ಅಕ್ರಮ ವಲಸಿಗರಿಗೆ ಭಾರತ ಧರ್ಮಛತ್ರವೇ?
Team Udayavani, Aug 3, 2018, 12:27 PM IST
*ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲೂ ಅಸ್ಸಾನಂತೆಯೇ ಎನ್ಆರ್ಸಿ ಪಟ್ಟಿ ತಯಾರಿಸುತ್ತೇವೆ ಎಂದಿದ್ದೀರಿ. ಏಕೆ ಬೇಕು ಎನ್ಆರ್ಸಿ?
ದಿಲೀಪ್ ಘೋಷ್:ಮೊದಲನೆಯದಾಗಿ ಮತ್ತು ಬಹುಮುಖ್ಯವಾಗಿ, ಎಲ್ಲಾ ಗಡಿ ರಾಜ್ಯಗಳಿಗೂ ಎನ್ಆರ್ಸಿ ಇರಬೇಕೆಂದು ಖುದ್ದು ಸುಪ್ರೀಂ ಕೋರ್ಟ್ ಹೇಳಿದೆ. ಎರಡನೆಯದಾಗಿ, ಪಶ್ಚಿಮ ಬಂಗಾಳದಲ್ಲಿ ಈಗ ಸುಮಾರು 1 ಕೋಟಿ ಅಕ್ರಮ ಬಾಂಗ್ಲಾದೇಶಿ ವಲಸಿಗರಿದ್ದಾರೆ. ಅವರ ಈ ಬೃಹತ್ ಜನಸಂಖ್ಯೆಯು ರಾಜ್ಯ ರಾಜಕಾರಣದ ಮೇಲೆಯೂ ದೊಡ್ಡ ಪರಿಣಾಮ ಉಂಟುಮಾಡುತ್ತಿದೆ. ಇವರಲ್ಲಿ ಅನೇಕರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಬಂಗಾಲದ ಜನರ ಜೀವನವನ್ನು ನರಕವಾಗಿಸುತ್ತಿದ್ದಾರೆ.
ಮೊದಲು ಪಶ್ಚಿಮ ಬಂಗಾಳವನ್ನು ಆಳುತ್ತಿದ್ದ ಸಿಪಿಐ(ಎಂ), ರಾಜ್ಯದಲ್ಲಿ ಅಕ್ರಮ ಬಾಂಗ್ಲಾದೇಶಿಯರೇ ಇಲ್ಲ ಎಂದು ನಿರಾಕರಿಸುತ್ತಾ ಬಂದಿತ್ತು. ಈ ಅಕ್ರಮ ವಲಸಿಗರು ರಾಜ್ಯದ ಮತದಾರರಾಗಿಬಿಟ್ಟರು. ಇದೆಲ್ಲದರಿಂದಾಗಿ ಆರ್ಥಿಕತೆಗೂ ಪೆಟ್ಟು ಬಿದ್ದಿತು. ಎಲ್ಲಿಯವರೆಗೂ ಅಕ್ರಮ ವಲಸಿಗರು ವಾಪಸ್ ಹೋಗುವುದಿಲ್ಲವೋ ಅಲ್ಲಿಯವರೆಗೂ ಪಶ್ಚಿಮ ಬಂಗಾಳ ಕುದಿವ ಹಂಡೆಯಾಗಿರುತ್ತದೆ.
*ಒಂದು ಕೋಟಿ ಅಕ್ರಮ ವಲಸಿಗರಿದ್ದಾರೆ ಎಂದು ಹೇಗೆ ನಿಖರವಾಗಿ ಹೇಳಬಲ್ಲಿರಿ? ಎಲ್ಲಿಂದ ಸಿಕ್ಕಿತು ಈ ಅಂಕಿಸಂಖ್ಯೆ ನಿಮಗೆ? ಪುರಾವೆ ಇದೆಯೇ?
