ಕಲ್ಲು ಸಕ್ಕರೆ: ದೇವತೆಗಳು ದುಃಖಿಸಿದ್ದಕ್ಕೆ ರಾತ್ರಿಯಿಡೀ ಮಳೆ ಬಿತ್ತು!


Team Udayavani, Oct 11, 2020, 6:15 AM IST

ಕಲ್ಲು ಸಕ್ಕರೆ: ದೇವತೆಗಳು ದುಃಖಿಸಿದ್ದಕ್ಕೆ ರಾತ್ರಿಯಿಡೀ ಮಳೆ ಬಿತ್ತು!

ಸಾಲು ದೀಪಗಳಿರುತ್ತವಲ್ಲ; ಹಾಗೆಯೇ ಇವೂ- ಸಾಲ್‌ ಮಿಂಚುಗಳು. ಕೆಲವೇ ಸಾಲುಗಳಲ್ಲಿ ಕೆಲವೇ ಪ್ಯಾರಾಗಳಲ್ಲಿ ಮುಗಿದುಹೋಗುವ ಇವುಗಳಲ್ಲಿ ಕಾದಂಬರಿಗೆ ಆಗುವಷ್ಟು ವಸ್ತುವಿದೆ. ಬದುಕಿನ ಹಲವು ಮಗ್ಗುಲಿನ ಕಥೆ ಮತ್ತು ವ್ಯಥೆಯನ್ನು ತುಂಬಿಕೊಂಡಿರುವ ಇಲ್ಲಿನ
ವಿವರಗಳಲ್ಲಿ ನೀವು ಕಂಡ, ಕೇಳಿದ ಅಥವಾ ಅನುಭವಿಸಿದ ಪ್ರಸಂಗವೂ ಇರಬಹುದೇನೋ…

“ಬದುಕಲ್ಲಿ ದುಡ್ಡು ಮುಖ್ಯ ಮಗನೇ. ಮನುಷ್ಯನಿಗೆ ದುಡ್ಡಿದ್ದಾಗ ಮಾತ್ರ ಬೆಲೆ. ಇವತ್ತಿನ ಥರಾನೇ ನಾಳೆ ಇರಲ್ಲ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ದುಡ್ಡು ಉಳಿಸಬೇಕು. ಸಂಬಂಧ, ಸೆಂಟಿಮೆಂಟ್‌ ಅಂತೆಲ್ಲ ನೋಡಿಕೊಂಡು ದುಂದುವೆಚ್ಚ ಮಾಡಲೇಬಾರದು. ಕಡಿಮೆ ಖರ್ಚಿನಲ್ಲೇ ಅಡ್ಜಸ್ಟ್ ಮಾಡಿಕೊಂಡು ಬದುಕಲು ಕಲಿಯಬೇಕು’- ಬಾಲ್ಯದಿಂದಲೂ ಇಂಥದೇ ಬುದ್ಧಿಮಾತು ಹೇಳಿಕೊಟ್ಟು “ಆತ’ ಮಗನನ್ನು ಬೆಳೆಸಿದ. ಕಾಲಚಕ್ರ ಉರುಳಿತು. ಈ ತಂದೆ ಮುದುಕನಾದ. ಎದ್ದು ಓಡಾಡುವುದೂ ಕಷ್ಟ ಎಂಬಂಥ ಸ್ಥಿತಿಗೆ ತಲುಪಿದ. ಬೇರೊಂದು ಊರಲ್ಲಿದ್ದ ಮಗ ಹುಟ್ಟೂರಿಗೆ ಬಂದವನೇ, ಅತೀ ಕಡಿಮೆ ಸೌಲಭ್ಯಗಳಿದ್ದ ವೃದ್ಧಾಶ್ರಮಕ್ಕೆ ತಂದೆಯನ್ನು ಸೇರಿಸಿ ಹೇಳಿದ: “ಕಷ್ಟನೋ ಸುಖಾನೋ, ಇಲ್ಲೇ ಅಡ್ಜಸ್ಟ್ ಮಾಡಿಕೊಂಡು ಇದ್ದುಬಿಡಪ್ಪಾ… ಬೇರೆ ಕಡೆಗೆ ಹೋದ್ರೆ ಸುಮ್ಮನೆ ಬಣ್ಣದ ಮಾತಾಡಿ ಜಾಸ್ತಿ ಫೀಸ್‌ ಕೇಳ್ತಾರೆ! ಈ ವಯಸ್ಸಲ್ಲಿ ನಿನಗೆ ಏನು ಅನುಕೂಲ ಮಾಡಿಕೊಟ್ಟು ಏನು ಪ್ರಯೋಜನ?’

