹುದು. ಆದರೆ ಅದು ಈ ಸಂದರ್ಭದ ಅಗತ್ಯ.