ದಿಲೀಪ್ ಘೋಷ್:ಅನೇಕರು ಆಗಲೇ ಸಿಕ್ಕಿಬಿದ್ದಿದ್ದಾರೆ. ಬಹಳಷ್ಟು ಜನರು ಜೈಲನ್ನೂ ಸೇರಿದ್ದಾರೆ. ಆದರೆ ಇದೆಲ್ಲದರ ನಡುವೆಯೇ ಈಗ ಹೊಸ ಟ್ರೆಂಡ್ ಆರಂಭವಾಗಿದೆ. ಮಮತಾ ಬ್ಯಾನರ್ಜಿಯವರ ಸರ್ಕಾರವೀಗ ರೊಹಿಂಗ್ಯಾ ಮುಸಲ್ಮಾನರನ್ನೂ ಪಶ್ಚಿಮ ಬಂಗಾಳದಲ್ಲಿ ನೆಲೆಯೂರುವಂತೆ ಮಾಡುತ್ತಿದೆ. ಹಾಗಿದ್ದರೆ ರೊಹಿಂಗ್ಯಾಗಳನ್ನೂ ನಾವು ಭಾರತೀಯರೆನ್ನಬೇಕಾ? ಮತಗಳಿಗಾಗಿ ಪಶ್ಚಿಮ ಬಂಗಾಳದಲ್ಲಿ ಯಾವ ರೀತಿ ಓಲೈಕೆ ರಾಜಕಾರಣ ನಡೆಯುತ್ತಿದೆಯೋ ನೋಡಿ. 34 ವರ್ಷ ಸಿಪಿಐ-ಎಂ ಮಾಡಿದ್ದು ಇದನ್ನೇ, ಈಗ ಅದೇ ಪರಂಪರೆಯನ್ನು ತೃಣಮೂಲ ಕಾಂಗ್ರೆಸ್ ಮುಂದುವರಿಸುತ್ತಿದೆ. ಇದೇ ಕಾರಣಕ್ಕಾಗಿಯೇ ಅಕ್ರಮ ವಲಸಿಗರು ಟಿಎಂಸಿಯನ್ನು ಬೆಂಬಲಿಸುತ್ತಾರೆ.
*ಬಿಜೆಪಿ ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಟಾರ್ಗೆಟ್ ಮಾಡುವ ನೆಪದಲ್ಲಿ ಪಶ್ಚಿಮ ಬಂಗಾಳದ ಮುಸಲ್ಮಾನರನ್ನೂ ಗುರಿಯಾಗಿಸುತ್ತಿದೆಯೇ?
ದಿಲೀಪ್ ಘೋಷ್:ನಮಗೆ ಪಶ್ಚಿಮ ಬಂಗಾಳದ ಮುಸಲ್ಮಾನರ ವಿಷಯದಲ್ಲಿ ಯಾವ ತೊಂದರೆಯೂ ಇಲ್ಲ. ಅವರು ಇಲ್ಲಿನವರು. ನಾವು
ಮಾತನಾಡುತ್ತಿರುವುದು ಬಾಂಗ್ಲಾದೇಶಿ ಮುಸಲ್ಮಾನರ ಬಗ್ಗೆಯಷ್ಟೇ.
*ನೀವು ಜನರನ್ನು ಒಡೆಯುತ್ತಿದ್ದೀರಿ ಎನ್ನುತ್ತಾರಲ್ಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ?
ದಿಲೀಪ್ ಘೋಷ್:ಮಮತಾ ಬ್ಯಾನರ್ಜಿ ರೊಹಿಂಗ್ಯಾಗಳಿಗಾಗಿ ಪಶ್ಚಿಮ ಬಂಗಾಳದಲ್ಲಿ ಕ್ಯಾಂಪ್ಗ್ಳನ್ನು ನಿರ್ಮಿಸಿದ್ದಾರೆ. ಬಾಂಗ್ಲಾದೇಶವೇ ರೊಹಿಂಗ್ಯಾಗಳನ್ನು ಬಿಟ್ಟುಕೊಳ್ಳಲು ತಯಾರಿಲ್ಲ ಎಂದ ಮೇಲೆ ಭಾರತವೇಕೆ ಅವರಿಗೆ ಜಾಗ ಕೊಡಬೇಕು? ಈ ರೊಹಿಂಗ್ಯಾಗಳನ್ನು ಮತಗಳಾಗಿ ಪರಿವರ್ತಿಸುವ ಯೋಚನೆ ಅವರಿಗೆ (ಮಮತಾ-ತೃಣಮೂಲ ಕಾಂಗ್ರೆಸ್) ಇದೆ.
* ಒಂದು ಕೋಟಿ ಜನ ಅಂದರೆ ಕಡಿಮೆ ಸಂಖ್ಯೆಯೇನಲ್ಲ!