“ಅಯ್ಯೋ, ನಾನು ಮಗನಿಗೆ ಹಣ ಉಳಿತಾಯದ ಬಗ್ಗೆ ಮಾತ್ರ ಹೇಳಿಕೊಟ್ಟೆ. ಜೀವನ ಮೌಲ್ಯದ ಬಗ್ಗೆ ಹೇಳಿಕೊಡಲೇ ಇಲ್ಲವಲ್ಲ…’ – ಆ ತಂದೆ, ವೃದ್ಧಾಶ್ರಮದ ರೂಮಿನ ಒಳಗೆ ಕೂತು ಹೀಗೆ ಯೋಚಿಸುತ್ತಿದ್ದಾನೆ…

– ಆಕೆಗೆ ಜೇನ ದನಿಯಿತ್ತು. ಆಕೆ ಎರಡು ನಿಮಿಷ ಮಾತನಾಡಿದರೆ ಸಾಕು; ಎಂಥವರೂ ಕನ್ವಿನ್ಸ್ ಆಗಿಬಿಡುತ್ತಿದ್ದರು. ಅಂಥಾ ಸುಮಧುರ ಸ್ವರ ಆಕೆಯದು. ಈ ಧ್ವನಿಯ ಕಾರಣಕ್ಕೇ ದೊಡ್ಡ ಕಂಪೆನಿಯೊಂದರಲ್ಲಿ ಆಕೆಗೆ ಉತ್ತಮ ಸಂಬಳದ ರಿಸೆಪ್ಷನಿಸ್ಟ್ ಹುದ್ದೆಯೂ ಸಿಕ್ಕಿತು. ವಿಪರ್ಯಾಸವೇನು ಗೊತ್ತೇ? ಹೆಚ್ಚಿನ ಸಂದರ್ಭದಲ್ಲಿ- ಸೊರಿ, ರಾಂಗ್‌ ನಂಬರ್‌ ಅನ್ನುವುದಷ್ಟೇ ಆ ಜೇನುದನಿಯ ಸುಂದರಿಯ ಕೆಲಸವಾಗಿತ್ತು.

– ಅವನ ಕೈ ಹಿಡಿದು ಸಂಜೆಗತ್ತಲಲ್ಲಿ, ಆಗಷ್ಟೇ ಹರಡಿಕೊಳ್ಳುತ್ತಿದ್ದ ರಾತ್ರಿಯಲ್ಲಿ ನಡೆಯುವುದೆಂದರೆ ಅವಳಿಗೆ ಖುಷಿ. ಇವರ ಪ್ರತೀ ಹೆಜ್ಜೆಗೂ ಆಗಸದ ನಕ್ಷತ್ರಗಳು ಸಾಕ್ಷಿಯಾಗಿದ್ದವು. ಚಂದ್ರನಿಲ್ಲದ ರಾತ್ರಿಗಳಲ್ಲೂ ನಕ್ಷತ್ರಗಳ ಹಾಜರಿ ಕಡ್ಡಾಯವಾಗಿ ಇರುತ್ತಿತ್ತು. ಅದೇ ಕಾರಣಕ್ಕೆ ಅವನಿಗೂ- ಅವಳಿಗೂ ನಕ್ಷತ್ರಗಳೆಂದರೆ ಪ್ರೀತಿ, ಮೋಹ. ತಮ್ಮ ಪ್ರೀತಿ-ಆಸೆ-ಕನಸುಗಳ ಕುರಿತು ಅವರು ಎಷ್ಟೋ ಬಾರಿ ನಕ್ಷ‌ತ್ರಗಳೊಂದಿಗೆ ಹೇಳಿಕೊಂಡಿದ್ದರು! ಕಡೆಗೊಂದು ದಿನ ಇವರ ಪ್ರೀತಿಯ ವಿಚಾರ ಎರಡೂ ಮನೆಯವರಿಗೆ ಗೊತ್ತಾಗಿ, ಪುರೋಹಿತರ ಬಳಿಗೆ ಜಾತಕವೂ ಹೋಯಿತು. ಇಬ್ಬರ ನಕ್ಷತ್ರಗಳು ಹೊಂದಾಣಿಕೆ ಆಗ್ತಾ ಇಲ್ಲ ಎಂಬ ಕಾರಣ ಹೇಳಿ, ಅವರ ಪ್ರೀತಿಯನ್ನು ಕೊಂದುಹಾಕಲಾಯಿತು!

– ಗಂಡನ ಮನೆಯಲ್ಲಿ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ರಂಗಣ್ಣನಿಗೆ ಬೇರೊಬ್ಬರಿಂದ ಗೊತ್ತಾಯಿತು. ಒಮ್ಮೆ ಅಳಿಯನ ಮನೆಗೆ ಹೋದರೆ, ಮಗಳನ್ನು ನೋಡಿದಂತೆಯೂ ಆಗುತ್ತದೆ, ವಾಸ್ತವವನ್ನು ಅರಿತಂತೆಯೂ ಆಗುತ್ತದೆ ಎಂದುಕೊಂಡೇ ಹೊರಟ. ಗಂಡನ ಮನೆಯಲ್ಲಿ ಮಗಳು ಕತ್ತೆಯಂತೆ ದುಡಿಯುತ್ತಿದ್ದಾಳೆ. ದಿನವೂ ಕಣ್ಣೀರು ಹಾಕುತ್ತಾಳೆ ಎಂಬುದು ಒಂದೇ ದಿನದಲ್ಲಿ ಅವನಿಗೆ ಗೊತ್ತಾಗಿ ಹಿಂದಿರುಗಿದ. ತನ್ನ ಮಾವನಿಗೆ ಅಳಿಯ ಫೋನ್‌ ಮಾಡಿ ಹೇಳಿದ: “ಇಷ್ಟು ದಿನ, ನಾನು ಮಾಡಿದ ತಪ್ಪು ನನಗೆ ಅರಿವಾಗಿರಲಿಲ್ಲ. ನಿಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳದೆ ನಿಮಗೆ ನೋವುಂಟು ಮಾಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ…’

– ಆ ಮಗುವನ್ನು ಹೊಟ್ಟೆಯೊಳಗೆ ಇಟ್ಟುಕೊಂಡು ಪೂರ್ತಿ 9 ತಿಂಗಳು ಆಕೆ ಅಲೆದಾಡಿದಳು. ಉಹೂಂ, ಅದು ಭಾರ ಅನ್ನಿಸಲಿಲ್ಲ. ಅದೇ ಮಗು ಪೋಲಿಯೋಗೆ ತುತ್ತಾದಾಗ, ಪೂರ್ತಿ 13 ವರ್ಷಗಳ ಕಾಲ ಅವನ್ನು ಹೊತ್ತುಕೊಂಡೇ ಬದುಕಬೇಕಾಯಿತು. ಉಹೂಂ, ಆಗಲೂ ಅದು ಹೊರೆ ಅನ್ನಿಸಲಿಲ್ಲ. ಈಗ ಅದೇ ಮಗು ಮಾತಿಲ್ಲದೆ ಮಲಗಿಬಿಟ್ಟಿದೆ. ಮನೆಯಿಂದ ಅರ್ಧ ಫ‌ರ್ಲಾಂಗ್‌ ದೂರವಿರುವ ಜಮೀನಿನ ಬಳಿಗೆ ಮಗುವನ್ನು ಹೊತ್ತೂಯ್ಯಲು ಅವಳಿಗೀಗ ಶಕ್ತಿ ಇಲ್ಲ…