ದಿಲೀಪ್ ಘೋಷ್:ಹೌದೌದು. ನೀವು ಮುಂಬೈ ಮತ್ತು ದೆಹಲಿಯಂಥ ಮಹಾನಗರಿಗಳನ್ನೇ ನೋಡಿ. ಅಲ್ಲಿ ಅನೇಕ ಬಾಂಗ್ಲಾದೇಶಿ
ಮುಸಲ್ಮಾನರು ನಿಮಗೆ ಸಿಗುತ್ತಾರೆ. ಅವರು ಭಾರತದಾದ್ಯಂತ ಕಾಲನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಈಗ ರೊಹಿಂಗ್ಯಾಗಳು
ಜಮ್ಮೂದಲ್ಲಿ ನೆಲೆಯೂರಿದ್ದಾರೆ. ಇದು ದೇಶದ ಭದ್ರತೆಗೆ ಅಪಾಯ ಒಡ್ಡುವಂಥ ಸಂಗತಿ. ನೀವು ಹೊರ ರಾಜ್ಯದವರಾಗಿದ್ದರೆ ನಿಮಗೆ ಪಶ್ಚಿಮ ಬಂಗಾಳದ ನಾಗರಿಕರಿಗೂ, ಬಾಂಗ್ಲಾದೇಶಿ ನಾಗರಿಕರಿಗೂ ನಡುವಿನ ವ್ಯತ್ಯಾಸ ತಿಳಿಯುವುದಿಲ್ಲ. ನಮಗಷ್ಟೇ (ಬೆಂಗಾಲಿಗಳಿಗೆ) ಅವರ ಭಾಷಾ ಶೈಲಿ ತಟಕ್ಕನೆ ತಿಳಿದುಬಿಡುತ್ತದೆ.
ಬಾಂಗ್ಲಾದೇಶಿಯರೀಗ ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಗಳನ್ನೂ ಗೆದ್ದಿದ್ದಾರೆ. ಈಗ ನಮ್ಮ ರಾಜ್ಯದ ಪಂಚಾಯಿತಿಗಳು ಅವರ ಹಿಡಿತದಲ್ಲೇ ಇವೆ. ನಮ್ಮ ದೇಶದ ಹಣವನ್ನು ಅವರು ಲೂಟಿ ಮಾಡುತ್ತಿದ್ದಾರೆ. ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಮಾಲ್ಡಾ ಪ್ರದೇಶವಂತೂ ನಕಲಿ ನೋಟಿನ ಕಾರಿಡಾರ್ ಆಗಿ ಬದಲಾಗಿದೆ.
* ಮುಸಲ್ಮಾನರ ಸಂಖ್ಯೆ ತೀವ್ರ ಹೆಚ್ಚಳವಾಗುತ್ತಿದೆ ಎನ್ನುತ್ತಾ ಹಿಂದೂಗಳನ್ನು ಹೆದರಿಸಲು ಪ್ರಯತ್ನಿಸುತ್ತಿದೆಯೇ ಬಿಜೆಪಿ?
ದಿಲೀಪ್ ಘೋಷ್:ಗುಜರಾತ್ ಮತ್ತು ಹರ್ಯಾಣದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರಿದ್ದಾರಲ್ಲ, ಅಲ್ಲಿ ಬಿಜೆಪಿಯೇನಾದರೂ ಮುಸಲ್ಮಾನರ ಬಗ್ಗೆ ಮಾತನಾಡಿತೇ? ಹಿಂದೂ ಮತದಾರರನ್ನು ಹೆದರಿಸಿತೇ? ಇಲ್ಲವಲ್ಲ? ಜನರಿಗೆ ಅಭಿವೃದ್ಧಿ ಪರವಿರುವ ಬಿಜೆಪಿಯ ಮೇಲೆ ಪ್ರೀತಿಯಿದೆ, ಅದಕ್ಕೇ ಅವರು ನಮ್ಮ ಪಕ್ಷಕ್ಕೆ ಮತ ನೀಡುತ್ತಾರೆ.
ನಿಜಕ್ಕೂ ನಮ್ಮ ಎದುರಾಳಿಗಳು ಮುಸಲ್ಮಾನರನ್ನು ಹೆದರಿಸುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದುಬಿಟ್ಟರೆ ಹಾಡಹಗಲೇ ಹತ್ಯೆಗಳು ನಡೆಯುತ್ತವೆ ಎಂದು ಕಥೆ ಕಟ್ಟುತ್ತಿದ್ದಾರೆ. ಇಂದು ಪಶ್ಚಿಮ ಬಂಗಾಳದಲ್ಲಿ ನೂರಾರು ಮುಸಲ್ಮಾನರು ಬಿಜೆಪಿಯನ್ನು ಸೇರುತ್ತಿದ್ದಾರೆ. ಸತ್ಯವೇನೆಂದರೆ ದೇಶದಲ್ಲಿನ ಇತರೆ ರಾಜ್ಯಗಳ ಮುಸಲ್ಮಾನರಿಗೆ ಹೋಲಿಸಿದರೆ ಪಶ್ಚಿಮ ಬಂಗಾಳದ ಮುಸಲ್ಮಾನರಲ್ಲಿ ಬಡತನ ಪ್ರಮಾಣ ಹೆಚ್ಚು .