– ಅದೊಂದು ದಿನ, ಇದ್ದಕ್ಕಿದ್ದಂತೆಯೇ ಅವಳನ್ನು ಕೆಲಸದಿಂದ ತೆಗೆಯಲಾಯಿತು. ಅವಳು ತಾಳ್ಮೆ ಕಳೆದುಕೊಳ್ಳಲಿಲ್ಲ. ಮುಂದೊಂದು ದಿನ ಅವಳ ಮದುವೆ ಮುರಿದುಬಿತ್ತು. ಅದಕ್ಕಾಗಿ ಆಕೆ ದುಃಖೀಸಲಿಲ್ಲ. ಎಷ್ಟೋ ವರ್ಷಗಳ ಅನಂತರ, ಮಕ್ಕಳೆಲ್ಲ ಆಕೆಯಿಂದ ದೂರವಾದರು. ಈ ಬೆಳವಣಿಗೆಯ ಅನಂತರ ಅವಳು ಡಿಪ್ರಶನ್‌ಗೆ ತುತ್ತಾಗಲಿಲ್ಲ. ಅಂಥ ಹೆಂಗಸು, ಹಾಸಿಗೆ ಹಿಡಿದಿದ್ದ ತಾಯಿ ತೀರಿಕೊಂಡ ತತ್‌ಕ್ಷಣ- “ಅಯ್ಯೋ, ನನಗೆ ಇನ್ಯಾರು ದಿಕ್ಕು?’ ಎಂದು ಗೋಳಾಡುತ್ತಾ ಕುಸಿದುಬಿದ್ದಳು…

– ಅಮ್ಮಾ, ಇವತ್ತು ನೀನು ಮಾತಾಡಬೇಡ. ಸುಮ್ಮನೇ ಇದ್ದುಬಿಡು. ಇವತ್ತು ನಾನೇ ಮಾತಾಡ್ತೇನೆ… ಮಗಳು ತಾಯಿಗೆ ಹೀಗೊಂದು ಸಲಹೆ ಕೊಟ್ಟಳು. ಅದು ಅಮ್ಮನಿಗೂ ಒಪ್ಪಿಗೆ ಆಯಿತು. ರಾತ್ರಿ ತಂದೆ ಬಂದಾಗ ಈ ಮಗಳು ಬೇಡಿಕೆಯ ದನಿಯಲ್ಲಿ ಹೇಳಿದಳು: “ಅಪ್ಪಾ, ಇನ್ನು ಮೇಲಾದ್ರೂ ಕುಡಿಯೋದನ್ನು ನಿಲ್ಲಿಸಿ. ಇದರಿಂದ ನಿಮ್ಮ ಆರೋಗ್ಯ ಹಾಳಾಗುವುದಷ್ಟೇ ಅಲ್ಲ, ಅಮ್ಮನ ಮರ್ಯಾದೆಯೂ ಹೋಗುತ್ತೆ…’ ಹೀಗೆ ಮಾತಾಡಿದ್ದರಿಂದ ಒಂದು ಬದಲಾವಣೆ ಆಯಿತು. ಈ ಬಾರಿ, ತಾಯಿಯ ಜತೆಗೆ ಅವಳೂ ಪೆಟ್ಟು ತಿನ್ನುವಂತಾಯಿತು!