*ಆದರೂ ಮಮತಾ ಬ್ಯಾನರ್ಜಿಯವರೇ ಚುನಾವಣೆಗಳನ್ನು ಗೆಲ್ಲುತ್ತಿದ್ದಾರಲ್ಲ…
ದಿಲೀಪ್ ಘೋಷ್:ಲೋಕಸಭಾ ಚುನಾವಣೆಯಲ್ಲಿ ಏನಾಗುತ್ತದೋ ನೋಡೋಣ ತ. ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಗಳಲ್ಲಿ 30 ಪ್ರತಿಶತಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಟಿಎಂಸಿಗೆ ಎದುರಾಳಿಗಳೇ ಇರಲಿಲ್ಲ. ಏಕೆಂದರೆ ಎದುರಾಳಿ ಪಕ್ಷದವರಿಗೆ ನಾಮನಿರ್ದೇಶನ ಮಾಡುವುದಕ್ಕೇ ಆಗಲಿಲ್ಲ (ಟಿಎಂಸಿ ಕಾರ್ಯಕರ್ತರ ಬೆದರಿಕೆಯಿಂದಾಗಿ). ಅದಷ್ಟೇ ಅಲ್ಲ, 42 ಪ್ರತಿಶತ ಜನರಿಗೆ ಮತದಾನ ಮಾಡಲೂ ಇವರೆಲ್ಲ ಬಿಡಲಿಲ್ಲ. ಈ ಕೇಸು ಸುಪ್ರೀಂ ಕೋರ್ಟ್ನಲ್ಲೀಗ ನಡೆಯುತ್ತಿದೆ.
*ಅಸ್ಸಾಂನಲ್ಲಿ 40 ಲಕ್ಷ ಜನರ ಹೆಸರನ್ನು ಎನ್ಆರ್ಸಿಯಿಂದ ಹೊರಗಿಡಲಾಗಿದೆ. ಈಗ ನೋಡಿದರೆ ನೀವು ಪಶ್ಚಿಮ ಬಂಗಾಳದಲ್ಲಿನ 1 ಕೋಟಿ ಜನರನ್ನು ಅಕ್ರಮ ವಲಸಿಗರೆಂದು ಘೋಷಿಸಲು ಬಯಸುತ್ತೀರಿ. ಇವರೆಲ್ಲ ಅಕ್ರಮ ವಲಸಿಗರು ಎಂದು ಗುರುತಿಸಲ್ಪಟ್ಟರೆ ಆಗ ಏನು
ಮಾಡುತ್ತೀರಿ?
ದಿಲೀಪ್ ಘೋಷ್:ಮೊದಲು ಅವರು ಸಿಗಲಿ ತಡೆಯಿರಿ. ಸರ್ಕಾರ 10 ಜನರಿಗೆ ಅಂತ ಬಜೆಟ್ ರೂಪಿಸುತ್ತದೆ ಎಂದುಕೊಳ್ಳಿ. ಆದರೆ ಅಲ್ಲಿ ಹತ್ತಲ್ಲ, ಹದಿನೈದು ಜನರಿರುತ್ತಾರೆ. ಅಂದರೆ ಇನ್ನುಳಿದ 5 ಮಂದಿ ಸರ್ಕಾರದ ಸಂಪನ್ಮೂಲಗಳನ್ನು ಕಬಳಿಸುತ್ತಿರುತ್ತಾರೆ ಎಂದರ್ಥ. ಪಶ್ಚಿಮ ಬಂಗಾಳದಲ್ಲಿ ಇದೇ ಆಗುತ್ತಿದೆ. ನಾವು ಹೇಳುವುದಿಷ್ಟೆ…ಅಕ್ರಮ ವಲಸಿಗರಿಗೆ ಮತದಾನದ ಹಕ್ಕು ಕೊಡಬೇಡಿ, ಅವರಿಗೆ ಬ್ಯಾಂಕ್ ಲೋನ್ ಸಿಗದಂತೆ ನೋಡಿಕೊಳ್ಳಿ, ಅವರಿಗೆ ಸರ್ಕಾರದ ಸಬ್ಸಿಡಿಗಳು ಸಿಗದಂತಾಗಲಿ. ಆಗ ತಾನಾಗಿಯೇ ಅಕ್ರಮ ವಲಸೆಯ
ಹರಿವು ತಗ್ಗುತ್ತದೆ.
*ಅಂದರೆ ಈಗಲೂ ಅಕ್ರಮ ವಲಸಿಗರ ಹರಿವು ಇದೆಯೇ?
ದಿಲೀಪ್ ಘೋಷ್:ಹೌದು. ಅವರು ಈಗಲೂ ಬರುತ್ತಿದ್ದಾರೆ. ಅವರಿಂದಾಗಿ ನಮ್ಮ ಗಡಿಗಳಲ್ಲಿ ಅಭದ್ರ ವಾತಾವರಣ ಉಂಟಾಗುತ್ತಿದೆ. ನಮ್ಮ
ಬಿಎಸ್ಎಫ್ ಯೋಧರಿಗೆ ಪ್ರಾಣಾಪಾಯ ಎದುರಾಗುತ್ತಿದೆ. ಗಡಿಗಳು ಭದ್ರವಿಲ್ಲವೆಂದರೆ ದೇಶ ಹೇಗೆ ಸುಭದ್ರವಾಗಿರಬಲ್ಲದು? ಇದೆಲ್ಲ ನಿಲ್ಲಲೇಬೇಕು. ಭಾರತವೇನು ಬಾಂಗ್ಲಾದೇಶಿ ಅಕ್ರಮ ವಲಸಿಗರಿಗೆ ಧರ್ಮಛತ್ರವೇ?
* “ಮುಸಲ್ಮಾನ ಸಮುದಾಯವನ್ನು ರಾಜಕೀಯವಾಗಿ ದುರ್ಬಲಗೊಳಿಸುವುದಕ್ಕಾಗಿಯೇ ಬಿಜೆಪಿ ಎನ್ಆರ್ಸಿ ವಿಷಯವನ್ನು ರಾಜಕೀಯಗೊಳಿಸುತ್ತಿದೆ’ ಎನ್ನುತ್ತಾರಲ್ಲ ಎಐಯುಡಿಎಫ್ ಸಂಸದ ಬದ್ರುದ್ದೀನ್ ಅಜ್ಮಲ್?
ದಿಲೀಪ್ ಘೋಷ್:ಅಜ್ಮಲ್ ಅವರ ಒಬ್ಬ ಎಂಎಲ್ಎ ಬಾಂಗ್ಲಾದೇಶದಿಂದ ಬಂದವರು!
* ಅವರ ಹೆಸರು ಹೇಳಬಲ್ಲಿರಾ?
ದಿಲೀಪ್ ಘೋಷ್:ಹೆಸರು ನೆನಪಿಲ್ಲ. ಆದರೆ ಅಸ್ಸಾಂ ಜನರಿಗೆ ಇದರ ಬಗ್ಗೆ ಗೊತ್ತಿದೆ. ಒಂದು ವಿಷಯ ಹೇಳಿ. ಬೋಡೋ ಆಂದೋಲನ ಆರಂಭ ಆಗಿದ್ದೇಕೆ? ಏಕೆಂದರೆ ಬಾಂಗ್ಲಾದೇಶಿಗಳು ಬಂದು ಅಸ್ಸಾಂನಲ್ಲಿ ಸ್ಥಳೀಯರ ಜಮೀನನ್ನು ಕಿತ್ತುಕೊಂಡದ್ದಕ್ಕೇ ಅಲ್ಲವೇ? ಕಾಂಗ್ರೆಸ್ ಪಕ್ಷ ಈ ಬಾಂಗ್ಲಾದೇಶಿಗಳಿಗೆ ಅಸ್ಸಾಂನಲ್ಲಿ ಭದ್ರತೆ ನೀಡಿತು. ಈಗ ಸ್ಥಳೀಯ ಬೋಡೋ ಜನಾಂಗ ಬಿಜೆಪಿಯೊಂದಿಗಿದೆ. ಏಕೆಂದರೆ ನಾವು ಅವರಿಗೆ ಭದ್ರತೆ ಒದಗಿಸುತ್ತಿದ್ದೇವೆ.
*ಹಾಗಿದ್ದರೆ ಬಾಂಗ್ಲಾದೇಶಿ ಹಿಂದೂಗಳ ಕಥೆಯೇನು? ಅವರೂ ಭಾರತಕ್ಕೆ ಬರುತ್ತಿದ್ದಾರಾ?