– ಅವಳಿಗೆ ಅವನ ಬಗ್ಗೆ ಪ್ರೀತಿಯಿತ್ತು, ಅಭಿಮಾನವಿತ್ತು. ನಂಬಿಕೆಯಿತ್ತು. ಹಾಗಾಗಿಯೇ ಅವನು ಹೇಳಿದಂತೆಯೇ ಕೇಳುತ್ತ ಬಂದಳು. ತನ್ನದೆಲ್ಲವನ್ನೂ ಅವನಿಗೆ ಅರ್ಪಿಸಿಕೊಂಡಳು. ಕಡೆ ಗೊಂದು ದಿನ- “ಹೀಗೇ ಎಷ್ಟು ದಿನ ಬದುಕೋದು? ಆದಷ್ಟು ಬೇಗ ಮದುವೆ ಆಗೋಣವಾ?’-ಎಂದು ಆಸೆಯಿಂದ ಕೇಳಿದಳು.”ಏನಂದೆ, ಮದುವೇನಾ? ನನ್ನ ಜತೆ ಆಟಕ್ಕೆ ಬಂದವರನ್ನೆಲ್ಲ ನಾನು ಮದುವೆ ಆಗೋಕೆ ಆಗುತ್ತಾ?’
– ಅವನು ಅಸಹನೆಯಿಂದ ಪ್ರಶ್ನಿಸಿದ.

– ಆಕೆ ಅವಿವಾಹಿತೆ. ಬಂಧು- ಬಳಗದಿಂದ ದೂರವೇ ಇದ್ದಳು. 50ನೇ ಹುಟ್ಟುಹಬ್ಬ ಆಚರಿಸಿಕೊಂಡ ಅನಂತರವೂ ಅವಳು ಮೇಕ್‌ ಅಪ್‌ ಮಾಡಿಕೊಳ್ಳುವುದನ್ನು ನಿಲ್ಲಿಸಿರಲಿಲ್ಲ. ದಿನವೂ ಹುಬ್ಬು ತೀಡಿಕೊಳ್ಳುತ್ತಾ, ಕೂದಲಿಗೆ ಹೇರ್‌ ಡೈ ಮಾಡುತ್ತಾ, ಮೊಡವೆಯಾಗಲಿ- ಚರ್ಮದ ಸುಕ್ಕಾಗಲಿ ಕಾಣದಂತೆ ಎಚ್ಚರ ವಹಿಸುತ್ತಿದ್ದಳು. ಇಷ್ಟಾದ ಮೇಲೆ ಘಮಘಮ ಅನ್ನುವಂಥ ಸ್ನೋ-ಪೌಡರ್‌ ಹಾಕಿಕೊಳ್ಳುತ್ತಿದ್ದಳು. ಅನಂತರ ಲಿಪ್‌ಸ್ಟಿಕ್‌ ಹಚ್ಚಿಕೊಂಡು ರೆಡಿ ಆಗುವ ವೇಳೆಗೆ ಪೂರ್ತಿ ಒಂದು ಗಂಟೆ ಹಿಡಿಯುತ್ತಿತ್ತು. ಇದನ್ನೆಲ್ಲ ನೋಡುವಷ್ಟು ದಿನ ನೋಡಿದ ಅವಳ ಗೆಳತಿಯರು ಕಡೆಗೊಂದು ದಿನ ಕೇಳಿಯೇ ಬಿಟ್ಟರು: “ಅಲ್ಲ ಕಣೇ, ಗಂಡ-ಮಕ್ಕಳು-ಬಂಧುಗಳು ಯಾರೂ ಇಲ್ಲ ಅಂತೀಯಾ. ಹಾಗಿದ್ರೂ ಇಷ್ಟೆಲ್ಲ ಅಲಂಕಾರ ಮಾಡ್ಕೊತೀಯ. ಇದನ್ನೆಲ್ಲ ಯಾರು ನೋಡಬೇಕು? ನಿನ್ನನ್ನು ಯಾರು ಮೆಚ್ಕೋಬೇಕು?’ಆಕೆ ತತ್‌ಕ್ಷಣ ಹೇಳಿದಳು. ಬೇರೆಯವರು ಮೆಚ್ಚಲಿ ಬಿಡಲಿ. ನನ್ನನ್ನು ನಾನು ಮೆಚ್ಕೋಬೇಕು…ಅಷ್ಟೇ…