ದಿಲೀಪ್ ಘೋಷ್:ಬಾಂಗ್ಲಾದೇಶದಲ್ಲಿ ಅವರ ಆಸ್ತಿ ಮತ್ತು ಜೀವಕ್ಕೆ ಅಪಾಯವಿದೆ. ಅವರ ಮಂದಿರಗಳನ್ನು ನಾಶ ಮಾಡಲಾಗುತ್ತಿದೆ. ಹೆಣ್ಣುಮಕ್ಕಳನ್ನು ಅಪಹರಿಸಲಾಗುತ್ತಿದೆ. ಹೀಗಾಗಿ ಅವರು ಭಾರತಕ್ಕೆ ಬಂದರೆ ಅರ್ಥ ಮಾಡಿಕೊಳ್ಳಬಹುದು. ಆದರೆ ಬಾಂಗ್ಲಾದೇಶಿ ಮುಸಲ್ಮಾನರೇಕೆ ಬರುತ್ತಿದ್ದಾರೆ ಎನ್ನುವುದು ನಮ್ಮ ಪ್ರಶ್ನೆ. ಅವರಿಗಾಗಿಯೇ ಪ್ರತ್ಯೇಕ ರಾಷ್ಟ್ರ ಸಿಕ್ಕಾಯಿತಲ್ಲವೇ?
*ಅಸ್ಸಾಂನ ಜನರು ತಮ್ಮ ರಾಜ್ಯಕ್ಕೆ ಬಾಂಗ್ಲಾದೇಶಿ ಹಿಂದೂಗಳು ಕೂಡ ಬರಬಾರದು ಎಂದು ಬಯಸುತ್ತಿದ್ದಾರಲ್ಲ?
ದಿಲೀಪ್ ಘೋಷ್:ಮಹಾರಾಷ್ಟ್ರದವರಿಗೆ ಬಿಹಾರಿಗಳು ಬೇಡ. ಏಕೆ ಹೇಳಿ? ಏಕೆಂದರೆ ಒಂದು ರಾಜ್ಯದ ಜನರು ಇನ್ನೊಂದು ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಾಗ ಈ ರೀತಿ ಆಗುತ್ತದೆ. ತಮ್ಮ ಹಕ್ಕು ಕಳೆದುಕೊಳ್ಳಲು ಯಾರಿಗೂ ಇಷ್ಟವಿರುವುದಿಲ್ಲವಲ್ಲ. ಆದರೆ ಬಾಂಗ್ಲಾದೇಶ ಸಂಪೂರ್ಣವಾಗಿ ಇನ್ನೊಂದು ರಾಷ್ಟ್ರ. ಇದೇ ಅಸ್ಸಾಂ ಜನರ ಅಸಮಾಧಾನಕ್ಕೆ ಕಾರಣ. ತಮ್ಮ ನೆಲದಲ್ಲೇ ತಾವು ಎಲ್ಲಿ ಅಲ್ಪಸಂಖ್ಯಾತರಾಗಿಬಿಡುತ್ತೇವೋ ಎಂಬ ಭಯ ಅಸ್ಸಾಮಿಯರಿಗಿದೆ.
(ಕೃಪೆ: ರೀಡಿಫ್ ಜಾಲತಾಣ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar:ಉಳಿದ ಕಡೆ ಸಚಿವರ ಕುಟುಂಬಕ್ಕೆ ಟಿಕೆಟ್ ಕೊಟ್ಟರು, ಕೋಲಾರದಲ್ಲಿ ಮಾತ್ರ ಏಕೆ ಹೀಗೆ?
Elections ಹೊಸದಲ್ಲ, ಸ್ಪರ್ಧೆ ಮಾತ್ರ ಹೊಸದು: ಮೃಣಾಲ್ ಹೆಬ್ಬಾಳ್ಕರ್
ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…
ಪ್ರತೀ ಊರಲ್ಲೂ ಗುಣಮುಖರಾದ 10ರಿಂದ 20 ಹೃದ್ರೋಗಿ ಕುಟುಂಬಗಳಿವೆ, ಅವರೇ ಕಾರ್ಯಕರ್ತರು
S. T. Somashekhar; ಇಷ್ಟೆಲ್ಲ ಅವಮಾನ ಆದ ಮೇಲೆ ಅಲ್ಲಿದ್ದು ಏನು ಮಾಡಲಿ?
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?