– ಆ ದುರುಳರು, ನಿರ್ಜನ ಪ್ರದೇಶಕ್ಕೆ ಆ ಬಾಲೆಯನ್ನು ಹೊತ್ತೂಯ್ದರು. ಅಲ್ಲಿ ಸರದಿಯ ಪ್ರಕಾರ ತಮ್ಮ ಕಾಮ ತೃಷೆ ತೀರಿಸಿಕೊಂಡರು. ದುಷ್ಟರ ರಕ್ಕಸ ಹಿಡಿತಕ್ಕೆ ಸಿಕ್ಕಿಬಿದ್ದ ಆಕೆಗೆ ಚೀತ್ಕರಿಸುವುದು ಹಾಗಿರಲಿ; ಸರಿಯಾಗಿ ಉಸಿರಾಡಲೂ ಸಾಧ್ಯವಾಗಲಿಲ್ಲ. ದುಷ್ಟರ ಅಟ್ಟಹಾಸದ ಮಧ್ಯೆಯೇ ಆಕೆ ಉಸಿರು ಚೆಲ್ಲಿದಳು. ಇದನ್ನೆಲ್ಲ ಆಗಸದಲ್ಲಿ ಅದೃಶ್ಯವಾಗಿದ್ದುಕೊಂಡೇ ನೋಡಿದ ದೇವತೆಗಳಿಗೆ ದುಃಖ ತಡೆಯಲಾಗಲಿಲ್ಲ. ಅವತ್ತು, ರಾತ್ರಿಯಿಡೀ ಮಳೆ ಸುರಿಯಿತು!

– ಆ ನೀಚನನ್ನು ಮರೆಯಬೇಕೆಂದು ತೀರ್ಮಾನಿಸಿದ ಅವಳು, ಅವನ ಫೋನ್‌ ನಂಬರನ್ನು ಬ್ಲಾಕ್‌ ಮಾಡಿದಳು. ಅವನ ಮೇಲ್‌ಗ‌ಳನ್ನೆಲ್ಲ ಡಿಲೀಟ್‌ ಮಾಡಿದಳು. ಸೋಶಿಯಲ್‌ ಮೀಡಿಯಾದಿಂದ ತಾನೇ ಆಚೆಗೆ ಬಂದಳು. ಆದರೆ, ಕನ್ನಡಿಯ ಮುಂದೆ ಹೋಗಿ ನಿಂತರೆ ಸಾಕು; ತನ್ನ ವಿಕಾರವಾದ ಮುಖ ಕಾಣಿಸಿದಾಗಲೇ, ರಾಕ್ಷಸನಂತೆ ಮೇಲೆರಗಿದ್ದ ಆ ದುಷ್ಟನ ಮುಖವೂ ಕಾಣಿಸಿಬಿಡುತ್ತಿತ್ತು…

– ಆಕೆ ದಿವಾನ್‌ನ ಮೇಲೆ ನಿಶ್ಚಲವಾಗಿ ಮಲಗಿದ್ದಳು. ದಿವಾನ್‌ನ ಸುತ್ತಲೂ ಬಂಧುಗಳು ಪೆಚ್ಚು ಮೊರೆ ಹಾಕಿಕೊಂಡು ನಿಂತಿದ್ದರು. ಅವರ ಜತೆಯಲ್ಲೇ, ಆಕೆಯ ಗಂಡನೂ ಇದ್ದ. ಆತನ ಕಣ್ಣುಗಳು ಊದಿಕೊಂಡಿದ್ದವು. ಅಲ್ಲಿಯೇ ಇದ್ದ ಅವನ ನಾಲ್ಕು ವರ್ಷದ ಪುಟ್ಟ ಮಗ- “ಅಪ್ಪಾ, ಬೇಗ ಬ್ಯಾಟರಿ ಚೇಂಜ್‌ ಮಾಡಪ್ಪ, ಬ್ಯಾಟರಿ ಚೇಂಜ್‌ ಮಾಡಪ್ಪ ಬೇಗ…’ ಎಂದು ಒಂದೇ ಸಮನೆ ಪೀಡಿಸತೊಡಗಿದ್ದ. ನೋಡುವಷ್ಟು ನೋಡಿದ ಆ ತಂದೆ ಕಡೆಗೊಮ್ಮೆ ತಾಳ್ಮೆ ಕಳೆದುಕೊಂಡು- ಅಯ್ಯೋ ದರಿದ್ರ ನನ್ಮಗನೇ, ಸಮಯ ಸಂದರ್ಭ ಗೊತ್ತಿಲ್ಲದೇ ಅದೇನ್‌ ಮಾತು ನಿಂದು, ತೊಲಗು ಅತ್ಲಾಗೆ…ಎಂದು ಅಬ್ಬರಿಸಿಬಿಟ್ಟ. ಆ ಮಗು ಕಣ್ಣೀರು ಹಾಕುತ್ತಲೇ ಹೇಳಿತು: “”ಅಪ್ಪಾ, ನಮ್ಮ ಬಾಡಿ ಕೂಡ ಒಂದು ಮಷೀನ್‌ ಥರಾನೇ ಕೆಲಸ ಮಾಡುತ್ತೆ ಅಂತ ನೀನೇ ಹೇಳಿದ್ದೆ ಆಲ್ವಾ? ಬ್ಯಾಟರಿ ಖಾಲಿಯಾಗಿ ಓಡುತ್ತಿದ್ದ ಕಾರ್‌ ನಿಂತುಬಿಟ್ಟಾಗ, ಹೊಸಾ ಬ್ಯಾಟರಿ ಹಾಕಿ ಕಾರ್‌ನ ಮತ್ತೆ ಓಡುವ ಹಾಗೆ ಮಾಡ್ತಾ ಇದ್ದೆ ಅಲ್ವ? ಅಮ್ಮನ ಬಾಡಿಗೂ ಈಗ ಒಂದು ಹೊಸ ಬ್ಯಾಟರಿ ಹಾಕಿ ಅವಳು ಎದ್ದೇಳುವ ಹಾಗೆ ಮಾಡು ಅಂತ ಹೇಳ್ತಾ ಇದ್ದೀನಿ ಕಣಪ್ಪಾ…’

– ಆ ವೈದ್ಯರು ಯಾತನೆಯ ಧ್ವನಿಯಲ್ಲಿ ಹೇಳಿದರು: “ಹೀಗೆ ಹೇಳುವುದಕ್ಕೆ ವಿಷಾದವಾಗುತ್ತೆ. ಆದರೆ ಹೇಳದೇ ವಿಧಿಯಿಲ್ಲ. ನಿಮಗೆ ಏಡ್ಸ್‌ ಇದೆ…’ “ಅಬ್ಟಾ, ಇನ್ನು ಮುಂದೆ ಯಾವ ಹುಡುಗರೂ ನನ್ನ ತಂಟೆಗೆ ಬರಲ್ಲ. ಬದುಕಿರುವಷ್ಟು ದಿನ ನಾನು ಯಾವ ಭಯವೂ ಇಲ್ಲದೆ ಬಾಳಬಹುದು’- ಆ ಯುವತಿ ಸಂಭ್ರಮದಿಂದ ಉದ್ಗರಿಸುತ್ತಾ ಎದ್ದು ಹೋದಳು.

ಎ.ಆರ್‌.ಮಣಿಕಾಂತ್‌

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

Postman ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

MUNNA

ಕೆಮರಾ ಕಣ್ಣು ಮಿಟುಕಿಸುತ್ತಾ “ಕಮಾಲ್‌”ಮಾಡಿದ!

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.